ಉಡುಪಿಯಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ಆಟೋ, ಕ್ಯಾಬ್ ಗಳಿಗೆ ವಾರ್ನಿಂಗ್
ಉಡುಪಿ, ಜೂನ್ 26: ಉಡುಪಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವ ಆಟೋ, ಕ್ಯಾಬ್ ಗಳಿಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ. ಆಟೋ, ಕ್ಯಾಬ್ ಗಳಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸುರಕ್ಷೆ ವಿಚಾರವಾಗಿ ಉಡುಪಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ಈ ಸಭೆಯಲ್ಲಿ ಆಟೋ, ಕ್ಯಾಬ್ ಚಾಲಕ, ಮಾಲೀಕರ ಸಭೆಯ ನೇತೃತ್ವವನ್ನು ಶಾಸಕ ರಘುಪತಿ ಭಟ್ ವಹಿಸಿದ್ದರು. ಈ ಸಾಲಿನ ಶಾಲಾ ಕಾಲೇಜು ಪ್ರಾರಂಭವಾದ ಬಳಿಕ ಆಟೋ ಮತ್ತು ಕ್ಯಾಬ್ ಚಾಲಕರ ನಿರ್ಲಕ್ಷ್ಯದ ವಿರುದ್ಧ ಪೋಷಕರ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತುರ್ತಾಗಿ ಸಭೆ ಕರೆಯಲಾಗಿತ್ತು.
ಉಡುಪಿಯಲ್ಲಿ ದ್ವಿಚಕ್ರ ವಾಹನಗಳ ಶೋ ರೂಮ್ ಗೆ ಬೆಂಕಿ , ಭಾರೀ ನಷ್ಟ
ಆಟೋದಲ್ಲಿ 6 ವಿದ್ಯಾರ್ಥಿಗಳಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯಬಾರದು ಎಂಬ ನಿಯಮ ಇದೆ. ಆಟೋಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರು ಹೆಚ್ಚು ಪೋಷಕರಿಂದ ಕೇಳಿ ಬಂತು. ಈ ಕುರಿತು ಸಮಾಲೋಚನೆ, ವಿಚಾರ ವಿನಿಮಯ ನಡೆಯಿತು. ನಿಯಮ ಪಾಲಿಸುವಂತೆ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಮಕ್ಕಳ ಸುರಕ್ಷೆ ವಿಷಯದಲ್ಲಿ ಯಾವುದೇ ರಾಜಿ ಮಾಡದೆ ನಿಯಮ ಪಾಲಿಸುವಂತೆ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಲಾಯಿತು. ಪ್ರತೀ ಆಟೋ, ಕ್ಯಾಬ್ ಗಳಲ್ಲಿ ಸಂಚರಿಸುವ ಮಕ್ಕಳ ಹೆಸರು, ರಕ್ತದ ಗುಂಪು ಸಹಿತ ಪ್ರತಿಯೊಂದನ್ನೂ ತೂಗು ಹಾಕಬೇಕು ಎಂದೂ ತಾಕೀತು ಮಾಡಲಾಯಿತು.