ಮಾಧ್ವಸಂಪ್ರದಾಯದಂತೆ ಶೀರೂರು ಶ್ರೀಗಳ ಅಂತ್ಯಸಂಸ್ಕಾರ:ಹೇಗೆ ನಡೆಯುತ್ತದೆ?
Recommended Video
ಉಡುಪಿ, ಜುಲೈ 19: ಫುಡ್ ಪಾಯ್ಸನ್ ಕಾರಣ ಇಂದು(ಜುಲೈ 19) ಬೆಳಿಗ್ಗೆ ದೈವಾಧೀನರಾದ ಉಡುಪಿಯ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಗಳ(55) ಅಂತ್ಯ ಸಂಸ್ಕಾರ ಮಾಧ್ವ ಸಂಪ್ರದಾಯದಂತೆ ನೆರವೇರಲಿದೆ.
ಉಡುಪಿ ಮಠದ ಸಂಪ್ರದಾಯದಂತೆ ಶ್ರೀಗಳ ಶರೀರವನ್ನು ಮಠಕ್ಕೆ ಕೊಂಡೊಯ್ದು ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ ಆರತಿ ಬೆಳಗಿ ದೇವರ ದರ್ಶನ ಮಾಡಿಸಲಾಗುತ್ತದೆ. ಬಳಿಕ ಅವರ ಪೂಜಾ ಸಾಮಾಗ್ರಿಗಳನ್ನು ಅವರ ಶರೀರದ ಜೊತೆ ಇರಿಸಿ ಬೃಂದಾವನ ನಿರ್ಮಿಸಿ ಅದರಲ್ಲಿ ಉಪ್ಪು, ಹತ್ತಿ, ಕಾಳುಮೆಣಸು, ಕರ್ಪೂರಗಳನ್ನು ತುಂಬಿಸಿ ಸಮಾಧಿ ಮಾಡಲಾಗುತ್ತದೆ.
ಶೀರೂರು ಶ್ರೀ ನಿಗೂಢ ಅಗಲಿಕೆ: ಅನುಮಾನ ವ್ಯಕ್ತಪಡಿಸಿದ ಆಪ್ತರು
ಶಿಷ್ಯ ಸ್ವೀಕಾರ ಸಂದರ್ಭದಲ್ಲಿ ಏನೆಲ್ಲಾ ವಿಧಿ ವಿಧಾನಗಳು ನಡೆಯುತ್ತವೆಯೋ ಅದೇ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಅಷ್ಠ ಮಠಗಳ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ಶಿಷ್ಯ ಸ್ವೀಕಾರ ವಿಚಾರ ಎಲ್ಲವೂ ದ್ವಂದ್ವ ಮಠಕ್ಕೆ ಸೇರುತ್ತದೆ. ಶೀರೂರು ಮಠಕ್ಕೆ ದ್ವಂದ್ವ ಮಠ ಸೋದೆ ಮಠ. ಈ ಹಿನ್ನೆಲೆಯಲ್ಲಿ ಎಲ್ಲಾ ಕ್ರಿಯಾ ವಿಧಿವಿಧಾನಗಳನ್ನು ಸೋದೆ ಮಠ ನಡೆಸಲಿದೆ.
ಫುಡ್ ಪಾಯ್ಸನ್ ಮೂಲಕ ಸ್ವಾಮೀಜಿ ದೈವಾಧೀನರಾಗಿರುವುದರಿಂದ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಅಂತ್ಯ ಸಂಸ್ಕಾರ ಮಾಧ್ವ ಸಂಪ್ರದಾಯದಂತೆ ನೆರವೇರಲಿದೆ.
ಕಳೆದ ಕೆಲದಿನಗಳಿಂದ ಅವರಿಗೆ ಅನಾರೋಗ್ಯ ಇತ್ತಾದರೂ ,ಕೊನೆಯ ಕೆಲ ದಿನಗಳಲ್ಲಿ ಸ್ವಾಮಿಯನ್ನು ಬಾಧಿಸಿದ್ದು ಪಟ್ಟದ ದೇವರ ವಿವಾದ ಮತ್ತು ಇತರೆ ಮಠಾಧೀಶರುಗಳ ಜೊತೆಗಿನ ಶೀತಲ ಸಮರ. ಒಂದರ್ಥದಲ್ಲಿ ಅಷ್ಟಮಠದಲ್ಲಿ ರೆಬೆಲ್ ಸ್ವಾಮೀಜಿ ಎನಿಸಿಕೊಂಡಿದ್ದ ಶೀರೂರು ಶ್ರೀಗಳು ಇತರೆ ಸ್ವಾಮೀಜಿಗಳ ಜೊತೆ ಮುನಿಸಿಕೊಂಡಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ.
'ನನ್ನ ಮಠದ ಪಟ್ಟದ ದೇವರನ್ನು ನಂಗೆ ಕೊಡಿ ಎಂದು ಶೀರೂರು ಸ್ವಾಮೀಜಿ ಕಳೆದ ಕೆಲ ದಿನಗಳಿಂದ ಪಟ್ಟು ಹಿಡಿದಿದ್ದರು. ಆದ್ರೆ ಶೀರೂರು ಶ್ರೀಗಳ ಮನವಿಗೆ ಇತರೆ ಸ್ವಾಮೀಜಿಗಳು ಸೊಪ್ಪು ಹಾಕಿರಲಿಲ್ಲ. ಕಳೆದ ಕೆಲವು ತಿಂಗಳಿಂದ ನಡೆಯುತ್ತಿದ್ದ ಈ ಜಟಾಪಟಿ ಇದೀಗ ನ್ಯಾಯಾಲಯದ ಮೆಟ್ಟಿಲು ಹತ್ತುವಲ್ಲಿಗೂ ಹೋಗಿತ್ತು. ಶಿರೂರು ಮಠದ ಪಟ್ಟದ ದೇವರಾದ ವಿಠಲಮೂರ್ತಿಯನ್ನು ವಾಪಾಸು ಪಡೆಯಲು ಅಷ್ಟಮಠಾಧೀಶರ ವಿರುದ್ಧ ಕ್ರಿಮಿನಲ್ ಕೇಸು ಹಾಕಲು ಶೀರೂರು ಲಕ್ಷ್ಮೀವರ ಸ್ವಾಮೀಜಿ ನಿರ್ಧರಿಸಿದ್ದು ಹಳೆಯ ಸುದ್ದಿ!
ಜನಸಾಮಾನ್ಯರ ಸ್ವಾಮೀಜಿ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳ ವ್ಯಕ್ತಿಚಿತ್ರ
ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕಳೆದಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿ ಕೊನೆಯ ಗಳಿಗೆಯಲ್ಲಿ ಹಿಂಪಡೆದಿದ್ದರು. ಅದಾದ ಬಳಿಕ ಇತರಮಠಾಧೀಶರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ, ಉಳಿದ ಮಠಾಧೀಶರ ಕೆಂಗಣ್ಣಿಗೂ ಗುರಿಯಾಗಿದ್ದರು. ಮಠದೊಳಗಿನ ಹುಳುಕು ಹೊರಬಿದ್ದಾಗ ಇತರ ಮಠಾಧೀಶರು ಸಹಜವಾಗಿಯೇ ಅಕ್ರೋಶಗೊಂಡಿದ್ದರು. ಶೀರೂರು ಸ್ವಾಮೀಜಿಯ ಬಾಯಿಗೆ ಬೀಗಹಾಕುವುದಕ್ಕೆ ಅಷ್ಟಮಠಾಧೀಶರು ಯೋಚಿಸಿದ್ದರು.
ಇದರ ಭಾಗವಾಗಿ ಶೀರೂರು ಮಠದ ಪಟ್ಟದ ದೇವರನ್ನೇ ಶಿರೂರುಶ್ರೀಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದರು. ಈ ಹಿಂದೆ ಶೀರೂರು ಶ್ರೀ ಅನಾರೋಗ್ಯ ಕಾರಣದಿಂದ ಶಿರೂರು ಶ್ರೀ ಪಟ್ಟದ ದೇವರನ್ನು ಅದಮಾರು ಶ್ರೀಗಳಿಗೆ ಹಸ್ತಾತಂತರಿಸಿದ್ದರು. ಬಳಿಕ ಫಲಿಮಾರು ಮಠಕ್ಕೆ ವರ್ಗಾವಣೆಗೊಂಡು ಪರ್ಯಾಯ ಫಲಿಮಾರುಮಠಾಧೀಶರೇ ಪೂಜೆ ಸಲ್ಲಿಸುತ್ತಿದ್ದರು. ಕೊನೆಗೂ ಶೀರೂರು ಶ್ರೀಗಳು ಎಷ್ಟೇ ಕೇಳಿದ್ರೂ ಪಟ್ಟದ ದೇವರನ್ನು ತನಗೆ ಮರಳಿ ಕೊಟ್ಟಿರಲಿಲ್ಲ. ಆರು ಮಠಾಧೀಶರು ಚರ್ಚಿಸಿ ಪಟ್ಟದ ದೇವರನ್ನು ಶೀರೂರು ಶ್ರೀಗಳಿಗೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಶೀರೂರು ಲಕ್ಷ್ಮೀವರ ತೀರ್ಥರು ತೀವ್ರವಾಗಿ ನೊಂದುಕೊಂಡಿದ್ದರು.
ಪರ್ಯಾಯ ಶ್ರೀಗಳಾದ ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿ ಸೇರಿದಂತೆ ಉಳಿದ ಸ್ವಾಮೀಜಿಗಳು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದರು. ಪಟ್ಟದದೇವರನ್ನು ಶೀರೂರು ಶ್ರೀಗಳಿಗೆ ಮರಳಿಸಬೇಕಾದ್ರೆ ಅವರು ಶಿಷ್ಯ ಸ್ವೀಕಾರ ಮಾಡ್ಬೇಕು ಎಂಬ ಧಾರ್ಮಿಕ ಶರತ್ತು ಒಡ್ಡಿದ್ದರು. ಶೀರೂರು ಶ್ರೀಗಳ ವಿರುದ್ಧ ಐವರು ಮಠಾಧೀಶರಿದ್ದು, ಶೀಘ್ರದಲ್ಲಿಯೇ ಪೇಜಾವರ ಹಿರಿಯಶ್ರೀಗಳು ಸಭೆ ನಡೆಸುವವರಿದ್ದರು.
ಇದನ್ನೆಲ್ಲ ಗಮನಿಸುತ್ತಿದ್ದಶಿರೂರು ಶ್ರೀಗಳು ಈ ವಿಚಾರದಲ್ಲಿ ಏಕ ಪಕ್ಷೀಯನಿರ್ಧಾರ ಕೈಗೊಳ್ಳದಂತೆ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಪಲಿಮಾರು ಮಠದ ಪಟ್ಟದದೇವರಾದ ರಾಮನ ಮೂರ್ತಿ ಅಥವಾ ಕೃಷ್ಣಮಠದ ಕಡಗೋಲು ಕೃಷ್ಣ ನನ್ನ ಸ್ವತ್ತಲ್ಲ. ಆದರೆ ವಿಠ್ಠಲ ದೇವರು ನನ್ನ ಸಂಪತ್ತು. ಪಟ್ಟದ ದೇವರನ್ನು ನೀಡದೇ ಹೋದರೆ ಕ್ರಿಮಿನಲ್ ಕೇಸ್ ಹಾಕಿಯಾದ್ರೂ ಪಟ್ಟದ ದೇವರನ್ನು ಪಡೆಯುತ್ತೇನೆ ಎಂದು ಕೊನೆಯ ದಿನಗಳಲ್ಲಿ ಶೀರೂರು ಶ್ರೀಗಳು ಹಠಕ್ಕೆ ಬಿದ್ದಿದ್ದರು.
ಆದ್ರೆ ಅವರ ವಿರುದ್ಧ ಒಂದಾದಾಗಿದ್ದ ಇತರೆ ಸ್ವಾಮೀಜಿಗಳು ಶೀರೂರು ಶ್ರೀಗಳ ಬೆದರಿಕೆಗೆ ಬಗ್ಗಿರಲಿಲ್ಲ. ಚುನಾವಣೆಗೆ ನಿಲ್ಲಲು ಹೊರಟಿದ್ದ ,ಇತರೆ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ ಎಂದಿದ್ದ ಶೀರೂರು ಶ್ರೀಗಳಿಗೆ ಈ ಬಾರಿ ಪಾಠ ಕಲಿಸಿಯೇ ತೀರುತ್ತೇವೆ ಎಂಬ ನಿರ್ಧಾರಕ್ಕೆ ಇತರೆ ಸ್ವಾಮೀಜಿಗಳು ಬಂದಿದ್ದರು. ಇದು ಲಕ್ಷ್ಮೀವರ ಶ್ರೀಗಳ ಆರೋಗ್ಯದ ಮೇಲೂ ಸಾಕಷ್ಟು ಪ್ರಭಾವ ಬೀರಿತ್ತು.
ಯಾಕಂದ್ರೆ ಪಟ್ಟದ ದೇವರನ್ನು ತೆಗೆದಿಟ್ಟು, ಶಿಷ್ಯ ಸ್ವೀಕಾರ ಮಾಡಿದರೆ ಮಾತ್ರ ಕೊಡುತ್ತೇವೆ ಎಂದು ಹೇಳಿದರೆ ಎಂಥ ಸ್ವಾಮೀಜಿಗೇ ಆದರೂ ಅಸ್ತಿತ್ವದ ಪ್ರಶ್ನೆ. ಹೀಗಾಗಿ ಶೀರೂರು ಶ್ರೀ ಕೊನೆಯ ದಿನಗಳಲ್ಲಿ ಏಕಾಂಗಿಯಾದರು. ಅವರ ಆರೋಗ್ಯ ಬಿಗಡಾಯಿಸಲು ಇದು ಒಂದು ಪ್ರಮುಖ ಕಾರಣವಾಯಿತು ಎಂಬುದು ಶೀರೂರು ಶ್ರೀಗಳ ಆಪ್ತರ ಅಭಿಪ್ರಾಯ.