ಗರುಡ ಪಕ್ಷಿ ಪ್ರಾಣ ಉಳಿಸಿದ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ
ಉಡುಪಿ, ಫೆಬ್ರವರಿ 10 : ದಯವಿಲ್ಲದ ಧರ್ಮ ಯಾವುದಯ್ಯ, ದಯೆಯೇ ಬೇಕು ಸರ್ವ ಪ್ರಾಣಿಗಳೆಲ್ಲರಲ್ಲಿ, ದಯವೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣರ ವಚನದ ಸಾಲುಗಳ ಮೂಲಾರ್ಥ ಉಡುಪಿಯಲ್ಲಿ ಸಾಕಾರಗೊಂಡಿದೆ.
ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ಗರುಡ ಪಕ್ಷಿಯೊಂದನ್ನು ಉಡುಪಿಯ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನರು ರಕ್ಷಿಸಿ, ಉಪಚರಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ಶುಕ್ರವಾರ ಮಠದ ಆವರಣದಲ್ಲಿ ಗಾಯಗೊಂಡು ಬಿದ್ದಿದ್ದ ಬೃಹದಾಕಾರದ ಗರುಡವೊಂದನ್ನು ರಕ್ಷಿಸುವ ಮೂಲಕ ಎಲ್ಲ ಪ್ರಾಣಿಗಳಲ್ಲೂ ದಯೆ ತೋರಬೇಕು ಎಂಬುದನ್ನು ವಿಶ್ವ ಪ್ರಸನ್ನರು ಆಚರಿಸಿ ತೋರಿಸಿದ್ದಾರೆ.
ಮಂಗಳೂರಿನಲ್ಲಿ ಫೆ. 9 ರಿಂದ 'ಬರ್ಡ್ ಫೆಸ್ಟಿವಲ್'
ಭಾರೀ ಗಾತ್ರದ ಗರುಡವೊಂದು ಎತ್ತರದ ತೆಂಗಿನ ಮರದಲ್ಲಿ ಕುಳಿತಿದ್ದಾಗ ಅಕಸ್ಮಾತ್ ಆಗಿ ಅಲ್ಲಿಂದ ಕೆಳಗೆ ಬಿದ್ದಿದೆ. ಬಿದ್ದ ರಭಸಕ್ಕೆ ರೆಕ್ಕೆಗಳಿಗೆ ಗಾಯವಾಗಿದೆ. ಕಣ್ಣು ಸರಿಯಾಗಿ ಕಾಣದೆ ಪೇಜಾವರ ಮಠದ ಆವರಣದಲ್ಲಿ ಒಂದೆಡೆ ಸುಮ್ಮನೆ ಕುಳಿತಿತ್ತು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ವಿಶ್ವಪ್ರಸನ್ನ ತೀರ್ಥರು ಮೊದಲ ಹಂತದ ವೈದ್ಯಕೀಯ ಉಪಚಾರ ಮಾಡಿ, ಆ ನಂತರ ಪ್ರಾಣಿ ವೈದ್ಯರ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿಕೊಟ್ಟಿದ್ದಾರೆ.
ಈಗಾಗಲೇ ಉಡುಪಿ ಬಳಿಯ ನೀಲಾವರದಲ್ಲಿ ಹಲವಾರು ಅನಾಥ ಗೋವುಗಳ ಆರೈಕೆ ಮಾಡುತ್ತಿರುವ ವಿಶ್ವ ಪ್ರಸನ್ನರು ಈಗ ಪಕ್ಷಿಯೊಂದನ್ನು ಕಾಪಾಡಿ ಸುದ್ದಿಯಲ್ಲಿದ್ದಾರೆ. ಪ್ರಾಣಿ ಸಾಧುವಾಗಿದ್ದರೂ ಕ್ರೂರವಾಗಿದ್ದರೂ ಕಷ್ಟದಲ್ಲಿರುವಾಗ ನೆರವಾಗಬೇಕು ಎಂಬ ಸಂದೇಶವನ್ನು ಸಾರಿದ್ದಾರೆ.