ಅದ್ದೂರಿ ವಿಟ್ಲಪಿಂಡಿ ಉತ್ಸವಕ್ಕೆ ಸಾಕ್ಷಿಯಾದ ಉಡುಪಿ
ಉಡುಪಿ, ಸೆಪ್ಟೆಂಬರ್ 15: ಸಂಭ್ರಮದ ಕೃಷ್ಣಾಷ್ಟಮಿಗೆ ಅದ್ಧೂರಿಯ ತೆರೆ ಬಿದ್ದಿದೆ. ಕೃಷ್ಣನೂರು ಉಡುಪಿಯಲ್ಲಿ ಕೃಷ್ಣಾಷ್ಟಮಿಯ ಪ್ರಯುಕ್ತ ನಡೆದ ವಿಟ್ಲಪಿಂಡಿ ಉತ್ಸವ ಸಂಪನ್ನಗೊಂಡಿದೆ.
In Pics : ವಿಟ್ಲಪಿಂಡಿಯಲ್ಲಿ ಬೆಣ್ಣೆ ಕದಿಯಲು ಬಂದ ಬಾಲಕೃಷ್ಣ
ಎರಡು ದಿನಗಳ ಕಾಲ ನಡೆಯುತ್ತಿದ್ದ ಕೃಷ್ಣಾಷ್ಟಮಿ ಗುರುವಾರ ವೈಭವದ ತೆರೆಕಂಡಿದೆ. ಬುಧವಾರ ಮಠದಲ್ಲಿ ನಡೆದಿದ್ದ ಕೃಷ್ಣಾಷ್ಟಮಿ ನಂತರ ಗುರುವಾರ ಬೆಳಿಗ್ಗೆಯಿಂದಲೇ ವಿಟ್ಲ ಪಿಂಡಿಯ ಸಂಭ್ರಮ ಎಲ್ಲೆಡೆ ಕಂಡುಬಂತು.
ಉಡುಪಿಯಲ್ಲಿ ವಿಟ್ಲಪಿಂಡಿ ಪ್ರಯುಕ್ತ ಮೊಸರು ಕುಡಿಕೆಗೆ ಚಾಲನೆ
ಅಷ್ಟಮಠದ ರಥಬೀದಿಯೆಲ್ಲವೂ ನಂದಗೋಕುಲದಂತಾಗಿತ್ತು. ಮುಂಜಾನೆಯಿಂದಲೇ ಮಠಕ್ಕೆ ಆಗಮಿಸಿದ ಭಕ್ತ ಸಾಗರ ಭಗವಾನ್ ಶ್ರೀ ಕೃಷ್ಣನನ್ನು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬೆಳಿಗ್ಗೆ ಆರಂಭವಾದ ಅನ್ನಸಂತರ್ಪಣೆ ಮಧ್ಯಾಹ್ನದವರೆಗೂ ನಡೆದಿತ್ತು.
ಉಡುಪಿಯ ನಾಡ ಹಬ್ಬ
ಕೃಷ್ಣನಿಗೆ ಪ್ರಿಯವಾದ ತಿನಿಸುಗಳಾದ ಚಕ್ಕುಲಿ, ಉಂಡೆಗಳನ್ನು ಭಕ್ತ ಸಮೂಹಕ್ಕೆ ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಗೋಕುಲದಲ್ಲಿ ಶ್ರೀಕೃಷ್ಣ ಜನಿಸಿದ ಸಮಯದಲ್ಲಿ ಆಚರಿಸಿದ ಸಂಭ್ರಮವೇ ಉಡುಪಿಯಲ್ಲಿ ಇಂದಿಗೂ ಆಚರಿಸಲಾಗುತ್ತಿರುವ ಕೃಷ್ಣ ಲೀಲೋತ್ಸವ ಅಥವಾ ವಿಟ್ಲ ಪಿಂಡಿ ಉತ್ಸವ ಎಂದು ಕರೆಯುತ್ತಾರೆ. ಉಡುಪಿಯ ಮಟ್ಟಿಗೆ ವಿಟ್ಲಪಿಂಡಿ ಅನ್ನೋದು ವೈಭವದ ನಾಡಹಬ್ಬದಂತಾಗಿದೆ.
ಸಹಸ್ರಾರು ಭಕ್ತರು ಭಾಗಿ
ಮಧ್ಯಾಹ್ನ ನಂತರ ಅಷ್ಟಮಠದ ರಥಬೀದಿಯಲ್ಲಿ ಆರಂಭವಾದ ಕೃಷ್ಣ ಲೀಲೋತ್ಸವವನ್ನು ಕಣ್ತುಂಬಿಕೊಳ್ಳಲೆಂದೇ ಸಹಸ್ರಾರು ಮಂದಿ ಭಕ್ತರು ನೆರೆದಿದ್ದರು. ಕೃಷ್ಣ ಮಠದ ಆವರಣದಿಂದ ಆರಂಭವಾದ ಮೆರವಣಿಗೆ ಹಾಗೂ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಶ್ರೀಕೃಷ್ಣನ ಮಣ್ಣಿನ ಉತ್ಸವ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಗೆ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು.
ರಂಗು ತಂದ ಹುಲಿವೇಷ
ಗೋಪಾಲರು ಮೊಸರು ಕುಡಿಕೆಯನ್ನು ಒಡೆಯುವ ಮೂಲಕ ಕೃಷ್ಣನ ಬಾಲಲೀಲೆಗಳನ್ನು ಜನತೆ ಮುಂದಿಟ್ಟರು. ಹುಲಿವೇಷ, ವಿವಿಧ ವೇಷಧಾರಿಗಳು ಮೆರವಣಿಗೆಗೆ ಇನ್ನಷ್ಟು ರಂಗು ತುಂಬಿದರು. ಅದ್ರಲ್ಲೂ ನದಿಗಳನ್ನು ರಕ್ಷಿಸಿ ಅಭಿಯಾನಕ್ಕೆ ಹುಲಿ ವೇಷಧಾರಿ ತಂಡವೊಂದು ಬೆಂಬಲಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಮಧ್ವಸರೋವರದಲ್ಲಿ ಮೂರ್ತಿ ವಿಸರ್ಜನೆ
ಕೃಷ್ಣನ ಉತ್ಸವ ಮೂರ್ತಿ ಹೊತ್ತಿದ್ದ ಚಿನ್ನದ ರಥದಲ್ಲಿ ನಿಂತು ಯತಿಗಳು ಚಕ್ಕುಲಿ, ಉಂಡೆಗಳನ್ನು ಭಕ್ತ ಸಮೂಹದತ್ತ ತೂರಿದರು. ಬಳಿಕ ಕೃಷ್ಣನ ಉತ್ಸವ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸುವ ಮೂಲಕ ಕೃಷ್ಣಾಷ್ಟಮಿ ಸಂಭ್ರಮವು ತೆರೆಕಂಡಿತು.
ಮೆರವಣಿಗೆ ಜತೆ ಹೆಜ್ಜೆ ಹಾಕಿದ ಪೇಜಾವರ ಶ್ರೀಗಳು
ವಿಶೇಷ ಅಂದ್ರೆ 86 ರ ಹರೆಯದ ಪರ್ಯಾಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ವಿಟ್ಲ ಪಿಂಡಿ ಉತ್ಸವದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪೇಜಾವರ ಶ್ರೀಗಳ ಪಾಲಿನ 80 ನೇ ಅಷ್ಟಮಿ ಆಚರಣೆ ಇದಾಗಿದ್ದು, ಪಂಚಮ ಪರ್ಯಾಯದ ಪೀಠಾಧಿಪತಿಯಾಗಿ ಹತ್ತನೇ ಕೃಷ್ಣಾಷ್ಟಮಿ ಉತ್ಸವದ ನೇತೃತ್ವವಹಿಸಿಕೊಂಡಿದ್ದು ಇನ್ನೊಂದು ವಿಶೇಷ. ಒಟ್ಟಿನಲ್ಲಿ ವಿಟ್ಲಪಿಂಡಿ(ಕೃಷ್ಣ ಲೀಲೋತ್ಸವ) ಉತ್ಸವವು ಅದ್ದೂರಿಯಾಗಿ ಮಠದ ಆವರಣದಲ್ಲಿ ಸಂಪನ್ನಗೊಂಡಿದೆ.