"ಯಾರನ್ನು ನಾಶ ಮಾಡಲು ಹೊರಟಿದ್ದೀರಿ?"; ಸರ್ಕಾರಕ್ಕೆ ಅವಾಜ್ ಹಾಕಿದ ಉಡುಪಿ ಮಹಿಳೆ
ಉಡುಪಿ, ಮೇ 04: ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ ಈ ನಡೆಯನ್ನು ವಿರೋಧಿಸಿ ಉಡುಪಿಯಲ್ಲಿ ಮಹಿಳೆಯೊಬ್ಬರು ಸರ್ಕಾರವನ್ನು, ಸಿಎಂ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಡುಪಿಯ ಕಾಪು ತಾಲೂಕಿನ ಕಟಪಾಡಿಯ ಮಹಿಳೆ ಸುಲತಾ ಕಾಮತ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೋಟೆಲ್ ನಡೆಸುವ ಈ ವೃದ್ಧ ಮಹಿಳೆಯ ಮಾತುಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ಈ ಮಹಿಳೆ ವಿಡಿಯೋದಲ್ಲಿ ಏನೇನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ...
ಉಡುಪಿ: ಅತಿಯಾದ ಮದ್ಯ ಸೇವನೆಯಿಂದ ಯುವಕನ ಸಾವು
ಮದ್ಯ ಮಾರಾಟ ಆರಂಭಕ್ಕೆ ಮಹಿಳೆ ವಿರೋಧ
ಇಂದಿನಿಂದ ಮದ್ಯ ಮಾರಾಟ ಆರಂಭಿಸಿರುವ ಸರ್ಕಾರದ ನಡೆಗೆ ಈ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ದುಡಿದು ಸಂಪಾದಿಸೋಣ ಎಂದರೆ ಹೋಟೆಲ್ ತೆರೆಯಲು ಬಿಡಲಿಲ್ಲ. ಬಾರ್ ಗಳನ್ನು ತೆರೆಸಲು ಅನುಮತಿ ನೀಡಿದ ನಿಮಗೆ ಏನೂ ಅನ್ನಿಸುತ್ತಿಲ್ಲವಾ? ನಿಮಗೆ ನೈತಿಕತೆ ಇದೆಯೇ? ದುಡ್ಡು ಬರುತ್ತದೆ ಎಂದು ಇಂಥ ಕೆಲಸವನ್ನು ಸರ್ಕಾರ ಮಾಡಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.
|
"ಊಟಕ್ಕಿಲ್ಲದ ದುಡ್ಡು ಮದ್ಯಕ್ಕೆಲ್ಲಿಂದ ಬಂತು?"
ಸರ್ಕಾರವನ್ನು ಮಾತ್ರವಲ್ಲ, ಮದ್ಯಕ್ಕೆಂದು ಮುಗಿಬಿದ್ದಿರುವ ಜನರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ ಇವರು. ಇಷ್ಟು ದಿನ ಊಟಕ್ಕೆ ಹಣ ಇಲ್ಲದವರ ಹತ್ತಿರ ಇವತ್ತು ಎಲ್ಲಿಂದ ಮದ್ಯ ಖರೀದಿಗೆ ಹಣ ಬಂತು? ನಿನ್ನೆಯವರೆಗೆ ಉಚಿತ ಊಟಕ್ಕೆ ಸಾಲಲ್ಲಿ ನಿಂತವರು ಇವತ್ತು ವೈನ್ ಶಾಪ್ ಮುಂದೆ ನಿಂತಿದ್ದಾರೆ. ನಿನ್ನೆ ಇಲ್ಲದ ದುಡ್ಡು ಇವತ್ತು ಎಲ್ಲಿಂದ ಬಂತು? ಎಂದು ಕೇಳಿದ್ದಾರೆ.
"ಕುಡುಕರಿಗೆ ದಿನಸಿ ಏಕೆ ಕೊಟ್ರಿ?"
ಊಟಕ್ಕೆ ಇಲ್ಲ ಎಂದು ಕೂತು, ಮದ್ಯಕ್ಕೆ ದುಡ್ಡು ಸೇರಿಸಿ ಮುಗಿಬಿದ್ದಿರುವ ಕುಡುಕರಿಗೆ ನೀವೇಕೆ ದಿನಸಿ ಕೊಟ್ಟಿರಿ ಎಂದು ಸರ್ಕಾರವನ್ನು ಕೇಳಿದ್ದಾರೆ. ಅಕ್ಕಿ, ಹಣ್ಣು, ಹಂಪಲು ಎಲ್ಲವನ್ನೂ ನೀವು ಇಂಥವರಿಗೆ ಕೊಟ್ಟಿರಿ. ಇವರೆಲ್ಲ ಕೆಲಸಕ್ಕೆ ಹೋಗುತ್ತಾರಾ? ಇಂಥ ಸಮಯದಲ್ಲಿ ಸರ್ಕಾರ ಮದ್ಯದಂಗಡಿ ತೆರೆದಿದೆ. ಐನೂರು ಕೊಟ್ಟು ಕುಡಿಯಲು ಎಲ್ಲ ಹೋಗುತ್ತಿದ್ದಾರೆ. ಹೆಂಡತಿ, ಮಕ್ಕಳನ್ನೂ ಬೀದಿಗೆ ತಳ್ಳುತ್ತಾರೆ. ಸರ್ಕಾರಕ್ಕೆ ಬುದ್ಧಿ ಇಲ್ಲವಾ, ದುಡ್ಡು ಬರುತ್ತದೆ ಎಂದು ಇಂಥ ಕೆಲಸ ಮಾಡಬಹುದಾ? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
"ಯಾರನ್ನು ನಾಶ ಮಾಡಲು ಹೊರಟಿದ್ದೀರಿ?"
ಒಂದು ಹೊತ್ತು ಊಟಕ್ಕೆ ಗತಿ ಇಲ್ಲ ಎಂದು ಹೇಳಿದವರೆಲ್ಲ ಇಂದು ಐನೂರು ರೂಪಾಯಿ ಕೊಟ್ಟು ಮದ್ಯ ತೆಗೆದುಕೊಳ್ಳುತ್ತಿದ್ದಾರೆ. ಒಳ್ಳೆ ಕೆಲಸ ಮಾಡುವವರಿಗೆ ನೀವು ಸಹಾಯ ಮಾಡುವುದಿಲ್ಲ. ಕುಡಿಯಲು ಬಿಟ್ಟು ಯಾರನ್ನು ನಾಶ ಮಾಡಲು ಹೊರಟಿದ್ದೀರಿ? ನೀವು ಕೊರೊನಾ ನಾಶ ಮಾಡುತ್ತಿಲ್ಲ, ದೇಶವನ್ನೇ ನಾಶ ಮಾಡಲು ಹೊರಟಿದ್ದೀರಿ ಎಂದು ಅವಾಜ್ ಹಾಕಿದ್ದಾರೆ.