ಉಡುಪಿ; ವಾರಂತ್ಯದ ಕರ್ಫ್ಯೂಗೆ ವಿರೋಧ, ತಿರುಗಿಬಿದ್ದ ಶಾಸಕರು!
ಉಡುಪಿ; ಸೆಪ್ಟೆಂಬರ್ 05; ಕೊರೊನಾ ನಿಯಂತ್ರಣಕ್ಕಾಗಿ ಉಡುಪಿಯಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ ಸದ್ಯ ಶೇ 1ರ ಅಸುಪಾಸಿನ ಪಾಸಿಟಿವಿಟಿ ರೇಟಿಂಗ್ ಅಷ್ಟೇ ಇರುವ ಜಿಲ್ಲೆಗೆ ಯಾಕೆ ರೀತಿಯ ನಿಯಮ ಅಂತ ಆಡಳಿತ ಪಕ್ಷದ ಶಾಸಕರೇ ಗರಂ ಆಗಿದ್ದಾರೆ. ಸಾರ್ವಜನಿಕರು ಕರ್ಫ್ಯೂ ಅಗತ್ಯ ಇಲ್ಲ ಅಂತ ಜಿಲ್ಲಾಡಳಿತದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸದ್ಯ ಗಡಿ ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಕೇರಳದ ಗಡಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಿರುವ ಉಡುಪಿ ಜಿಲ್ಲೆಯಲ್ಲೂ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಸಂಬಳ ಕೇಳಿದ ಸಿಬ್ಬಂದಿ ವಜಾ ಮಾಡಿದ ಉಡುಪಿ ಬಿ. ಆರ್. ಎಸ್ ಆಸ್ಪತ್ರೆ
ವೀಕೆಂಡ್ ಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುವ ಕಾರಣ ಹಾಗೂ ರಾಜ್ಯಕ್ಕೆ ಹೋಲಿಸಿದಾಗ ಸರಾಸರಿ ರೇಟಿಂಗ್ ಹೆಚ್ಚಾಗಿದೆ ಅಂತ ಕಾರಣ ಕೊಟ್ಟು ಉಡುಪಿ ಜಿಲ್ಲೆಯಲ್ಲಿ ಸಪ್ಟೆಂಬರ್ 13ರವರೆಗೂ ನೈಟ್ ಕರ್ಫ್ಯೂ ಇರಲಿದೆ ಅಂತ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಉಡುಪಿಯಲ್ಲಿ ವಾರಾಂತ್ಯದ ಕರ್ಫ್ಯೂ; ಮಾರ್ಗಸೂಚಿ
ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮದುವೆ ಇನ್ನಿತರ ಶುಭ ಕಾರ್ಯಗಳಿಗೆ 400 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ಇದೆ. ಧಾರ್ಮಿಕ ಕ್ಷೇತ್ರದಲ್ಲಿ ಉತ್ಸವ, ಮೆರವಣಿಗೆಗಳಿಗೆ ಅವಕಾಶ ಇಲ್ಲ ಅಂತ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೇರಳದಿಂದ ಜಿಲ್ಲೆಗೆ ಬರುವವರು ಕಡ್ಡಾಯವಾಗಿ 72 ತಾಸಿನ ಒಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ತರಬೇಕು ಎಂದು ಉಡುಪಿ ಡಿಸಿ ಕೂರ್ಮಾ ರಾವ್ ಎಂ. ಹೇಳಿದ್ದಾರೆ. ನೆಗೆಟಿವ್ ವರದಿ ತಂದ ಬಳಿಕವೂ ಇಲ್ಲಿ ಒಂದು ವಾರ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಬೇಕು.
ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಹೊಸ ನಿಯಮ
ಜಿಲ್ಲೆಗೆ ಸಾಕಷ್ಟು ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ಬಳಿಕ ಪಾಸಿಟಿವ್ ವರದಿ ಬಂದ ನಂತರವೇ ಎಲ್ಲರಂತೆ ಓಡಾಬಹುದು ಎಂದು ಡಿಸಿ ಹೇಳಿದ್ದಾರೆ.
ಇನ್ನು ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರ ತಪಾಸಣೆಗಾಗಿ 8 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು ಇನ್ನೂ 6 ಚೆಕ್ ಪೋಸ್ಟ್ ಗಳನ್ನು ಹಾಕುತ್ತೇವೆ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಹೇಳಿದ್ದಾರೆ.
ಇದರ ನಡುವೆ ಉಡುಪಿ ಜಿಲ್ಲೆಯನ್ನು ವೀಕೆಂಡ್ ಕರ್ಪ್ಯೂ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯ ಸರ್ಕಾರ ಸೇರಿಸಿದ್ದನ್ನು ರದ್ದುಮಾಡಬೇಕು ಅಂತ ಉಡುಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ. ಈಗ ಸ್ವಲ್ಪ ವ್ಯವಹಾರ ವ್ಯಾಪಾರಗಳು ಚೇತರಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಕರ್ಫ್ಯೂ ಜಾರಿ ಮಾಡಿದರೆ ಸಮಸ್ಯೆ ಉಂಟಾಗಲಿದೆ ಎಂದು ಹೇಳಿದ್ದಾರೆ.
ಉಡುಪಿ ಜಿಲ್ಲೆ ಗಡಿ ಜಿಲ್ಲೆ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆ ಗಡಿ ಜಿಲ್ಲೆ. ಹಾಗಾಗಿ ಉಡುಪಿಯಲ್ಲಿ ವೀಕೆಂಡ್ ಕರ್ಪ್ಯೂ ಬೇಡ ಅಂತ ಹೇಳಿದ್ದಾರೆ. ಅಲ್ಲದೇ ಸಾರ್ವಜನಿಕರು ಕೂಡ ನಮ್ಮ ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್ ಇದೆ ವ್ಯಾಕ್ಸಿನೇಷನ್ ಕೂಡ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಹೀಗಾಗಿ ಯಾಕೆ ಕರ್ಫ್ಯೂ? ಅಂತ ಪ್ರಶ್ನಿಸಿದ್ದಾರೆ.
Recommended Video
ಒಟ್ಟಿನಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಬಗ್ಗೆ ಆಡಳಿತ ಪಕ್ಷದ ಶಾಸಕರೇ ತಿರುಗಿಬಿದ್ದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಹಿಂಪಡೆಯಲು ಒತ್ತಾಯ ಕೇಳಿಬಂದಿದ್ದು, ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ? ಎಂಬುವುದನ್ನು ಕಾದು ನೋಡಬೇಕಾಗಿದೆ.