ಉಡುಪಿಗೆ ತೊಡಕಾದ ನಾಗಮಂಗಲ ಕೊರೊನಾ ಸೋಂಕಿತನ ಬಂಕ್ ಸ್ಟೇ
ಉಡುಪಿ, ಏಪ್ರಿಲ್ 28: ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಿ ಇನ್ನೇನು ಗ್ರೀನ್ ಜೋನ್ ಗೆ ದಾಪುಗಾಲಿಡುವಷ್ಟರಲ್ಲೇ ನಾಗಮಂಗಲ ಮೂಲದ ಕೊರೊನಾ ಸೋಂಕಿತನ ಬಂಕ್ ಸ್ಟೇ ತಲೆನೋವಾಗಿ ಪರಿಣಮಿಸಿದೆ.
ಕೊರೊನಾ ಸೋಂಕಿತ ಬಾಂಬೆಯಿಂದ ನಾಗಮಂಗಲಕ್ಕೆ ಗೂಡ್ಸ್ ಲಾರಿಯಲ್ಲಿ ಕದ್ದು ಮುಚ್ಚಿ ತೆರಳಿದ್ದ. ಮಾರ್ಗ ಮಧ್ಯೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನದಲ್ಲಿರುವ ಟೋಲ್ ಗೇಟ್ ನಲ್ಲಿ ಟೋಲ್ ಪಾಸ್ ಆದ ನಂತರ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಗಣೇಶ್ ಪೆಟ್ರೋಲಿಯಂ ಬಂಕ್ ನಲ್ಲಿ ಲಾರಿ ನಿಲ್ಲಿಸಿ ಸ್ನಾನ ಮಾಡಿ ತಿಂಡಿ ಮುಗಿಸಿದ್ದ.
ಕೊರೊನಾ ಸೋಂಕಿತನ ಸಂಪರ್ಕ: ಉಡುಪಿಯ ಬಂಕ್ ಸೀಲ್ ಡೌನ್
ಹೀಗಾಗಿ ಬಂಕಿನ ಸಿಸಿಟಿವಿ ಆಧರಿಸಿ ಪೆಟ್ರೋಲ್ ಬಂಕ್ ನ 7 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಪೆಟ್ರೋಲ್ ಬಂಕ್ ಸೀಲ್ ಮಾಡಲಾಗಿದೆ. ಜೊತೆಗೆ ಸಾಸ್ತಾನದಲ್ಲಿರುವ ಟೋಲ್ ಗೇಟಿನ 6 ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಸೋಂಕಿತನಿದ್ದ ಲಾರಿ ಏಪ್ರಿಲ್22 ರಂದು ಸಂಜೆ 4 ಗಂಟೆ 55 ನಿಮಿಷಕ್ಕೆ ಟೋಲ್ ತಲುಪಿತ್ತು. ಸೋಂಕಿತ ಟೋಲ್ ಪಾಸ್ ವೇಳೆ ಟೋಲ್ ಸಿಬ್ಬಂದಿ ಜೊತೆ ಮಾತನಾಡಿದ್ದ. ಹೀಗಾಗಿ ಟೋಲ್ ಸಿಬ್ಬಂದಿಯನ್ನು ಇದೀಗ ಕ್ವಾರಂಟೈನ್ ಗೆ ಒಳಪಡಿಸಿದೆ ಉಡುಪಿ ಜಿಲ್ಲಾಡಳಿತ.
ಕಳೆದೊಂದು ತಿಂಗಳಿಂದ ಉಡುಪಿಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಆದರೂ ಸದ್ಯದ ಮಟ್ಟಿಗೆ ಜಿಲ್ಲೆಗೆ ಗ್ರೀನ್ ಝೋನ್ ಸ್ಥಾನಮಾನ ಸಿಗೋದು ತಡವಾಗಲಿದೆ ಎನ್ನಲಾಗುತ್ತಿದೆ.