'ಕೊಳವೆ ಬಾವಿಗೆ ಜಲ ಮರುಪೂರಣವೇ ಈಗಿರುವ ದಾರಿ'
ಉಡುಪಿ, ಜೂನ್ 7: ಅವ್ಯಾಹತವಾಗಿ ಕೊರೆದ ಕೊಳವೆ ಬಾವಿಗಳಿಂದಾಗಿ ಅಂತರ್ಜಲ ಬರಿದಾಗುತ್ತಿದೆ ಎಂಬುದು ತಡವಾಗಿ ಅರಿವಾಗುತ್ತಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಬರಿದಾಗುತ್ತಿರುವುದರಿಂದ ಹಳೆಯ ಬೋರ್ ವೆಲ್ ಗಳಲ್ಲಿಯೂ ನೀರು ಸತತವಾಗಿ ಬತ್ತುತ್ತಿದ್ದು, ಹೊಸದಾಗಿ ತೋಡುತ್ತಿರುವ ಬೋರ್ವೆಲ್ ಗಳಲ್ಲಿ ನೀರು ಸಿಕ್ಕದೇ ವೈಫಲ್ಯ ಕಾಣುವಂತಾಗಿದೆ. ಈಗ ನೀರಿಗಾಗಿ ಪರೋಕ್ಷ ದಾರಿ ಹುಡುಕುವ ಸ್ಥಿತಿ ಎದುರಾಗಿದೆ.
ಈ ನಿಟ್ಟಿನಲ್ಲಿ, ಬತ್ತಿದ್ದ ಬೋರವೆಲ್, ಅನುಪಯುಕ್ತ ಬೋರ್ ವೆಲ್ ಗಳು ಮತ್ತು ಹೊಸತಾಗಿ ತೋಡುತ್ತಿರುವ ಬೋರ್ ವೆಲ್ ಗಳಿಗೆ ಜಲ ಮರುಪೂರಣ ವಿಧಾನವನ್ನು ವ್ಯವಸ್ಥಿತವಾಗಿ ಅಳವಡಿಸಿಕೊಂಡರೆ ಸಮೃದ್ಧ ನೀರು ತೆಗೆಯಲು ಸಾಧ್ಯವಿದೆ, ಅಂಕಿ ಅಂಶಗಳ ಪ್ರಕಾರ, ಅಂತರ್ಜಲ ಶೇಕಡ ಎಂಬತ್ತು ಭಾಗದಷ್ಟು ಬತ್ತಿ ಹೋಗಿದ್ದು, ಭೂಮಿಯ ಒಳಗಿನ ಪದರದಲ್ಲಿನ ಜಾಗದಲ್ಲಿ ನೀರನ್ನು ಮರು ನಿರ್ಮಿಸಬೇಕಾದರೆ, ಅಂತರ್ಜಲ ಹೆಚ್ಚಿಸಲು ಕೊಳವೆ ಬಾವಿಗಳಿಗೆ ನೀರು ಮರುಪೂರಣವೊಂದೇ ಈಗ ಉಳಿದಿರುವ ದಾರಿಯಾಗಿದೆ.
ಬೋರ್ ವೆಲ್ ನಲ್ಲಿ ಉಕ್ಕಿದ ಜಲ: ಪೂಜೆಯ ಪವಾಡ?
ಈ ದಾರಿಯಲ್ಲೇ ನಡೆಯುತ್ತಿರುವ ಚಿತ್ರದುರ್ಗದ ಜಲತಜ್ಞ ಡಾ. ಎನ್ ಜೆ ದೇವರಾಜ್ ರೆಡ್ಡಿ, ರಾಜ್ಯದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಕೊಳವೆ ಬಾವಿಗಳಿಗೆ ಜಲ ಮರುಪೂರಣ ವ್ಯವಸ್ಥೆ ಮಾಡಿ ನೀರು ಉಳಿಸುವ, ಅದರ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ದೇವರಾಜ್ ರೆಡ್ಡಿ ಮಾರ್ಗದರ್ಶನದಲ್ಲಿ ಇಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕರ್ಜೆಯ ಕಿರಣ್ ಶೆಟ್ಟಿಯವರ ಕೃಷಿ ತೋಟದಲ್ಲಿ ಬೋರ್ ವೆಲ್ ಗೆ ನೀರು ಮರುಪೂರಣದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನೈಜ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಾಯಿತು.
ಜಲಮರುಪೂರಣ ವ್ಯವಸ್ಥೆಯ ವಿಧಿವಿಧಾನಗಳನ್ನು ಜಲತಜ್ಞ ಡಾ ದೇವರಾಜ್ ವಿವರಿಸಿದರು. ಜಲಜಾಗೃತಿ ಯಶಸ್ವಿಯಾಗಬೇಕಾದರೆ ಮರು ಪೂರಣ ವ್ಯವಸ್ಥೆಯನ್ನು ಸರ್ಕಾರ ಕಡ್ಡಾಯಗೊಳಿಸಬೇಕು, ಈ ವಿಷಯದಲ್ಲಿ, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ವ್ಯಾಪಕ ಆಂದೋಲನ ಕೈಗೊಳ್ಳಬೇಕಾಗಿದೆ ಎಂದರು.
ಖಾಸಗಿ ಬೋರ್ ವೆಲ್ ಹೊಂದಿರುವ ಪ್ರತಿಯೊಬ್ಬರು ಮತ್ತು ಸರ್ಕಾರಿ ವಶದಲ್ಲಿರುವ ಪ್ರತಿಯೊಂದು ಬೋರ್ ವೆಲ್ ಗಳಿಗೆ ಜಲಮರುಪೂರಣ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಮುಂದೆ ಬರುವ ದಿನಗಳಲ್ಲಿ ಜಲಕ್ಷಾಮದಂತಹ ಮಹಾ ಅಪಾಯದಿಂದ ಪಾರು ಮಾಡಿಕೊಳ್ಳಲು ಸಾಧ್ಯವಿದೆ ಎಂಬುದು ಅವರ ಅಭಿಪ್ರಾಯ.
ಬೋರ್ವೆಲ್ಗಳ ಸಂಖ್ಯೆ ದುಪ್ಪಟ್ಟು,ದರವೂ ಹೆಚ್ಚು, ಹೊಸತಕ್ಕೆ ಅವಕಾಶ ಕೊಡ್ಬೇಕಾ?
ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿ ಎನ್ನುವ ಅವ್ಶೆಜ್ಞಾನಿಕ ಕ್ರಮವನ್ನು ಕೈ ಬಿಟ್ಟು ಪ್ರತಿಯೊಂದು ಬೋರ್ ವೆಲ್ ಗಳನ್ನು ಸದ್ಬಳಕೆ ಮಾಡಿಕೊಂಡು, ಜಲ ಮರುಪೂರಣ ವ್ಯವಸ್ಥೆ ಅಳವಡಿಸಿಕೊಂಡರೆ ಮುಂದಿನ ದಿನಗಳಲ್ಲಿ ನೀರು ಪಡೆಯಲು ಸಾಧ್ಯವಿದೆ. ಮುಂದೆ ಬರಬಹುದಾದ ಜಲಕ್ಷಾಮವನ್ನು ತಡೆಯಲು ಸಾಧ್ಯವಿದೆ ಎನ್ನುವುದು ಅವರ ಅನುಭವದ ಮಾತು.