ಪೇಜಾವರ ಶ್ರೀ ಆರೋಗ್ಯ: ಸಂಜೆ ಐದು ಗಂಟೆ ವೈದ್ಯಕೀಯ ವರದಿ
ಉಡುಪಿ, ಡಿಸೆಂಬರ್ 21: ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಮಠದ ವಿಶ್ವೇಶ್ವರ ತೀರ್ಥರ ಆರೋಗ್ಯದ ಬಗ್ಗೆ ಮಣಿಪಾಲ ಆಸ್ಪತ್ರೆ ವೈದ್ಯರು ಐದು ಗಂಟೆ ವೇಳೆಗೆ ಆರೋಗ್ಯ ವರದಿ ಪ್ರಕಟಿಸಿದ್ದಾರೆ.
ಸಂಜೆ ಐದು ಗಂಟೆ ವೇಳೆಗೆ ಪ್ರಕಟಿಸಿರುವ ವರದಿಯಲ್ಲಿ, ಪೇಜಾವರ ಶ್ರೀಗಳ ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಶ್ರೀಗಳನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಹೇಳಲಾಗಿದೆ.
ಶ್ರೀಗಳು ಬಹು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದರೂ ಸಹ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ವೈದ್ಯರು ಹೇಳಿದ್ದಾರೆ.
ಶ್ರೀಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಡಿಸೆಂಬರ್ 20 ರಂದು ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶ್ರೀಗಳ ಆರೋಗ್ಯ ಸುಧಾರಣೆ ಆಗಲೆಂದು ರಾಜ್ಯದಾದ್ಯಂತ ಹಲವು ದೇವಸ್ಥಾನ, ಮಠಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಇಂದು ಸಿಎಂ ಯಡಿಯೂರಪ್ಪ ಮತ್ತು ಕೆಲವು ಸಚಿವರು ಕಸ್ತೂರ ಬಾ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ, ಶ್ರೀಗಳನ್ನು ನೋಡಲು ಯಾವ ಭಕ್ತರನ್ನೂ ಆಸ್ಪತ್ರೆಯ ಒಳಗೆ ಬಿಡಲಾಗುತ್ತಿಲ್ಲ.