ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ: ಕಣ್ಮನ ಸೆಳೆಯುವ ಕೃಷ್ಣನಗರಿ ಚಿತ್ರಗಳು...
ಉಡುಪಿ, ಜನವರಿ 17: ಎರಡು ವರ್ಷಕ್ಕೊಮ್ಮೆ ಬರುವ ನಾಡಹಬ್ಬ ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೃಷ್ಣನಗರಿಯಲ್ಲಿ ಎಲ್ಲೆಲ್ಲೂ ತಳಿರು ತೋರಣ, ಸ್ವಾಗತ ಗೋಪುರ, ಕಮಾನುಗಳು, ದಾರಿಯುದ್ದಕ್ಕೂ ಸ್ವಾಗತ ಕೋರುವ ಬ್ಯಾನರ್ಗಳು. ಕತ್ತಲಾವರಿಸುತ್ತಿದ್ದಂತೆ ವಿದ್ಯುದ್ದೀಪಾಲಂಕಾರದಿಂದ ಕಣ್ಣು ಕೋರೈಸುವ ಕೃಷ್ಣಮಠ, ರಥಬೀದಿ...
ಬನ್ನಿ... ಇಂದು ರಾತ್ರಿ ಉಡುಪಿ ನಗರಿಯಲ್ಲಿ ಪ್ರಾರಂಭಗೊಳ್ಳುವ ಪರ್ಯಾಯ ಮಹೋತ್ಸವದ ತಯಾರಿಯನ್ನೊಮ್ಮೆ ಕಣ್ತುಂಬಿಕೊಳ್ಳೋಣ...
ಅದಮಾರು ಶ್ರೀಗಳಿಗೆ ಕೃಷ್ಣ ಪೂಜಾಧಿಕಾರ ಹಸ್ತಾಂತರ
ಉಡುಪಿ ಪರ್ಯಾಯಕ್ಕೆ ಪರ್ಯಾಯವೇ ಸಾಟಿ... ಕೃಷ್ಣಮಠ ಅಂದರೆ ಅದು ಸಂಪ್ರದಾಯಗಳ ಕಾಶಿ... ಕೃಷ್ಣನ ಪೂಜಾಧಿಕಾರ ಓರ್ವ ಮಠಾಧೀಶರಿಂದ ಇನ್ನೋರ್ವ ಮಠಾಧೀಶರಿಗೆ ಹಸ್ತಾಂತರ ಪ್ರಕ್ರಿಯೆಯೇ ಪರ್ಯಾಯ ಮಹೋತ್ಸವ. ಇಂದು ರಾತ್ರಿ ಪಲಿಮಾರು ಶ್ರೀಗಳಿಂದ ಅದಮಾರು ಶ್ರೀಗಳಿಗೆ ಕೃಷ್ಣ ಪೂಜಾಧಿಕಾರ ಹಸ್ತಾಂತರಗೊಳ್ಳಲಿದೆ. ಇಲ್ಲಿ ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿ ವಿಧಾನಗಳು ಮಾತ್ರ ಇರುವುದಿಲ್ಲ. ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಿಕ ವೈಭವಕ್ಕೂ ಪರ್ಯಾಯ ಮಹೋತ್ಸವ ವೇದಿಕೆಯಾಗುತ್ತದೆ.
ಕೃಷ್ಣನ ನಾಡು ಉಡುಪಿಯಲ್ಲಿ ಅದ್ದೂರಿ ರಥೋತ್ಸವ
ಎರಡು ವರ್ಷಕ್ಕೊಮ್ಮೆ ನಡೆಯುವ ಮಹೋತ್ಸವ
ಎರಡು ವರ್ಷಕ್ಕೊಮ್ಮೆ ಜನವರಿಯಲ್ಲಿ ನಡೆಯುವ ಪರ್ಯಾಯ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಕೃಷ್ಣ ಭಕ್ತರು ಆಗಮಿಸುತ್ತಾರೆ. ಇವತ್ತು ರಾತ್ರಿಯಿಂದ ಪ್ರಾರಂಭಗೊಳ್ಳುವ ಪರ್ಯಾಯ ಮಹೋತ್ಸವ ನಾಳೆ ಸಂಜೆ ಪರ್ಯಾಯ ದರ್ಬಾರ್ ತನಕ ಮುಂದುವರೆಯಲಿದೆ. ಈ ಒಂದು ಅವಿಸ್ಮರಣೀಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೃಷ್ಣನಗರಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಇಂದು ಪರ್ಯಾಯಕ್ಕೆ ಅಧೀಕೃತ ಚಾಲನೆ
ಇವತ್ತು ಸಂಜೆ ಎರಡು ವರ್ಷದ ಪರ್ಯಾಯದಿಂದ ನಿರ್ಗಮಿಸುತ್ತಿರುವ ಪಲಿಮಾರು ಮಠಾಧೀಶರಿಗೆ ಪೌರ ಸನ್ಮಾನ ಕಾರ್ಯಕ್ರಮದೊಂದಿಗೆ ಪರ್ಯಾಯ ಮಹೋತ್ಸವ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ. ರಾತ್ರಿ ಎರಡು ಗಂಟೆ ಸುಮಾರಿಗೆ ಪರ್ಯಾಯದ ಐತಿಹಾಸಿಕ ಮೆರವಣಿಗೆ ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಕೃಷ್ಣಮಠದಲ್ಲಿ ಸಮಾರೋಪಗೊಳ್ಳಲಿದೆ.
ಉಡುಪಿ ಪರ್ಯಾಯಕ್ಕೆ ಹರಿದುಬರುತ್ತಿದೆ ಹೊರೆ ಕಾಣಿಕೆಗಳ ಮಹಾಪೂರ
ವಿದ್ಯುದ್ದೀಪಗಳಿಂದ ಕಂಗೊಳಿಸುವ ಮಠ
ಬಳಿಕ ಪರ್ಯಾಯದ ಬಹುಮುಖ್ಯ ವಿಧಿವಿಧಾನಗಳು ಕೃಷ್ಣಮಠದಲ್ಲಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಇಡೀ ಕೃಷ್ಣನಗರಿ ಅಪೂರ್ವ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದು ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಪರ್ಯಾಯದ ದಿನ ಉಡುಪಿ ನಿದ್ರಿಸುವುದಿಲ್ಲ ಎಂಬ ಮಾತಿದೆ. ಕಳೆದ ಕೆಲವು ದಿನಗಳಿಂದ ದೂರದೂರಿನ ಭಕ್ತರು ಉಡುಪಿಯತ್ತ ಧಾವಿಸುತ್ತಿದ್ದು ಪರ್ಯಾಯವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.