ಶೀರೂರು ಶ್ರೀಗಳ ಮನೆಯಲ್ಲಿ ತಂಗುತ್ತಿದ್ದ ಆ ಮಹಿಳೆ ಯಾರು?
Recommended Video
ಉಡುಪಿ, ಜುಲೈ 21 : ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಮಾಡಿರುವ ಉಡುಪಿಯ ಶೀರೂರು ಮಠದ ಶ್ರೀಗಳಾದ ಲಕ್ಷ್ಮೀವರ ತೀರ್ಥರ ನಿಗೂಢ ಸಾವು ದಿನದಿಂದ ದಿನಕ್ಕೆ ಹೊಸಹೊಸ ರಹಸ್ಯಗಳನ್ನು ಬಯಲಿಗೆಳೆಯುತ್ತ ರೋಚಕವಾಗುತ್ತಿದೆ.
ಶೀರೂರು ಶ್ರೀಗಳ ಸಾವಿನ ಹಿಂದೆ ಮಹಿಳೆಯ ನೆರಳು?: ತನಿಖೆ ಚುರುಕು
ಶ್ರೀಗಳ ಸಾವಿನ ಹಿಂದೆ ಇಬ್ಬರು ಮಹಿಳೆಯರ ಕೈವಾಡವಿದೆ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಪತ್ರಿಕಾಗೋಷ್ಠಿಯಲ್ಲಿಯೇ ಹೇಳಿ ದಂಗು ಬಡಿಸಿದ್ದರು. ಇದೀಗ ಅದಕ್ಕೆ ಪುರಾವೆ ಎಂಬಂತೆ ಬ್ರಹ್ಮಾವರ ಮೂಲದ ಮಹಿಳೆಯನ್ನು ಪೊಲೀಸರು ವಿಚಾರಣೆಗೆಂದು ವಶಕ್ಕೆ ತೆಗೆದುಕೊಂಡಿದ್ದಾರೆ.
ಇವರು ಪ್ರತೀ ಸೋಮವಾರ ಮಠಕ್ಕೆ ಬಂದು ಉಳಿಯುತ್ತಿದ್ದರು, ಶ್ರೀಗಳಿಗೆ ಊಟ ತರುತ್ತಿದ್ದರು. ಅವರ ಜೊತೆ ಆಕೆಯ ತಾಯಿಯೂ ಬರುತ್ತಿದ್ದರು. ಮಹಿಳೆ ಅವರು ಮೂಲತಃ ಸಿರ್ಸಿಯವರಾಗಿದ್ದು, ಹಲವು ಬಾರಿ ರಾತ್ರಿ ಮೂಲಮಠದಲ್ಲಿ ತಂಗುತ್ತಿದ್ದರೆಂದು ತಿಳಿದುಬಂದಿದೆ.
ಕಾರು ದೂರ ನಿಲ್ಲಿಸಿ ಶೀರೂರು ಶ್ರೀಗಳಿಗೆ ಊಟ ತರುತ್ತಿದ್ದ ಮಹಿಳೆ ಯಾರು?
ಇತ್ತೀಚಿನ ದಿನಗಳಲ್ಲಿ ಮೂಲಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಮತ್ತು ಪ್ರತೀ ಸೋಮವಾರ ಕೆಲಸಗಾರರಿಗೆ ಸಂಬಳ ವಿತರಿಸುತ್ತಿದ್ದರು. ಸೋಮವಾರ ಕೂಡ ಅವರು ಮಠಕ್ಕೆ ಬಂದಿರುವುದು ಸಿಸಿಟಿವಿಗಳಲ್ಲಿ ದಾಖಲಾಗಿದೆ. ಪೋಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
ಎಲ್ಲಕ್ಕಿಂತ ಕುತೂಹಲಕಾರಿಯಾದ ಸಂಗತಿಯೆಂದರೆ, ಶೀರೂರು ಸ್ವಾಮೀಜಿ ತೊಡುತ್ತಿದ್ದ ಕಡಗ ಮಹಿಳೆ ಕೈಯ್ಯಲ್ಲಿ ಇರುವುದು ಮತ್ತು ಶ್ರೀ ತೊಡುತ್ತಿದ್ದ ಚಿನ್ನಾಭರಣಗಳನ್ನು ಮಹಿಳೆ ತೊಟ್ಟು ಫೋಟೋ ಶೂಟ್ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದಿನ ಹುನ್ನಾರವೇನು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ಒಬ್ಬರಲ್ಲಿ ಇಬ್ಬರು ಮಹಿಳೆಯರೊಂದಿಗೆ ಸಂಬಂಧ
ಶೀರೂರು ಶ್ರೀಗಳು ತಮಗೆ ಮಹಿಳೆಯೊಂದಿಗೆ ಸಂಬಂಧವಿದೆ ಮತ್ತು ತಮಗೊಬ್ಬ ಮಗನಿದ್ದಾನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೆ, ಅವರ ಸಾವಿನ ನಂತರ ಪೇಜಾವರ ಶ್ರೀಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳಿಗೆ ಒಬ್ಬರಲ್ಲ ಇಬ್ಬರು ಮಹಿಳೆಯರೊಂದಿಗೆ ಸಂಬಂಧವಿದೆ ಎಂದು ಬಹಿರಂಗವಾಗಿಯೇ ಹೇಳಿ ದಂಗು ಬಡಿಸಿದ್ದರು.
ಮಾನಿನಿ ಮಾತ್ರವಲ್ಲ ಮದ್ಯದ ಸಂಗವೂ ಇತ್ತು
ಅದೇ ಪತ್ರಿಕಾಗೋಷ್ಠಿಯಲ್ಲಿ ಶೀರೂರು ಶ್ರೀಗಳಿಗೆ ಮಾನಿನಿಯರ ಸಂಗ ಮಾತ್ರವಲ್ಲ, ಮದ್ಯದ ಹವ್ಯಾಸವೂ ಜಾಸ್ತಿಯಾಗಿಯೇ ಇತ್ತು ಎಂದು ಮುಕ್ತವಾಗಿಯೇ ಹೇಳಿಕೊಂಡಿದ್ದರು. ಅದೇ ಜಾಸ್ತಿಯಾಗಿ ರಕ್ತವಾಂತಿಯಾಗಿರಬಹುದು ಅಥವಾ ಮದ್ಯದಲ್ಲಿಯೇ ಒಳಗಿನವರೇ ವಿಷ ಸೇರಿಸಿರಬಹುದು ಎಂಬ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದರು.
ಅವರಲ್ಲಿ ಉತ್ತಮ ಗುಣಗಳೂ ಹಲವಾರಿದ್ದವು
ಮಾಧ್ಯಮಗಳಲ್ಲಿ ನಾನು ಹೇಳಿದ್ದನ್ನು ಸರಿಯಾಗಿ ವರದಿ ಮಾಡಿಲ್ಲ. ಶೀರೂರು ಶ್ರೀಗಳಲ್ಲಿ ಏನೇ ಕೆಟ್ಟ ಹವ್ಯಾಸಗಳಿದ್ದರೂ ಅವರಲ್ಲಿ ಹಲವಾರು ಉತ್ತಮ ಗುಣಗಳೂ ಇದ್ದವು. ಅವರು ಉತ್ತಮ ಕಲಾವಿದರಾಗಿದ್ದರು, ಉದಾರಿಯಾಗಿದ್ದರು, ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಆದರೆ ಕೆಲ ಕೆಟ್ಟ ಹವ್ಯಾಸಗಳಿಂದ ಸನ್ಯಾಸತ್ವಕ್ಕೆ ಮೋಸ ಮಾಡಿದ್ದರು. ಏನೇ ಆಗಲಿ, ಅವರಿಗೆ ಯಾವ ಮಠದ ಸ್ವಾಮಿಗಳೂ ವಿಷ ಹಾಕಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.
ಮಹಿಳೆಯ ವಿಚಾರಣೆಯಿಂದ ಸತ್ಯ ಸಂಗತಿ
ಈ ಪ್ರಕರಣದಲ್ಲಿ ಹೆಚ್ಚಾಗಿ ಕಾಡುತ್ತಿರುವುದು ಆ ಎರಡನೇ ಮಹಿಳೆಯ ಪಾತ್ರ. ಬಲ್ಲ ಮೂಲಗಳ ಪ್ರಕಾರ ಬ್ರಹ್ಮಾವರದ ಆ ಮಹಿಳೆ ಮೂಲಮಠಕ್ಕೆ ಆಗಾಗ ಬಂದು ಹೋಗುತ್ತಿದ್ದರು. ಕಾರಲ್ಲಿ ಬಂದು ದೂರದಲ್ಲಿಯೇ ನಿಲ್ಲಿಸಿ ನಡೆದುಕೊಂಡು ಮಠಕ್ಕೆ ಬರುತ್ತಿದ್ದರು. ಈಗ ಆ ಮಹಿಳೆಯನ್ನು ವಿಚಾರಣೆಗೆ ತೆಗೆದುಕೊಳ್ಳಲಾಗಿದ್ದು, ತನಿಖೆಯ ನಂತರವಷ್ಟೇ ಸತ್ಯ ಸಂಗತಿ ಹೊರಬರಬೇಕಿದೆ.
ವಿವಾದದ ಬಿರುಗಾಳಿ ಎಬ್ಬಿಸಿದ್ದ ಶೀರೂರು ಶ್ರೀ
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಶೀರೂರು ಶ್ರೀಗಳು ಇತರ ಮಠಗಳ ಸ್ವಾಮೀಜಿಗಳ ಬಗ್ಗೆ ಮಾತಾಡಿದ್ದರ ವಿಡಿಯೋವೊಂದು ಭಾರೀ ವಿವಾದ ಎಬ್ಬಿಸಿತ್ತು. ತಮಗೆ ಮಹಿಳೆಯ ಸಂಗ ಇರುವುದು ಅವರೇನೋ ಒಪ್ಪಿಕೊಂಡಿದ್ದರು, ಆದರೆ, ಇತರ ಮಠಗಳ ಸ್ವಾಮೀಜಿಗಳಿಗೂ ಮಕ್ಕಳಿವೆ ಎಂದು ಹೇಳಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಆದರೆ, ಆ ಮಾತು ಆಡುವಾಗ ಅವರು ಮದಿರೆಯ ಪ್ರಭಾವಕ್ಕೆ ಒಳಗಾಗಿದ್ದರೆಂದು ಹೇಳಲಾಗಿತ್ತು. ಅಲ್ಲದೆ, ಅವರು ಮಾತುಗಳು ಕೂಡ ಸ್ಪಷ್ಟವಾಗಿರಲಿಲ್ಲ.