ಸತ್ಯ ನಿಮ್ಮ ಪರವಾಗಿದ್ರೆ, ನ್ಯಾಯಾಲಯಕ್ಕೆ ಹೋಗಿ:ಬಿಜೆಪಿಗೆ ಪ್ರಮೋದ್ ಮುತಾಲಿಕ್ ಸವಾಲು
Recommended Video
ಉಡುಪಿ, ಫೆಬ್ರವರಿ 11: ಪ್ರಖರ ಹಿಂದುತ್ವ ಹಾಗೂ ಪಬ್ ದಾಳಿಯಿಂದ ದೇಶಾದ್ಯಂತ ಸುದ್ದಿಯಾಗಿದ್ದ ಶ್ರೀರಾಮ ಸೇನೆ ಹಾಗೂ ಪ್ರಮೋದ್ ಮುತಾಲಿಕ್ ರಾಜಕೀಯದಿಂದ ದೂರ ಸರಿದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಯಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು , ಹೊಲಸು ರಾಜಕಾರಣದಲ್ಲಿ ಪ್ರಾಮಾಣಿಕತೆ, ಹಿಂದುತ್ವಕ್ಕೆ ಜನಬೆಂಬಲ ಇಲ್ಲ. ಗೂಂಡಾಗಿರಿ ಮತ್ತು ದುಡ್ಡೇ ಮಾನದಂಡವಾಗಿದೆ ಎಂದು ಕಿಡಿಕಾರಿದರು.
ವ್ಯಾಲೆಂಟೈನ್ಸ್ ಡೇ ಆಚರಣೆಗೆ ಪ್ರಮೋದ್ ಮುತಾಲಿಕ್ ವಿರೋಧ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಬೆಂಬಲ ಅನ್ನೋದು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೂರಕ್ಕೆ ನೂರು ಒಳ್ಳೇ ಕೆಲಸ ಮಾಡ್ತಿದ್ದಾರೆ. ಆದ್ರೆ ಬಿಜೆಪಿ ಪಾರ್ಟಿ ಇನ್ನೂ ಸುಧಾರಣೆ ಆಗಿಲ್ಲ ಎಂದು ವಿಷಾದವ್ಯಕ್ತಪಡಿಸಿದರು .
ರಾಜ್ಯ ರಾಜಕೀಯ ಅಸಹ್ಯಕರವಾಗಿದೆ. ಮೂರೂ ಪಕ್ಷ ಧಿಕ್ಕರಿಸಿ ಹೊಸ ಪಕ್ಷ ಮಾಡುವ ಅನಿವಾರ್ಯತೆಯಿದೆ. ಒಬ್ರು ಆಡಿಯೋ ಬಿಡುಗಡೆ ಮಾಡ್ತಾರೆ, ಮತ್ತೊಬ್ರು ನಾಳೆ ವಿಡಿಯೋ ಬಿಡುಗಡೆ ಮಾಡ್ತಾರಂತೆ. ವಿಡಿಯೋ ಇದ್ರೆ ಮೊದಲೇ ಯಾಕೆ ಬಿಡುಗಡೆ ಮಾಡಿಲ್ಲ? ಬಿಜೆಪಿಯವರು ಇನ್ನೂ ಮಾನನಷ್ಟ ಮೊಕದ್ದಮೆ ಯಾಕೆ ಹಾಕಿಲ್ಲ. ಸತ್ಯ ನಿಮ್ಮ ಪರವಾಗಿದ್ರೆ, ನ್ಯಾಯಾಲಯಕ್ಕೆ ಹೋಗಿ ಎಂದು ಬಿಜೆಪಿಗೆ ಮುತಾಲಿಕ್ ಸವಾಲು ಹಾಕಿದ್ದಾರೆ.