ಉಡುಪಿ; ವಿಶಾಲ ಗಾಣಿಗ ಹತ್ಯೆ, ಪಾಪಿ ಪತಿ ಕಂಪ್ಲೀಟ್ ಕಹಾನಿ!
ಉಡುಪಿ, ಜುಲೈ 21; ಆತನ ಎಲ್ಲಾ ಪ್ಲಾನ್ಗಳು ಸಕ್ಸಸ್ ಆಗಿದ್ದರೆ ಇಷ್ಟು ಹೊತ್ತಿಗೆ ಎಲ್ಲರ ಸಿಂಪತಿಗಳಿಸುತ್ತಿದ್ದ. ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯನಾಗುತ್ತಿದ್ದ. ಹೆಂಡತಿ ಸತ್ತ ದುಃಖದಲ್ಲಿ ಮತ್ತೊಂದು ಮದುವೆಯಾಗಿ ಬಿಂದಾಸ್ ಜೀವನ ನಡೆಸುತ್ತಿದ್ದ. ಆದರೆ ವಿಧಿ ಅವನ ಪ್ಲಾನ್ ಉಲ್ಟಾಮಾಡಿ ಕಹಿಸತ್ಯವನ್ನು ಜಗತ್ತಿಗೆ ತೆರೆದಿಟ್ಟಿದೆ.
ಇದು ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಉಡುಪಿಯ ವಿಶಾಲ ಗಾಣಿಗ ಕೊಲೆ ಪ್ರಕರಣದ ಸೂತ್ರಧಾರಿ, ವಿಶಾಲ ಗಾಣಿಗ ಪತಿ ರಾಮಕೃಷ್ಣ ಮಾಡಿದ ಹತ್ಯೆ ಪ್ಲಾನ್ ಹಿಂದಿನ ಕಥೆ. ದುಬೈಯಲ್ಲಿ ಕೂತು ಹೆಂಡತಿಯ ಹತ್ಯೆ ಮಾಡಿಸಿದ ಪಾಪಿ ಪತಿರಾಯ ಈಗ ಜೈಲಿನಲ್ಲಿ ರಾಗಿಮುದ್ದೆ ಮುರಿಯಬೇಕಿದೆ.
ಉಡುಪಿ; ಸ್ಫೋಟಕ ತಿರುವು ಪಡೆದ ವಿಶಾಲ ಗಾಣಿಗ ಕೊಲೆ ಕೇಸ್!
ಮನುಷ್ಯನಿಗೆ ಹಣದ ದುರಾಸೆ, ಕಾಮದ ವಾಂಚೆ ಅತಿಯಾದರೆ ಏನು ಮಾಡುತ್ತಾನೆ ಎನ್ನುವುದಕ್ಕೆ ರಾಮಕೃಷ್ಣ ಮಾಡಿದ ನೀಚತನದ ಕೃತ್ಯವೇ ಸಾಕ್ಷಿ. ಮನೆಯಲ್ಲಿ ಮುದ್ದಿನ ಹೆಂಡತಿ, ಕುತೂಂಡರೂ ಮುಗಿಯದಷ್ಟು ಆಸ್ತಿ ಇದ್ದರೂ ರಾಮಕೃಷ್ಣನ ಪರಸ್ತ್ರಿ ಮೋಹ ಅಮಾಯಕಿ ವಿಶಾಲ ಗಾಣಿಗಳ ಹತ್ಯೆಗೆ ಕಾರಣವಾಗಿದೆ.
ಚಿನ್ನದಾಸೆಗಾಗಿ ಮಹಿಳೆಯ ಹತ್ಯೆ; ದುಬೈನಲ್ಲಿದ್ದಾಕೆ ಊರಿಗೆ ಬಂದು ಹೆಣವಾಗಿದ್ದೇ ದುರಂತ
ತಾಳಿ ಕಟ್ಟಿದ ಪತ್ನಿಯನ್ನೇ ಹತ್ಯೆ ಮಾಡಿಸಿ, ತನ್ನದೇ ಪುಟ್ಟ ಕಂದಮ್ಮನನ್ನು ತಾಯಿ ಇಲ್ಲದ ತಬ್ಬಲಿ ಮಾಡಿ ಬಿಟ್ಟ ರಾಮಕೃಷ್ಣನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ರಾಮಕೃಷ್ಣ ಮಾಡಿದ ಹತ್ಯೆ ಯೋಜನೆಯನ್ನು ಉಡುಪಿ ಪೊಲೀಸರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜುಲೈ 12ರಂದು ವಿಶಾಲ ಗಾಣಿಗ ಹತ್ಯೆ ನಡೆದಿತ್ತು.
ಬ್ಯಾಂಕಿನೊಳಗೆ ನುಗ್ಗಿ ರೌಡಿ ಶೀಟರ್ ಬಬ್ಲಿ ಬರ್ಬರ ಹತ್ಯೆ
ಕೊಲೆ ಪ್ರಕರಣದ ಹಿನ್ನೋಟ
ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದ ವಿಶಾಲ ಗಾಣಿಗ 6 ವರ್ಷದ ಮಗಳ ಜೊತೆಗೆ ಜೂನ್ ತಿಂಗಳಾಂತ್ಯದಲ್ಲಿ ದುಬೈನಿಂದ ತವರಿಗೆ ಬಂದಿದ್ದರು. ಪತಿ ರಾಮಕೃಷ್ಣ ದುಬೈನಲ್ಲಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಕೋಟ್ಯಾಂತರ ಆಸ್ತಿಯನ್ನು ವಿಶಾಲ ಗಾಣಿಗ ಹೊಂದಿದ್ದರು. ಗಂಡ ಮತ್ತು ಮಗಳ ಜೊತೆಯೇ ಸುಂದರ ಸಂಸಾರ ಮಾಡುತ್ತಿದ್ದ ವಿಶಾಲ ಗಾಣಿಗ ಆಸ್ತಿ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ತವರಿಗೆ ಬಂದು, ಉಡುಪಿಯ ಬ್ರಹ್ಮಾವರದಲ್ಲಿರುವ ಸ್ವಂತ ಅಪಾರ್ಟ್ಮೆಂಟ್ನಲ್ಲಿ ತಂದೆ-ತಾಯಿಯ ಜೊತೆಗಿದ್ದರು.
ಜುಲೈ 12ರಂದು ಮಗಳ ಬರ್ತ್ ಡೇ ಹಿನ್ನಲೆಯಲ್ಲಿ ತಂದೆ-ತಾಯಿಯ ಮನೆಯಾದ ಕುಂದಾಪುರದ ಗುಜ್ಜಾಡಿಗೆ ನಾಲ್ವರೂ ಹೋಗಿದ್ದರು. ಆದರೆ ಬ್ಯಾಂಕ್ ಹೋಗುವ ಕಾರಣದಿಂದ ಗುಜ್ಜಾಡಿಯಿಂದ ಮತ್ತೆ ಬ್ರಹ್ಮಾವರಕ್ಕೆ ವಿಶಾಲ ಗಾಣಿಗ ಆಟೋ ದಲ್ಲಿ ಬಂದಿದ್ದರು. ಹೀಗೆ ಬಂದವರು ಬ್ಯಾಂಕ್ ಗೂ ಹೋಗದೇ ಮನೆಯವರ ಸಂಪರ್ಕಕ್ಕೂ ಸಿಗದೇ ಇದ್ದಾಗ, ವಿಶಾಲ ಗಾಣಿಗ ತಂದೆ ಮಗಳ ಫ್ಲ್ಯಾಟ್ ಗೆ ಬಂದು ನೋಡಿದಾಗ ಬೆಡ್ ರೂಂ ನಲ್ಲಿ ವಿಶಾಲ ಗಾಣಿಗ ಶವ ಪತ್ತೆಯಾಗಿತ್ತು.
ಒಂದೂ ಸುಳಿವು ಬಿಡದೇ ಹತ್ಯೆ
ಫ್ಲ್ಯಾಟ್ನಲ್ಲಿ ಒಂಟಿ ಮಹಿಳೆಯ ಹತ್ಯೆ ಕರಾವಳಿಯಲ್ಲಿ ಸಂಚಲನ ಮೂಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಂದಿಯನ್ನು ತೀವ್ರ ವಿಚಾರಣೆಯನ್ನೂ ಮಾಡಿದ್ದರು. ಆದರೆ ಕೊಲೆ ಆರೋಪಿಗಳು ಯಾವುದೇ ಸುಳಿವನ್ನು ಬಿಟ್ಟಿರಲಿಲ್ಲ. ವಿಶಾಲ ಗಾಣಿಗರನ್ನು ಕೇಬಲ್ನಲ್ಲಿ ಕತ್ತು ಬಿಗಿದು ಹತ್ಯೆ ಮಾಡಲಾಗಿತ್ತು. ಮೈ ಮೇಲಿದ್ದ ಚಿನ್ನವನ್ನು ಹಂತಕರು ದೋಚಿದ್ದರು. ಆದರೆ ಬೀರುನಲ್ಲಿದ್ದ ಚಿನ್ನಾಭರಣ ಹಾಗೆಯೇ ಇತ್ತು. ಮನೆಯ ಅಡುಗೆ ಕೋಣೆಯಲ್ಲಿ ಚಹಾದ ಲೋಟವೂ ಅರ್ಧ ತೊಳೆದ ಸ್ಥಿತಿಯಲ್ಲಿತ್ತು. ಹೀಗಾಗಿ ಇದು ಪರಿಚಯಸ್ಥರ ಕೆಲಸವೇ ಅಂದುಕೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದರು. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನೇತೃತ್ವದ ನಾಲ್ಕು ಪೊಲೀಸ್ ತಂಡ ಪ್ರಕರಣದ ತನಿಖೆ ಕೈಗೊಂಡಿತ್ತು.
ಅಮಾಯಕ ನಂತೆ ವರ್ತಿಸಿದ ಗಂಡ
ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ 4 ತಂಡಗಳಾಗಿ ಎಲ್ಲಾ ಆಯಾಮಗಳಲ್ಲಿ ತನಿಖೆ ಶುರು ಮಾಡಿದ ಪೊಲೀಸರು ಮೊದಲು ಚಿನ್ನ, ಹಣದ ದರೋಡೆ ಉದ್ದೇಶದಿಂದ ಕೊಲೆ ಮಾಡಿದ್ದು ಎಂದು ಸಂಶಯ ಇದ್ದರೂ ನಂತರ, ತನಿಖೆಯ ವೇಳೆ ಇದು ಕೌಟುಂಬಿಕ ಕಾರಣಕ್ಕಾಗಿ ನಡೆದ ಹತ್ಯೆ ಅನ್ನುವುದನ್ನು ಕಂಡುಕೊಂಡರು. ಉಡುಪಿ ಪೊಲೀಸರಿಗೆ ಸಿಕ್ಕಿದ ಬಲವಾದ ಸುಳಿವಿನ ಆಧಾರದಲ್ಲಿ, ಸುಪಾರಿ ಹಂತಕ ಸ್ವಾಮಿನಾಥ್ ಎಂಬುವವನ್ನು ಉತ್ತರ ಪ್ರದೇಶದ ಗೋರಖ್ಪುರ್ನಲ್ಲಿ ಬಂಧಿಸಿದ ಪೊಲೀಸರು, ವಿಚಾರಣೆ ವೇಳೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.
2 ಲಕ್ಷ ರೂಪಾಯಿ ಸುಪಾರಿ
ವಿಶಾಲ ಗಾಣಿಗ ಪತಿ ರಾಮಕೃಷ್ಣ ಈ ಕೊಲೆಗೆ 6 ತಿಂಗಳ ಹಿಂದೆ ದುಬೈನಲ್ಲೇ ಕುಳಿತು ಪ್ಲಾನ್ ರೂಪಿಸಿದ್ದ. ಹಂತಕರಿಗೆ 2 ಲಕ್ಷಕ್ಕೂ ಅಧಿಕ ಹಣ ನೀಡಿ ಸುಪಾರಿ ಕೊಟ್ಟಿದ್ದ. ಕಳೆದ ಮಾರ್ಚ್ ತಿಂಗಳಲ್ಲಿ ಊರಿಗೆ ಬಂದಾಗ ವಿಶಾಲ ಗಾಣಿಗಗೆ ಇದು ನನ್ನ ಪ್ರೆಂಡ್ಸ್ ಅಂತ ಹಂತಕರನ್ನು ಪರಿಚಯ ಕೂಡ ಮಾಡಿಸಿದ್ದ. ಹೆಂಡತಿಯನ್ನು ವ್ಯವಸಿತವಾಗಿ ಮುಗಿಸಬೇಕೆಂದು ಪ್ಲ್ಯಾನ್ ಮಾಡಿದ ಪತಿ ರಾಮಕೃಷ್ಣ ಕೊಲೆಯ ದಿನ ಹೆಂಡತಿಗೆ ತನ್ನ ಪ್ಲ್ಯಾನ್ ಪ್ರಕಾರನೇ ಪ್ಲ್ಯಾಟ್ ನಲ್ಲಿ ಒಬ್ಬಳೇ ಇರುವಂತೆ ನೋಡಿಕೊಂಡಿದ್ದಾನೆ. ಈಗ ಫ್ಲ್ಯಾಟ್ಗೆ ಸ್ನೇಹಿತರಿಬ್ಬರು ಬರ್ತಾರೆ. ಅವರಿಗೆ ಪಾರ್ಸೆಲ್ ಕೊಡು ಅಂತಾ ಹೇಳಿದ್ದಾನೆ. ಹೀಗೆ ರಾಮಕೃಷ್ಣ ಕಳುಹಿಸಿದ ಆ ಫ್ರೆಂಡ್ಸ್ ಗಳೇ ಉತ್ತರ ಭಾರತ ಮೂಲದ ಸುಪಾರಿ ಹಂತಕರು.
ಅಕ್ರಮ ಸಂಬಂಧಕ್ಕಾಗಿ ಹೆಂಡತಿಯ ಕೊಲೆ
ವಿಶಾಲ ಗಾಣಿಗ ಹತ್ಯೆಗೆ ಪತಿ ರಾಮಕೃಷ್ಣನಿಗೆ ಇದ್ದ ಅಕ್ರಮ ಸಂಬಂಧವೇ ಕಾರಣ. ರಾಮಕೃಷ್ಣನ ಅಕ್ರಮ ಸಂಬಂಧದಿಂದ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಅಲ್ಲದೇ ಆಸ್ತಿ ವಿಚಾರದಲ್ಲೂ ಗಲಾಟೆ ಆಗುತ್ತಲೇ ಇತ್ತು. ಇದೇ ದ್ವೇಷದಿಂದ ರಾಮಕೃಷ್ಣ ಪತ್ನಿಯನ್ನು ಕೊಲೆ ಮಾಡಿಸಿದ್ದಾನೆ ಅಂತಾ ತಿಳಿದುಬಂದಿದೆ. ಸದ್ಯ ಪೊಲೀಸರು ಪತಿ ರಾಮಕೃಷ್ಣ ಮತ್ತು ಸುಪಾರಿ ಹಂತಕ ಸ್ವಾಮಿ ನಾಥ್ ಎಂಬುವವನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.