"ತನಿಖೆಗೆ ಮೊದಲೇ ಮಾನಸಿಕ ಅಸ್ವಸ್ಥ ಎಂದ ಗೃಹ ಸಚಿವರು ರಾಜೀನಾಮೆ ನೀಡಲಿ"
ಉಡುಪಿ, ಜನವರಿ 24: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಪ್ರಕರಣ ಹಲವು ಸಂಶಯಗಳಿಗೆ ಕಾರಣವಾಗಿದೆ. ಈ ಕುರಿತು ಹುಟ್ಟಿಕೊಂಡಿರುವ ಹಲವು ಪ್ರಶ್ನೆಗಳಿಗೆ ರಾಜ್ಯ ಸರಕಾರ ಉತ್ತರ ನೀಡಬೇಕು ಎಂದು ಎಸ್ ಡಿಪಿಐ ಪಕ್ಷ ಆಗ್ರಹಿಸಿದೆ.
ಇನ್ನು ಬಾಂಬರ್ ಅದಿತ್ಯ ರಾವ್ ನನ್ನು ವಿಚಾರಣೆಗೆ ಒಳಪಡಿಸುವ ಮುನ್ನವೇ ಆತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ರಾಜೀನಾಮೆ ನೀಡಬೇಕು ಎಂದು ಎಸ್ ಡಿಪಿಐ ಪಕ್ಷ ಆಗ್ರಹಿಸಿದೆ. ಒಟ್ಟು ಪ್ರಕರಣವನ್ನು ಪೊಲೀಸರು ನಿರ್ವಹಿಸಿದ ರೀತಿ ಮತ್ತು ರಾಜಕೀಯ ನಾಯಕರು ನೀಡಿರುವ ಗೊಂದಲಮಯ ಹೇಳಿಕೆಗಳ ಕುರಿತು ಎಸ್ ಡಿಪಿಐ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆದಿತ್ಯ ರಾವ್ ಉಡುಪಿ ಮನೆಯಲ್ಲಿ ಪೊಲೀಸರ ಪರಿಶೀಲನೆ; ಅಕ್ಕಪಕ್ಕದವರು ಹೇಳುವುದೇನು?
ಇವತ್ತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಮುಖಂಡರು, ಬಾಂಬ್ ಕೃತ್ಯದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ವ್ಯಕ್ತಿಯೊಬ್ಬ ಅಷ್ಟು ಭದ್ರತೆ ಇರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಹೋಗುತ್ತಾನೆ ಎಂದರೆ ಯಾರೂ ನಂಬಲೂ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಾರಂಭದಲ್ಲಿ ಮುಸ್ಲಿಂ ಉಗ್ರರೇ ಈ ಕೃತ್ಯ ಮಾಡಿರಬಹುದು ಎಂಬ ನೆಲೆಯಲ್ಲಿ ಸಾಕಷ್ಟು ದೊಡ್ಡ ಸುದ್ದಿ ಹಬ್ಬಿಸಲಾಯಿತು. ಆದರೆ ಆರೋಪಿ ಆದಿತ್ಯ ರಾವ್ ಎಂದು ಗೊತ್ತಾದ ಮೇಲೆ ಈ ಇಡೀ ಪ್ರಕರಣವನ್ನೇ ತಿರುಚುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಗೃಹ ಸಚಿವರು ತಕ್ಷಣ ಆರೋಪಿ ಮಾನಸಿಕ ಅಸ್ವಸ್ಥ ಎಂದು ಘೋಷಿಸಿಕೊಳ್ಳುತ್ತಾರೆ. ತನಿಖೆಗೂ ಮುನ್ನವೇ ಗೃಹ ಸಚಿವರಿಗೆ ಆತ ಮಾನಸಿಕ ಅಸ್ವಸ್ಥ ಎಂದು ಹೇಗೆ ತಿಳಿಯಿತು.? ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಎಸ್ ಡಿಪಿಐ ಮುಖಂಡರು ಒತ್ತಾಯಿಸಿದರು.
ಬಾಂಬರ್ ಬಗ್ಗೆ ತಮ್ಮ ಹೇಳಿಕೆ ಉಲ್ಟಾ ಹೊಡೆದ ಗೃಹ ಸಚಿವ
ಈ ಹಿಂದೆ ಕೂಡ ಇಂತಹ ಕೃತ್ಯಗಳು ನಡೆದ ಸಂದರ್ಭಲ್ಲಿ, ಮುಸ್ಲಿಮೇತರರಾಗಿದ್ದಾಗ ಆರೋಪಿಯನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಈಗಲೂ ಅದೇ ರೀತಿ ಬಿಂಬಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕಿರುವುದರ ಹಿಂದೆ ಭಯೋತ್ಪಾದಕ ಶಕ್ತಿಗಳ ಕೈವಾಡ ಇದೆ. ಒಬ್ಬನೇ ವ್ಯಕ್ತಿ ಇದನ್ನು ಮಾಡಿರಲು ಸಾಧ್ಯವೇ ಇಲ್ಲ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಇದರ ಹಿಂದಿನ ಸತ್ಯಾಸತ್ಯತೆ ಹೊರತರಬೇಕು ಎಂದು ಮುಖಂಡರು ಆಗ್ರಹಿಸಿದರು.