ಸಂಪುಟ ವಿಸ್ತರಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು: ಈಶ್ವರಪ್ಪ
ಉಡುಪಿ, ಜನವರಿ 12: "ಶೇ. 50ರಷ್ಟು ಸಚಿವ ಸ್ಥಾನವನ್ನು ಅನ್ಯ ಪಕ್ಷಗಳಿಂದ ಬಂದವರಿಗೆ ನೀಡಬೇಕಾಗುತ್ತದೆ. ಚುನಾವಣೆಯಲ್ಲಿ ಗೆದ್ದವರು ಸಚಿವ ಸ್ಥಾನಕ್ಕೆ ಅಪೇಕ್ಷೆ ಪಡುವುದು ತಪ್ಪಲ್ಲ. ಆದರೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮಗಿದೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಸಚಿವರು ಉಡುಪಿಯ ಹೊಟೇಲ್ ಮಣಿಪಾಲ್ ಇನ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. "ಶೇ. 50ರಷ್ಟು ಕ್ಯಾಬಿನೆಟ್ ಸ್ಥಾನವನ್ನು ಅನ್ಯ ಪಕ್ಷಗಳಿಂದ ಬಂದವರಿಗೆ ನೀಡಬೇಕಾಗುತ್ತದೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಇದೆ" ಎಂದರು.
ಸಚಿವ ಸಂಪುಟ ವಿಸ್ತರಣೆ: ಯಾರು? ಎಲ್ಲಿ? ಏನಂದ್ರು?
"ಕೇಂದ್ರ ನಾಯಕರು ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಯಾರು ಸಚಿವರಾಗಬೇಕು? ಎಂದು ತೀರ್ಮಾನಿಸುತ್ತಾರೆ. ನಮ್ಮಲ್ಲಿ ಹೊಸ ಬಿಜೆಪಿ, ಹಳೇ ಬಿಜೆಪಿ ಎಂಬ ಪ್ರಶ್ನೆಯೇ ಬರುವುದಿಲ್ಲ. ಪಕ್ಷದ ಒಳಗೆ ಇರುವವರೆಲ್ಲರೂ ಬಿಜೆಪಿಯೇ" ಎಂದು ಈಶ್ವರಪ್ಪ ಸ್ಪಷ್ಟನೆ ನೀಡಿದರು.
ಸಂಕ್ರಾಂತಿಗೂ ಮುನ್ನ ಸಚಿವಾಕಾಂಕ್ಷಿಗಳಿಗೆ 'ಎಳ್ಳು-ಬೆಲ್ಲ': ಸಂಪುಟ ವಿಸ್ತರಣೆಗೆ ಕೊನೆಗೂ ಒಪ್ಪಿಗೆ
ಜನವರಿ 13ರ ಬುಧವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಯಾಗಲಿದೆ. ಮಧ್ಯಾಹ್ನ 3.50ಕ್ಕೆ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಯಾರು ಸಂಪುಟ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಂಪುಟ ವಿಸ್ತರಣೆ: 5 ಹಾಲೀ ಸಚಿವರಿಗೆ ಶುರುವಾಯಿತು ಢವಢವ..
ಲಸಿಕೆಯಲ್ಲಿ ರಾಜಕೀಯ ಬೇಡ
"ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಯಾವುದನ್ನು ವಿರೋಧಿಸಬೇಕು ಅನ್ನುವ ಪರಿಜ್ಞಾನ ಇಲ್ಲದ ವಿರೋಧ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿದೆ. ಯಾವುದರಲ್ಲಿ ರಾಜಕೀಯ ಮಾಡಬೇಕು ಅನ್ನೋದು ವಿಪಕ್ಷಗಳಿಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಪ್ರಪಂಚ ಮೆಚ್ಚುವ ರೀತಿಯಲ್ಲಿ ಕೋವಿಡ್ ನಿಯಂತ್ರಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಿಯಂತ್ರಣದಲ್ಲೂ ಯಶಸ್ವಿಯಾಗಿದ್ದೇವೆ. ಲಸಿಕೆ ಹಂಚಿಕೆ ವಿಚಾರದಲ್ಲಿ ಪಕ್ಷ, ಜಾತಿ ಯಾವುದನ್ನೂ ನೋಡಲ್ಲ. ಕಾಂಗ್ರೆಸ್ನವರು ಸಹಕಾರ ಕೊಟ್ಟರೆ ಸಂತೋಷ. ಸಹಕಾರ ಕೊಟ್ಟಿಲ್ಲ ಅಂದರೆ ನಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತೇವೆ" ಎಂದು ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಪಂಚ್
"ಸಿದ್ದರಾಮಯ್ಯ ಮತ್ತು ಹೆಚ್. ಡಿ.ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ. ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಡಿ. ಕೆ. ಶಿವಕುಮಾರ್ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಮೊದಲು ತಮ್ಮ ಸ್ಥಾನ ಉಳಿಸಿಕೊಳ್ಳಬೇಕು. ಸಿದ್ದರಾಮಯ್ಯರನ್ನು ಕಿತ್ತೆಸೆಯುವುದು ಹೇಗೆ ಅಂತ ಡಿಕೆಶಿ ಪ್ಲಾನ್ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ತುಂಬಾ ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನೇ ಮುಗಿಸಿದರು" ಎಂದು ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಕಂಗಾಲಾಗಿದ್ದಾರೆ
"ಬಿಜೆಪಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಸಿದ್ದು ಕಂಗಾಲಾಗಿದ್ದಾರೆ. ಸಿದ್ದರಾಮಯ್ಯ ಭಂಡತನದ ಮಾತನಾಡುತ್ತಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ. ನಾವು ನಾಲ್ಕು ಜನ ಇದ್ದಾಗ ವಿರೋಧ ಪಕ್ಷ ಏನು ಅಂತ ತೋರಿಸಿದ್ದೇವೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನೇ ನಿರ್ನಾಮ ಮಾಡಿದರು. ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ" ಎಂದು ಈಶ್ವರಪ್ಪ ಹೇಳಿದರು.
ಸಂಪುಟ ವಿಸ್ತರಣೆಯೋ, ಪುನಾರಚನೆಯೋ?
ಸಂಪುಟ ವಿಸ್ತರಣೆಗೆ ದಿನಾಂಕ, ಸಮಯ ನಿಗದಿಯಾಗಿದೆ. ಆದರೆ, ಯಾರು ಸಂಪುಟ ಸೇರಲಿದ್ದಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಸಂಪುಟ ವಿಸ್ತರಣೆಯೋ?, ಪುನಾರಚನೆಯೋ ಎಂಬ ಗುಟ್ಟನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಟ್ಟುಕೊಟ್ಟಿಲ್ಲ.