ಅವಿಸ್ಮರಣೀಯ 2020: ಕೃಷ್ಣನಗರಿ ಉಡುಪಿಗೆ ಸಿಹಿ-ಕಹಿ
ಉಡುಪಿ: 2020 ನೇ ವರ್ಷದ ಅಂತ್ಯದಲ್ಲಿ ನಾವಿದ್ದೇವೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೂ ನೋಡಿದರೆ ಅಂತಹ ಹೇಳಿಕೊಳ್ಳುವಂತಹ ಧನಾತ್ಮಕ ಘಟನೆಗಳು ನಡೆದಿದ್ದು ಕಡಿಮೆ ಎಂದು ಹೇಳಬಹುದು. ಇಡೀ ಜಗತ್ತಿಗೆ ದುರಂತಗಳ ಸರಮಾಲೆಯನ್ನೇ ತಂದ ವರ್ಷ ಇದು. ಮುಖ್ಯವಾಗಿ ಕೊರೊನಾ ಮಹಾಮಾರಿ ವರ್ಷಪೂರ್ತಿ ಜನರನ್ನು ಹಲವು ದುರಂತಗಳ ಕೂಪಕ್ಕೆ ತಳ್ಳಿತು. ಕೊರೊನಾ ಮಹಾಮಾರಿಯ ನೇರ ಮತ್ತು ಪರೋಕ್ಷ ಪರಿಣಾಮಗಳು ಘೋರವಾಗಿದ್ದವು.
Recommended Video
ಕೊರೊನಾ ಸೋಂಕಿನ ಹೊರತಾಗಿಯೂ ಕೃಷ್ಣನಗರಿ ಉಡುಪಿ ಜಿಲ್ಲೆ ಹಲವು ಸಿಹಿ-ಕಹಿ ಘಟನಾವಳಿಗಳಿಗೆ ಸಾಕ್ಷಿಯಾಯಿತು. ಈ ವರ್ಷದ ಪ್ರಾರಂಭದಲ್ಲಿ ಅಂದರೆ ಜನವರಿಯಲ್ಲಿ ರಾಜ್ಯದ ನಾಡಹಬ್ಬ ಎಂದೇ ಕರೆಸಿಕೊಳ್ಳುವ ಪರ್ಯಾಯ ಮಹೋತ್ಸವ ನಡೆಯಿತು.
ಪರ್ಯಾಯ ಸಡಗರ
ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭವಾದದ್ದು ಈ ವರ್ಷದ ಜನವರಿಯಲ್ಲಿ. ಪಲಿಮಾರು ಶ್ರೀಗಳಿಂದ, ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಿದರು.
ವಿಶೇಷ: ಪ್ರವಾಸಿಗರ ಫೇವರಿಟ್ ತಾಣ ಮಲ್ಪೆಯ ಸೀ ವಾಕ್
ಜನವರಿ 18ರಂದು ಮುಂಜಾನೆ ಉಡುಪಿ ಕೃಷ್ಣಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ. ಶನಿವಾರ ಪ್ರಾತಃಕಾಲ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭಗೊಂಡಿತು. ಅದಾಗಿ ಎರಡೂವರೆ ತಿಂಗಳಲ್ಲೇ ಕೊರೊನಾ ದೇಶಾದ್ಯಂತ ವಕ್ಕರಿಸಿದ್ದರಿಂದ ಕೃಷ್ಣಮಠವನ್ನೇ ಮುಚ್ಚಲಾಯಿತು. ಹೀಗಾಗಿ ಅದಮಾರು ಮಠದ ಪರ್ಯಾಯ ಭಕ್ತರಿಲ್ಲದೆ, ಮಠ ನಡೆಸಲು ದುಡ್ಡೂ ಇಲ್ಲದೆ, ಕೃಷ್ಣಮಠ ಬ್ಯಾಂಕ್ ಸಾಲದ ಮೊರೆ ಹೋಗಬೇಕಾಯಿತು.!
ಮೀನುಗಾರಿಕೆಗೆ ಹೊಡೆತ!
ಕೊರೊನಾ ಹಾವಳಿ ಉಡುಪಿ ಜಿಲ್ಲೆಯ ಜೀವನಾಧಾರವಾದ ಮೀನುಗಾರಿಕೆ ಮೇಲೆ ಭಾರಿ ಪರಿಣಾಮ ಬೀರಿತು. ಈ ವರ್ಷ ಮೀನುಗಾರರಿಗೆ ಸಂಕಷ್ಟಗಳ ಮೇಲೆ ಸಂಕಷ್ಟಕ್ಕೆ ಕಾರಣವಾಯಿತು. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಈಗೊಂದು ಎರಡು ತಿಂಗಳ ಹಿಂದಿನವರೆಗೂ ಮೀನುಗಾರಿಕೆ ಕ್ಷೇತ್ರ ಅಕ್ಷರಶಃ ನಲುಗಿ ಹೋಯಿತು.ಇದರ ಪರಿಣಾಮವಾಗಿ ಲಕ್ಷಾಂತರ ಮೀನುಗಾರರು ನೇರವಾಗಿ ಮತ್ತು ಪರೋಕ್ಷವಾಗಿ ತೊಂದರೆಗೊಳಗಾದರು. ಹಾಗಂತ ಲಾಕ್ ಡೌನ್ ಅವಧಿಯಲ್ಲಿ ಮೀನಿಗೆ ಬೇಡಿಕೆ ಇಲ್ಲದಿರಲಿಲ್ಲ. ಗ್ರಾಹಕರಿದ್ದರೂ ಮೀನುಗಾರಿಕೆ ದೋಣಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಯಿತು. ಮತ್ತು ಹೊರ ರಾಜ್ಯದ ಗಡಿಗಳಿಗೆ ದೋಣಿಗಳು ತೆರಳುವುದು ಕಷ್ಟವಾಯಿತು.ಇದರಿಂದಾಗಿ ಮೀನುಗಾರ ಸಮುದಾಯ, ಮೀನು ವ್ಯಾಪಾರಸ್ಥರು ಮತ್ತು ಅದಕ್ಕೆ ಹೊಂದಿಕೊಂಡ ಉದ್ಯಮಗಳು ನೆಲಕಚ್ಚಿದವು.
ದೋಣಿ ದುರಂತಗಳು!
ಮೀನುಗಾರಿಕೆ ಇಲ್ಲದೆ ಪರದಾಡುತ್ತಿದ್ದ ಮೀನುಗಾರರಿಗೆ ಕಡಲ ದುರಂತಗಳು ಗಾಯದ ಮೇಲೆ ಬರೆ ಎಳೆದಂತಾಯಿತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಸಮುದ್ರದಲ್ಲಿ ಆಗಸ್ಟ್ ತಿಂಗಳಲ್ಲಿ ದೋಣಿಯೊಂದು ಮುಳುಗಿ ನಾಲ್ಕು ಮಂದಿ ಮೀನುಗಾರರು ಮೃತಪಟ್ಟ ದಾರುಣ ಘಟನೆ ಜರುಗಿತು. ಸ್ಥಳೀಯರಾದ ಮಂಜುನಾಥ್, ಶೇಖರ್, ನಾಗರಾಜ್ ಖರ್ವಿ ಮತ್ತು ಲಕ್ಷ್ಮಣ್ ಖರ್ವಿ ಈ ದುರಂತದಲ್ಲಿ ಸಾವನ್ನಪ್ಪಿದರು.
ಪೇಜಾವರ ಶ್ರೀ-ಕಂಚಿ ಶ್ರೀಗಳ ಭೇಟಿ: ರಾಮಮಂದಿರ ನಿರ್ಮಾಣಕ್ಕೆ ಸಹಕಾರ ಕೋರಿಕೆ
ಮೀನುಗಾರರಿಗೆ 2020 ದುರಂತಗಳ ವರ್ಷ
ಎಂದಿನಂತೆ ಮುಂಜಾನೆ ಹೊತ್ತು ದೋಣಿಗಳಲ್ಲಿ ಒಟ್ಟು 12 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆಗ ಸಮುದ್ರ ಶಾಂತವಾಗಿತ್ತು. ಎರಡೂ ದೋಣಿಗಳು ಜೊತೆಯಾಗಿ ಮೀನು ಹಿಡಿದು ಮಧ್ಯಾಹ್ನ ದಡದತ್ತ ವಾಪಸ್ ಬರುವಾಗ ಸಮುದ್ರ ಪ್ರಕ್ಷುಬ್ಧವಾಗಿದ್ದ ಕಾರಣ, ಭಾರಿ ಗಾತ್ರದ ಅಲೆಗಳು ಏಳುತ್ತಿದ್ದವು. ದಡದಿಂದ ಕೆಲವೇ ಮೀಟರ್ ದೂರದಲ್ಲಿ ಸಾಗರಶ್ರೀ ಎಂಬ ದೋಣಿ ಅಲೆಗಳ ಅಬ್ಬರಕ್ಕೆ ನಿಯಂತ್ರಣ ತಪ್ಪಿ ನೀರಲ್ಲಿ ಮಗುಚಿತು. ಪರಿಣಾಮ ದೋಣಿಯಲ್ಲಿದ್ದ ಎಲ್ಲರೂ ನೀರಲ್ಲಿ ಮುಳುಗಿದರು. ಕೂಡಲೇ ಮತ್ತೊಂದು ದೋಣಿಯಲ್ಲಿದ್ದವರು ಇಬ್ಬರನ್ನು ರಕ್ಷಣೆ ಮಾಡಿದ್ದರು. ಆದರೆ, 4 ಮಂದಿ ನೀರಿನಲ್ಲಿ ಮುಳುಗಿಯಾಗಿತ್ತು. ನಂತರದ ದಿನಗಳಲ್ಲೂ ಅಲ್ಲಲ್ಲಿ ದೋಣಿ ದುರಂತಗಳು ನಡೆದಿವೆ. ಹೀಗಾಗಿ ಮೀನುಗಾರರಿಗೆ 2020 ದುರಂತಗಳ ವರ್ಷ.
ಆಧ್ಯಾತ್ಮಿಕ ಸಂತನ ಅಗಲಿಕೆ
ಈ ವರ್ಷ ಅಂತ್ಯದ ಡಿಸೆಂಬರ್ ನಲ್ಲಿ ಬಂದ ಇನ್ನೊಂದು ಕೆಟ್ಟ ಸುದ್ದಿ ಎಂದರೆ, 84 ವರ್ಷದ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಸಾವು. ಮಾಧ್ವ ತತ್ವದಲ್ಲಿ ವಿಶೇಷ ಪಾಂಡಿತ್ಯ, ಅನುಭವ ಹೊಂದಿದ್ದ ಡಾ.ಬನ್ನಂಜೆಯವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಯಿತು. ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಬನ್ನಂಜೆ ಗೋವಿಂದಾಚಾರ್ಯರು ಮಾದ್ವ ತತ್ವಗಳನ್ನು ಪ್ರಚುರಪಡಿಸುತ್ತಿದ್ದರು. ಅನೇಕ ಗ್ರಂಥಗಳನ್ನು, ಕೃತಿಗಳನ್ನು, ಅನುವಾದಗಳನ್ನು ಅವರು ರಚಿಸಿದ್ದಾರೆ. ಬನ್ನಂಜೆಯವರು ಕನ್ನಡದ ಖ್ಯಾತ ನಟ ದಿವಂಗತ ಡಾ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮಿಕ ಗುರುಗಳಾಗಿದ್ದರು. ಭಾರತೀಯ ತತ್ವಶಾಸ್ತ್ರ, ಹಿಂದೂ ಧರ್ಮಗ್ರಂಥಗಳಲ್ಲಿ ಪ್ರವಚನ ನೀಡುವ ಸಲುವಾಗಿ ದೇಶ ವಿದೇಶಗಳಲ್ಲಿ ಸಂಚಾರ ಮಾಡಿ ಪ್ರಸಿದ್ಧಿಯ ಉತ್ತುಂಗದಲ್ಲಿದ್ದರು. ವರ್ಷದ ಕೊನೆಯ ತಿಂಗಳಿನಲ್ಲಿ ಅವರ ನಿಧನದಿಂದ ರಾಜ್ಯದ ಆಧ್ಯಾತ್ಮಿಕ ಕ್ಷೇತ್ರ ಬಡವಾದಂತಾಯಿತು.