ಮಡಿಯಲ್ಲಿದ್ದುಕೊಂಡೇ ಸಂಪ್ರದಾಯಗಳನ್ನು ಮುರಿದಿದ್ದ ಪೇಜಾವರ ಶ್ರೀ
ಉಡುಪಿ, ಡಿಸೆಂಬರ್ 29: ಹಲವು ಧಾರ್ಮಿಕ ಕಟ್ಟುಪಾಡುಗಳನ್ನು ಒಡ್ಡಿಕೊಂಡಿದ್ದರೂ ಸಹ ಆಗಾಗ್ಗೆ ಅವುಗಳನ್ನು ಮುರಿದು ಸಮಾಜಕ್ಕೆ ಮಾದರಿಯಾಗಿದ್ದರು ಪೇಜಾವರ ಶ್ರೀಗಳು.
ಧರ್ಮ ಸಾಮರಸ್ಯ, ಜಾರಿ ಸಾಮರಸ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಶ್ರೀಗಳು ಅಷ್ಟಮಠದಲ್ಲಿ ಕೆಲವರ ವಿರೋಧದ ನಡುವೆಯೂ ಹಲವು ಭಿನ್ನ, ಮಠದ ಪದ್ಧತಿಗೆ ಪೂರ್ಣ ಹೊಸದಾದ ಕಾರ್ಯಗಳನ್ನು ಮಾಡಿ ಧೈರ್ಯ ಮೆರೆದಿದ್ದರು.
ದಲಿತ ಕೇರಿಗಳಲ್ಲಿ ಸಂಚರಿಸಿ ಅವರೊಂದಿಗೆ ಸಹಭೋಜನ ಮಾಡಿ ಜಾತಿಯನ್ನು ಮೀರುವ ಸಂದೇಶ ಕೊಟ್ಟಿದ್ದರು ಶ್ರೀಗಳು. ಅವರ ಈ ಕಾರ್ಯಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದರಾದರೂ ಅದಾವುದಕ್ಕೂ ಗಮನಕೊಟ್ಟಿರಲಿಲ್ಲ.
ಮಠದ ತಾರತಮ್ಯದ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ, ನನ್ನ ಜೀವ ಉಳಿದಿದ್ದೇ ದಲಿತನೊಬ್ಬನಿಂದ ಎಂದು ತಮ್ಮ ಬಾಲ್ಯದ ಕತೆಯನ್ನು ಶ್ರೀಗಳು ಹೇಳುತ್ತಿದ್ದರು.
ಶ್ರೀಗಳು ಮಠದಲ್ಲಿ ಮುಸ್ಲೀಮರಿಗಾಗಿ ಇಫ್ತಿಯಾರ್ ಕೂಟ ಆಯೋಜಿಸಿದ್ದಾಗಲಂತೂ ಭಾರಿ ಆಕ್ಷೇಪಗಳು ಕೇಳಿಬಂದಿದ್ದವು. ಆದರೆ ಶ್ರೀಗಳಿಗೆ ಧರ್ಮ, ಸಂಪ್ರದಾಯಕ್ಕಿಂತಲೂ ಸಾಮರಸ್ಯ, ಮಾನವೀಯತೆಯೇ ಮುಖ್ಯವಾಗಿತ್ತು. ಮಠದಲ್ಲಿ ಮುಸ್ಲೀಂರು ನಮಾಜು ಮಾಡಲು ಅವಕಾಶ ಮಾಡಿಕೊಟ್ಟರು ಶ್ರೀಗಳು.
ಮಡೆಸ್ನಾನವನ್ನು ಸಹ ವಿರೋಧಿಸಿದ್ದ ಶ್ರೀಗಳು, ಎಡೆ ಸ್ನಾನವೆಂಬ ಹೊಸ ಪದ್ಧತಿಯನ್ನು ಜಾರಿಗೆ ತಂದಿದ್ದರು. ಇದು ಸಹ ಅವರ ಹೊಸ ರೀತಿಯ ಯೋಚನೆಗಳಿಗೆ ಉದಾಹರಣೆಯಷ್ಟೆ.
ರಾಮ ಮಂದಿರ ನಿರ್ಮಾಣಕ್ಕೆ ತೀವ್ರ ಒತ್ತಾಯಕರಾಗಿದ್ದರೂ ಸಹ ಮುಸ್ಲಿಂ ಧರ್ಮದೊಂದಿಗೆ ಸಾಮಸರಸ್ಯ ಬೆಳೆಸುವ ಹಲವು ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು.
ಮಠದಲ್ಲಿ ಎಂದೂ ಸಂಪ್ರದಾಯ ಮುರಿಯದ ಶ್ರೀಗಳು ಮಠದ ಹೊರಗೂ ಮಾನವೀಯತೆ ಆಧಾರದಲ್ಲಿ ಆಧ್ಯಾತ್ಮ ಬಿತ್ತುವ ಕಾರ್ಯದಲ್ಲಿ ತೊಡಗಿದ್ದರು.