3 ತಿಂಗಳಲ್ಲಿ 4 ಬಾವಿ ತೋಡಿದ ಕಾರ್ಕಳದ ಆಧುನಿಕ ಭಗೀರಥ
ಉಡುಪಿ, ಜೂನ್ 9: ಮಳೆಯ ಅಭಾವದಿಂದ ಜಿಲ್ಲೆಯಲ್ಲಿ ಕೆರೆ, ಬಾವಿ, ನದಿಗಳು ಬರಿದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ನೀರಿನ ಹಾಹಾಕಾರ ಎಲ್ಲೆಡೆಯಾದರೆ ಇಲ್ಲೊಬ್ಬರು ಶ್ರಮ ಜೀವಿ ಸಾಹಸವನ್ನೇ ಮೆರೆದಿದ್ದಾರೆ.
ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಕರಿಯಾಲು ನಿವಾಸಿ ವಸಂತ ಪೂಜಾರಿ ಏಕಾಂಗಿಯಾಗಿ ಕಳೆದ ಮೂರು ತಿಂಗಳಲ್ಲಿ 4 ಬಾವಿಗಳನ್ನು ಕೊರೆದಿದ್ದಾರೆ.
ವಸಂತ ಪೂಜಾರಿಯವರದು ಬಡ ಕುಟುಂಬ. ಕೃಷಿಗೆ ಅಗತ್ಯ ಭೂಮಿ ಇದ್ದರೂ ನೀರಿನ ಮೂಲಗಳು ಮಾತ್ರ ಇರಲಿಲ್ಲ. ಕರೆಗಳು ಬಂದಾಗ ಕೂಲಿ ಕೆಲಸ ಮಾಡುತ್ತಿದ್ದರೆ, ಉಳಿದ ದಿನಗಳಲ್ಲಿ ಪತ್ನಿ ಲಲಿತಾ ಅವರ ದುಡಿಮೆಯೇ ಜೀವನಕ್ಕೆ ಆಧಾರ. ಮಗ ವಜ್ರೇಶ್ 7ನೇ ತರಗತಿ ಓದುತ್ತಿದ್ದರೆ, ವಂದಿತಾ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಅವರ ತಾಯಿ ಸುಮಿತ್ರಾ ವಯೋ ವೃದ್ಧೆ. ಹೀಗೆ ಬಡತನದಲ್ಲೇ ಮುಳುಗೇಳುತ್ತಿದ್ದಾರೆ ವಸಂತ ಪೂಜಾರಿ.
ಕುಡಿಯಲೂ ನೀರಿಲ್ಲ
ವಸಂತ ಪೂಜಾರಿಯವರಿಗೆ ಹಿರಿಯರಿಂದ ಬಂದ ಭೂಮಿಯಲ್ಲಿ ಸ್ವಲ್ಪ ಅಡಿಕೆ ಮರಗಳಿವೆ. ಆದರೆ ಬೇಸಿಗೆ ಬಂದರೆ ಕುಡಿಯಲು ನೀರಿನ ವ್ಯವಸ್ಥೆಯೇ ಇರಲಿಲ್ಲ. ಅಕ್ಕ ಪಕ್ಕದ ಸಂಬಂಧಿಕರ ಮನೆ ಹಾಗೂ ಬಾವಿ ಇದ್ದರೂ ಬೇಸಿಗೆಯಲ್ಲಿ ಅವರ ಬಾವಿಗಳೂ ಬತ್ತಿ ಅಡಿಕೆ ತೋಟ ಕರಗಲಾಗುತ್ತಿದೆ.
ಕುಡಿಯಲು ನೀರು ಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯತ್ಗೆ ಮೊರೆ ಹೋದರೂ ಅಲ್ಲಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.
ಬಾವಿ ತೋಡಲು ಇಳಿದರು
ಬಡ ಕುಟುಂಬದ ವಸಂತ ಪೂಜಾರಿಗೆ ಬೇರೆ ದಾರಿ ಇರಲಿಲ್ಲ. ಹಿಂದೆ ಮುಂದೆ ಯೋಚಿಸದೇ ತನ್ನ ಜಾಗದಲ್ಲಿ ತಾನೇ ಒಂದು ಬಾವಿ ತೋಡಿದರೆ ಹೇಗೆ ಎಂಬ ಯೋಚನೆಯೊಂದಿಗೆ ಯೋಜನೆ ಸಿದ್ಧಪಡಿಸಿಕೊಂಡರು. ವಾಸ್ತವ್ಯ ಮನೆಯ ಎದುರು ಗುರುತು ಹಾಕಿ ಬಾವಿ ತೋಡಲು ಇಳಿದೇ ಬಿಟ್ಟರು. ಒಂದು ಹಾರೆ, ಒಂದು ಪಿಕ್ಕಾಸು, ಸಿದ್ಧಪಡಿಸಿದ ಮರದ ಏಣಿ, ರಾಟೆ, ಹಗ್ಗ ಇವಿಷ್ಟನ್ನೇ ಬಾವಿ ತೋಡುವುದಕ್ಕಾಗಿ ಬಳಸಿಕೊಂಡು ತೋಡಲು ಆರಂಭಿಸಿದರು.
20 ಅಡಿಯಲ್ಲೇ ನೀರು
ಮೊದಲ ದಿನ ಎರಡು ಅಡಿಗಳಷ್ಟು ಆಳ ತೋಡಿದ ಅವರು ಹಂತ ಹಂತವಾಗಿ ಆಳದ ಮಿತಿಯನ್ನು ಕಡಿಮೆಗೊಳಿಸುತ್ತಾ ಸಾಗಿದರು. 20 ಅಡಿ ಆಳ ತಲುಪುತ್ತಿದ್ದಂತೆ ನೀರು ಸಿಕ್ಕಿತ್ತಾದರೂ ವರ್ತುಲದಲ್ಲಿದ್ದ ಸೇಡಿಮಣ್ಣು ಕುಸಿಯಲು ಶುರುವಾಯಿತು.
ಮತ್ತೊಂದು ಬಾವಿ
ಸೇಡಿ ಮಣ್ಣು ಸಿಕ್ಕಿತೆಂದು ಮನೆಯ ಮತ್ತೊಂದು ಪಾರ್ಶ್ವದಲ್ಲಿ ಇನ್ನೊಂದುದು ಬಾವಿ ತೋಡಲು ಆರಂಭಿಸಿದರು. ಅದೇ ಆಳದ ಪ್ರಮಾಣದಲ್ಲಿ ನೀರು ಸಿಕ್ಕಿದೆ.
ತಡೆಗೋಡೆ ಕಟ್ಟಲು ದುಡ್ಡಿಲ್ಲ
ಮತ್ತೆ ಬಾವಿ ತೋಡಿದ್ದಾರೆ. ಹೀಗೆ ಒಟ್ಟು ನಾಲ್ಕು ಬಾವಿಗಳನ್ನು ತೋಡಿದ್ದಾರೆ. ಬಾವಿಯ ತಳಭಾಗದಲ್ಲಿ ಹಾಗೂ ಮೇಲ್ಭಾಗದಲ್ಲಿ ಕೆಂಪು ಕಲ್ಲಿನ ತಡೆಗೋಡೆ ಕಟ್ಟಬೇಕಾಗಿದೆ. ಇದೀಗ ಬಾವಿ ತೋಡಿದರೂ ಆರ್ಥಿಕ ಅಡಚಣೆ ಎದುರಾಗಿದೆ. ಆದುದರಿಂದ ಅದರ ಕಾಮಗಾರಿ ಇನ್ನೂ ಆರಂಭಿಸಿಲ್ಲ.