ಮತಾಂತರ ಅವಾಂತರ; ಉಡುಪಿಯಲ್ಲಿ ನಾಳೆ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ
ಉಡುಪಿ, ಸೆಪ್ಟೆಂಬರ್ 25: ರಾಜ್ಯದಲ್ಲಿ ಮಿನಿ ಫೈಟ್ ಎಂದೇ ಕರೆಸಿಕೊಳ್ಳುವ ಉಪಚುನಾವಣೆಯ ಬಿಸಿ ಏರುತ್ತಿದ್ದರೆ, ಕರಾವಳಿಯಲ್ಲಿ ಮತಾಂತರ ಸಂಘರ್ಷ ತಾರಕಕ್ಕೇರಿದೆ. ಉಡುಪಿಯಲ್ಲಿ ಇತ್ತೀಚೆಗೆ ನಡೆದ ಎರಡು ಮತಾಂತರ ಘಟನೆಗಳು ಹಿಂದೂ ಸಂಘಟನೆಗಳ ಕಣ್ಣು ಕೆಂಪು ಮಾಡಿವೆ.
ಇನ್ನೊಂದೆಡೆ ಹಿಂದೂ ಸಂಘಟನೆಗಳು ಏಸುವಿನ ಚಿತ್ರವನ್ನು ವಿರೂಪಗೊಳಿಸಿರುವುದು ಮತ್ತು ಪವಿತ್ರ ಶಿಲುಬೆಯ ಚಿತ್ರಕ್ಕೆ ನಿಷೇಧ ಚಿನ್ಹೆ ಹಾಕಿರುವುದು ಕ್ರೈಸ್ತ ಧರ್ಮೀಯರ ಮನಸ್ಸನ್ನೂ ಘಾಸಿಗೊಳಿಸಿದೆ. ಈ ಮಧ್ಯೆ ಮೂಲ್ಕಿಯಲ್ಲಿ ನಾಳೆ ವಿಶ್ವಹಿಂದೂ ಪರಿಷತ್ ವತಿಯಿಂದ ಮತಾಂತರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಮತಾಂತರ ತಡೆ ಮಸೂದೆ ಮಂಡನೆಗೆ ಮೋದಿ ಸರ್ಕಾರ ಸಜ್ಜು
ಹೌದು. ಉಡುಪಿ ಜಿಲ್ಲೆಯಲ್ಲೀಗ ಮತಾಂತರದ್ದೇ ಸದ್ದು. ಉಡುಪಿಯ ಕಾರ್ಕಳ, ಉದ್ಯಾವರ ಮತ್ತು ಮೂಲ್ಕಿಯಲ್ಲಿ ನಡೆದ ಮತಾಂತರ ಸಂಬಂಧಿ ಕಲಹಗಳು ಸಾಕಷ್ಟು ಸದ್ದು ಮಾಡುತ್ತಿವೆ. ಉದ್ಯಾವರದ ಹಿಂದೂ ಯುವಕ ಪ್ರದೀಪ್ ಎಂಬಾತನನ್ನು ಮೂಲ್ಕಿಯ ಡಿವೈನ್ ರೆಟ್ರಿಟ್ ಸೆಂಟರ್ ನಲ್ಲಿ ಮತಾಂತರ ಮಾಡಲಾಗಿದೆ ಎಂಬುದು ಹಿಂದೂಪರ ಸಂಘಟನೆಗಳ ಪ್ರಮುಖ ಆರೋಪ. ಆ ಯುವಕನನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತಂದು ಘರ್ ವಾಪಸಿಯನ್ನೂ ಮಾಡಿವೆ. ಆದರೆ ಅಂತಹದ್ದು ನಡೆದೇ ಇಲ್ಲ. ಇದೇ ವಿಷಯವನ್ನಿಟ್ಟುಕೊಂಡು ಹಿಂದೂ ಸಂಘಟನೆಯವರು ಏಸುಕ್ರಿಸ್ತನ ಭಾವಚಿತ್ರ ವಿರೂಪಗೊಳಿಸಿ, ಶಿಲುಬೆಗೆ ನಿಷೇಧ ಚಿನ್ಹೆ ಹಾಕಿ ನಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬುದು ಕ್ರೈಸ್ತ ಬಾಂಧವರ ದೂರು.
ಕೆಲವು ದಿನಗಳ ಹಿಂದೆ ಇಬ್ಬರು ಕ್ರೈಸ್ತಧರ್ಮದ ಯುವತಿಯರು ಕಾರ್ಕಳದಲ್ಲಿ ಮತ ಪ್ರಚಾರ ಮಾಡುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಈ ಸಂದರ್ಭ ಯುವತಿಯರನ್ನು ತರಾಟೆಗೆ ತೆಗೆದುಕೊಂಡ ಸಂಘಟನೆಗಳು, ಮತಾಂತರ ನಡೆಸದಂತೆ ತಾಕೀತು ಮಾಡಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದೆ ಎನ್ನಲಾದ ಮತಾಂತರದ ವಿರುದ್ಧ ನಾಳೆ ಮುಲ್ಕಿಯಲ್ಲಿ ವಿಶ್ವ ಹಿಂದೂ ಪರಿಷತ್ ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ.
ಈ ಹಿಂದೆ ಚುನಾವಣೆ ಹತ್ತಿರ ಬಂದಾಗಲೆಲ್ಲ ಗೋಹತ್ಯೆ ವಿರುದ್ಧ ಹೋರಾಟ ನಡೆಸುತ್ತಿದ್ದ ಹಿಂದೂಪರ ಸಂಘಟನೆಗಳು, ಈ ಬಾರಿ ಉಪಚುನಾವಣೆ ಹೊತ್ತಿಗೆ ಮತಾಂತರದ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿವೆ. ಮತಾಂತರ ಮತ್ತು ಮತಾಂತರದ ವಿರುದ್ಧದ ಹೋರಾಟ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕಿದೆ.