ಶೀರೂರು ಶ್ರೀ ಅಗಲಿಕೆ, ಅನುಮಾನ, ನಿಗೂಢತೆ, ತನಿಖೆ... ಟೈಮ್ ಲೈನ್
ಉಡುಪಿ, ಜುಲೈ 24: 'ಸಮಾಜದ ನ್ಯೂನತೆಗಳನ್ನು ಸನ್ಯಾಸಿಯಾಗಿ ತಿದ್ದುವುದಕ್ಕಿಂತ ರಾಜಕಾರಣಿಯಾಗಿ ತಿದ್ದುವುದು ಸುಲಭ' ಎನ್ನುತ್ತಿದ್ದ ಶೀರೂರು ಶ್ರೀ ಲಕ್ಷ್ಮೀವರ ತೀರ್ಥ (55) ಸ್ವಾಮೀಜಿಗಳು ದೈವಾಧೀನರಾಗಿ ಹಲವು ದಿನಗಳಲು ಸಂದಿವೆ.
ಬದುಕಿರುವಷ್ಟು ದಿನವೂ ನಿಗೂಢತೆಯ ಗೂಡಾಗಿಯೆ ಇದ್ದ ಶೀರೂರು ಶ್ರೀ, ಅಗಲಿದ ನಂತರವೂ ನಿಗೂಢತೆಯನ್ನು ಸೃಷ್ಟಿಸಿ ಮರೆಯಾಗಿದ್ದಾರೆ. ಅವರು ಇಹಲೋಕ ತ್ಯಜಿಸಿದ ನಂತರ ಅವರ ವ್ಯಕ್ತಿತ್ವ ಕುರಿತು ಸಾಕಷ್ಟು ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿವೆ.
ಶಿರೂರು ಶ್ರೀ ಸಾವು ಪ್ರಕರಣ: ಬುರ್ಖಾ ಧರಿಸಿ ರಮ್ಯಾ ಶೆಟ್ಟಿ ಪರಾರಿಗೆ ಯತ್ನ, ಬಂಧನ
2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದ ಶೀರೂರು ಶ್ರೀ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರು. ಅಕಾಲಿಕವಾಗಿ ಇಹಲೋಕ ತ್ಯಜಿಸಿದ ಶ್ರೀಗಳ ಅಗಲಿಕೆ, ನಂತರ ಅದು ಹುಟ್ಟಿಸಿದ ಅನುಮಾನ, ಸೃಷ್ಟಿಸಿದ ನಿಗೂಢತೆ, ನಡೆಯುತ್ತಿರುವ ತನಿಖೆ ಕುರಿತಂತೆ ಸಮಗ್ರ ಟೈಮ್ ಲೈನ್ ಇಲ್ಲಿದೆ.
ಆಸ್ಪತ್ರೆಯಲ್ಲಿ ಶೀರೂರು ಶ್ರೀ ಅಕಾಲಿಕ ನಿಧನ
ಜುಲೈ 19, 2018 ರಂದು ಮಣಿಪಾಲದ ಕೆಎಸಿ ಆಸ್ಪತ್ರೆಯಲ್ಲಿ ನಿಧನ. ಫುಡ್ ಪಾಯ್ಸನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದರು.
ಜುಲೈ 19, 2018: ಶ್ರೀಗಳ ಅಗಲಿಕೆಗೆ ಸಾಕಷ್ಟು ಜನ ಕಂಬನಿ ಸುರಿಸಿದರೆ ಮತ್ತಷ್ಟು ಜನ ಇದು ಸಹಜ ಸಾವಲ್ಲ ಎಂದು ಆರೋಪಿಸಿ, ತನಿಖೆಗೆ ಆಗ್ರಹಿಸಿದ್ದರು.
ಜುಲೈ 19, 2018: ಶೀರೂರು ಶ್ರೀ ನಿಧನದ ದಿನವೇ 'ಸಾವಿನ ಕುರಿತು ತನಿಖೆ ನಡೆಯಬೇಕು' ಎಂದು ಅವರ ಸಹೋದರ ಲಾತವ್ಯ ಆಚಾರ್ಯ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.
ಉಡುಪಿ: ಶಿರೂರು ಮಠಕ್ಕೆ ತಾತ್ಕಾಲಿಕ ಉಸ್ತುವಾರಿ ನೇಮಕ
ಜೀವಕ್ಕೆ ಅಪಾಯವಿದೆ ಎಂದಿದ್ದ ಶ್ರೀ
ಜುಲೈ 20, 2018: 'ತಮ್ಮ ಜೀವಕ್ಕೆ ಅಪಾಯವಿದೆ' ಎಂದು ಶೀರೂರು ಶ್ರೀಗಳು ಮೊದಲೇ ತಮಗೆ ಮಾಹಿತಿ ನೀಡಿದ್ದರದು, ಮತ್ತು ಆರುಮಠಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೇಳಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಶೀರೂರು ಶ್ರೀಗಳ ವಕೀಲ ರವಿಕಿರಣ್ ಮುರಡೇಶ್ವರ ಹೊರಹಾಕಿದ್ದರು.
ಜುಲೈ 20, 2018: ಮಾಧ್ವ ಸಂಪ್ರದಾಯದ ಪ್ರಕಾರವೇ ಶ್ರೀಗಳ ಅಂತ್ಯ ಸಂಸ್ಕಾರ ನಡೆದಿತ್ತು. ಅವರ ಅಂತ್ಯ ಸಂಸ್ಕಾರಕ್ಕೆ ಬರಲು ಅಷ್ಟಪಠಗಳಲ್ಲಿ ಪುತ್ತಿಗೆ ಮಠವನ್ನೊಂದು ಬಿಟ್ಟು ಮಿಕ್ಕೆಲ್ಲ ಮಠದ ಸ್ವಾಮೀಜಿಗಳು ಹಿಂದೇಟು ಹಾಕಿದ್ದರು.
ಜುಲೈ 20, 2018: ಶೀರೂರು ಶ್ರೀ ಕಾಲವಾದ ನಂತರದ ಮೂರು ದಿನ ಮಠವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದು, ಅಗತ್ಯ ಮಾಹಿತಿಗಳನ್ನೂ, ದಾಖಲೆಗಳನ್ನೂ ಕಲೆಹಾಕಿದ್ದಾರೆ. ಶೀರೂರು ಶ್ರೀಗಳ ಆಪ್ತೇಷ್ಠರ ವಿಚಾರಣೆಯೂ ಈ ಸಂದರ್ಭದಲ್ಲಿ ನಡೆದಿದೆ.
ಶೀರೂರು ಶ್ರೀಗಳ ಅಸಹಜ ಸಾವು: ಉಡುಪಿ ಪೊಲೀಸರು ಮುಂಬೈಗೆ ತೆರಳಿದ್ದೇಕೆ?
ತನಿಖೆಯ ಹಾದಿ
ಜುಲೈ 20, 2018: ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರು ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದರು.
ಜುಲೈ 20, 2018: ಶೀರೂರು ಶ್ರೀಗಳ ಸಾವು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದರಿಂದ ಈ ಕುರಿತು ಸಿಬಿಐ, ಸಿಐಡಿ ತನಿಖೆಗೆ ಆಗ್ರಹ.
ಜುಲೈ 21, 2018: ಈ ಕುರಿತು ತನಿಖೆ ನಡೆಸಲು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಏಳು ವಿಶೇಷ ತಂಡ ರಚನೆ.
ಜುಲೈ 21, 2018: ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಿದ ಪೋಲಿಸರು.
ಶೀರೂರು ಶ್ರೀ ಆಸ್ಪತ್ರೆಯಲ್ಲಿದ್ದಾಗ ಮಠಕ್ಕೆ ಬಂದಿದ್ದ ಅಪರಿಚಿತ ಯಾರು?
ಕುತೂಹಲ ಕೆರಳಿಸಿದ ಪೇಜಾವರರ ಪ್ರತಿಕ್ರಿಯೆ
ಜುಲೈ 21, 2018: ಮಠದ ಉತ್ತರಾಧಿಕಾರಿ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆ. ಸದ್ಯಕ್ಕೆ ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದ ಹಿರಿಯ ಸ್ವಾಮೀಜಿಗಳು.
ಜುಲೈ 21, 2018: ಮದ್ಯ, ಮಾನಿನಿ ಪೈಕಿ ಶೀರೂರು ಶ್ರೀ ಪ್ರಾಣ ತೆಗೆದದ್ದು ಯಾವುದು ಎಂದು ಪೇಜಾವರದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ಹೊಸ ಮಹಿಳೆಯ ಜೊತೆ ಶೀರೂರು ಶ್ರೀಗಳಿಗೆ ಸಂಬಂಧವಿತ್ತು, ಅವರು ನನ್ನೊಂದಿಗೆ ತಪ್ಪನ್ನು ಒಪ್ಪಿಕೊಂಡಿದ್ದರು ಎಂದು ಪೇಜಾವರ ಶ್ರೀ ಹೇಳಿಕೆ ನೀಡಿದ್ದರು.
ಜುಲೈ 21, 2018: ಮಠಕ್ಕೆ ಸಂಬಂಧ ಪಡದ ಮಹಿಳೆಯೊಬ್ಬರು ದಿನವೂ ಶೀರೂರು ಶ್ರೀಗಳಿಗೆ ಉಪಹಾರ ತಂದುಕೊಡುತ್ತಿದ್ದರು ಎಂಬ ವಿಷಯವೂ ಬಯಲಾಗಿತ್ತು.
ಲ್ಯಾಂಡ್ ಮಾಫಿಯಾ
ಜುಲೈ 22, 2018: ಶ್ರೀಗಳ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಇದೆ, ಅವರ ಮಠಕ್ಕೆ ಸೇರಿದ 500 ಕೋಟಿ ರೂ. ಮೌಲ್ಯದ ಆಸ್ತಿಯೇ ಅವರ ಸಾವಿಗೆ ಕಾರಣ ಎಂದು ಶ್ರೀಗಳ ಆಪ್ತರೊಬ್ಬರು ಹೇಳಿಕೆ ನೀಡಿ ಇಡೀ ಪ್ರಕರಣ ವಿಚಿತ್ರ ತಿರುವು ಪಡೆಯುವಂತೆ ಮಾಡಿದ್ದರು.
ಗೊಂದಲ ಸೃಷ್ಟಿಸಿದ ಆಡಿಯೋ
ಜುಲೈ 22, 2018: ಶೀರೂರು ಶ್ರೀಗಳು ಮತ್ತೊಬ್ಬ ಸ್ವಾಮೀಜಿಗಳೊಂದಿಗೆ ಮಾತನಾಡುತ್ತಿದ್ದಾರೆ ಎನ್ನಲಾದ ಆಡಿಯೋವೊಂದು ಬಿಡುಗಡೆಯಾಗಿ ಮತ್ತಷ್ಟು ಗೊಂದಲ ಸೃಷ್ಟಿಸಿತ್ತು. ಈ ಆಡಿಯೋದಲ್ಲಿ ಅಷ್ಠ ಮಠಗಳ ಹಿರಿಯ ಯತಿಗಳ ಬಗ್ಗೆಯೂ ಚರ್ಚೆ ನಡೆದಿತ್ತು.
ಜುಲೈ 23, 2018: ಶೀರೂರು ಮಠದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದ್ದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿತ್ತು. ಶೀರೂರು ಶ್ರೀಗಳು ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ, ಮಠಕ್ಕೆ ಅಪರಿಚಿತ ವ್ಯಕ್ತಿಯೋರ್ವ ಬಂದುಹೋಗಿದ್ದಾನೆ ಎನ್ನಲಾಗುತ್ತಿದ್ದು ಈತನೇ ಸಿಸಿಟಿವಿ ಡಿವಿಆರ್ ಅನ್ನು ಕದ್ದೊಯ್ದಿರಬಹುದು ಎನ್ನಲಾಗಿತ್ತು.
ಪೊಲೀಸ್ ವಶಕ್ಕೆ ಮಹಿಳೆ
ಜುಲೈ 23, 2018: ಪಟ್ಟದ ದೇವರನ್ನು ವಾಪಸ್ ಪಡೆಯುವ ಸಲುವಾಗಿ ಶೀರೂರು ಲಕ್ಷ್ಮೀವರ ತೀರ್ಥರು ಸಲ್ಲಿಸಿದ್ದ ಕೇವಿಯಟ್ ಅನೂರ್ಜಿತಗೊಂಡಿತ್ತು.
ಜುಲೈ 24, 2018: ಪೊಲೀಸರ ವಿಚಾರಣೆಗೊಳಪಟ್ಟಿದ್ದ ಮಹಿಳೆ ಪರಾರಿಯಾಗಲು ಯತ್ನ. ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ಮಹಿಳೆ ಬಂಧನ
ಜುಲೈ 24, 2018: ಮಠಕ್ಕೆ ಸಂಬಂಧಿಸಿದ, ನಾಪತತೆಯಾಗಿದ್ದ ಎರಡು ಡಿವಿಆರ್ ಗಳಲ್ಲಿ ಒಂದು ಪತ್ತೆ