ಬಿಜೆಪಿ ಶಾಸಕ, ಕಾಂಗ್ರೆಸ್ ಮಾಜಿ ಸಚಿವರ ನಡುವೆ ವಾಗ್ಯುದ್ಧ
ಉಡುಪಿ, ಸೆಪ್ಟೆಂಬರ್ 05: ಬಿಜೆಪಿ ಶಾಸಕ ರಘುಪತಿ ಭಟ್ ಮತ್ತು ಕಾಂಗ್ರೆಸ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಧ್ಯೆ ರಾಜಕೀಯ ವಾಗ್ದಾಳಿ ಪ್ರಾರಂಭವಾಗಿದೆ.
ಪ್ರಮೋದ್ ಮಧ್ವರಾಜ್ ಅವರು ಲೋಕಸಭೆ ಚುನಾವಣೆ ಸಮಯದಲ್ಲಿ ತಾಂತ್ರಿಕ ಕಾರಣಕ್ಕೆ ಜೆಡಿಎಸ್ ಪಕ್ಷ ಸೇರಿದ್ದರು, ಕೆಲವು ದಿನಗಳ ಹಿಂದಷ್ಟೆ ಜೆಡಿಎಸ್ಗೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕ ರಘುಪತಿ ಭಟ್, 'ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿ ಗೇಟ್ ಓಪನ್ ಆಗಿದೆ' ಎಂದಿದ್ದರು.
ಜೆಡಿಎಸ್ಗೆ ರಾಜೀನಾಮೆ ನೀಡಿದ ಕಾಂಗ್ರೆಸ್ನ ಪ್ರಮೋದ್ ಮಧ್ವರಾಜ್!
ರಘುಪತಿ ಭಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮಧ್ವರಾಜ್, 'ಶಾಸಕ ರಘುಪತಿ ಭಟ್ ನನ್ನ ರಾಜಕೀಯ ನಡೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೂವುದು ಬೇಡ ಅದರ ಬದಲು ಅವರು ಕ್ಷೇತ್ರದ ಜನತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
'ರಘುಪತಿ ಭಟ್ ಅನೇಕ ಸುಳ್ಳುಗಳನ್ನು ಹೇಳಿ ಕಳೆದ ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಗೆದ್ದಿದ್ದಾರೆ ಅವರು ಕೊಟ್ಟ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. ಪ್ರಮುಖವಾಗಿ ತಾನು ಗೆದ್ದ 30 ದಿನಗಳ ಒಳಗೆ ಮರಳಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು ಆದರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ' ಎಂದರು.
ನಾನು ಶಾಸಕನಾಗಿ, ಮಂತ್ರಿಯಾಗಿ ಉಡುಪಿಗೆ ಮಂಜೂರು ಮಾಡಿ ಕಾಮಾಗಾರಿಗಳೇ ಮುಂದುವರೆಯುತ್ತಿವೆ ಹೊರತು ಹೊಸ ಯಾವುದೇ ಕಾಮಗಾರಿಗಳು ಬಂದಿಲ್ಲ. ಕೆಲವೊಂದು ತಾನು ಮಂಜೂರು ಮಾಡಿದ ಕಾಮಾಗಾರಿಗಳಿಗೂ ತಡೆಯೊಡ್ಡುವ ಕೆಲಸವನ್ನು ರಘುಪತಿ ಭಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ರಘುಪತಿ ಭಟ್ ಅವರು ಶಾಸಕನಾಗಿ ಈಗಾಗಲೇ ವಿಫಲವಾಗಿದ್ದಾರೆ, ಇನ್ನಾದರೂ ಅವರು ಕ್ಷೇತ್ರದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಿ. ನನ್ನ ರಾಜಕೀಯ ನಡೆಯ ಬಗ್ಗೆ ರಘುಪತಿ ಭಟ್ ಹೆಚ್ಚು ತಲೆಕೆಡಿಸಿಕೊಳ್ಳೂವುದು ಬೇಡ ಅದರ ಬದಲು ಅವರು ಕ್ಷೇತ್ರದ ಜನತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.