"ರಾಮ ಮಂದಿರಕ್ಕೆ ಪಿಎಫ್ಐನ ಒಂದು ರುಪಾಯಿ ಬೇಕಿಲ್ಲ''
ಉಡುಪಿ, ಫೆಬ್ರವರಿ 20: ರಾಮ ಮಂದಿರ ನಿರ್ಮಿಸಲು ನಮಗೆ ಪಿಎಫ್ಐ ಹಣದ ಅಗತ್ಯವಿಲ್ಲ, ಪಿಎಫ್ಐ ಕಾರ್ಯಕರ್ತರ ಬಳಿ ನಮ್ಮ ಕಾರ್ಯಕರ್ತರು ಹಣ ಕೇಳಲು ಹೋಗಿಲ್ಲ. ಪಿಎಫ್ಐ ಒಂದು ರಾಷ್ಟ್ರ ವಿರೋಧಿ ಸಂಘಟನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಪಿಎಫ್ಐ ಸಂಘಟನೆ ನಮ್ಮ ಆರ್ಎಸ್ಎಸ್ ಸ್ವಯಂ ಸೇವಕರನ್ನು ಕೊಲೆ ಮಾಡಿದೆ. ರಾಮ ಮಂದಿರದ ಬಗ್ಗೆ ಪಿಎಫ್ಐಗೆ ಮಾತನಾಡುವ ಹಕ್ಕಿಲ್ಲ. ಪಿಎಫ್ಐ ಅನ್ನು ನಿಷೇಧಿಸಲು ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ಮಾಡಿದ್ದೇನೆ ಎಂದರು.
ಪಿಎಫ್ಐ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಗೃಹ ಸಚಿವಾಲಯ ತನಿಖೆ ನಡೆಸುತ್ತಿದೆ. ಒಮ್ಮೆ ತನಿಖೆ ಮುಗಿದ ನಂತರ ಅದನ್ನು ನಿಷೇಧಿಸಲಾಗುವುದು. ಕೇರಳದಲ್ಲಿ ಆರ್ಎಸ್ಎಸ್ ಗೆ ಅವಮಾನಿಸಿ ಪಿಎಫ್ಐ ಮೆರವಣಿಗೆ ವಿಚಾರವಾಗಿ, ಅಲ್ಲಿನ ಸರ್ಕಾರದ ಅನುಮತಿಯೊಂದಿಗೆ ಆಯುಧಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುತ್ತಿದೆ ಎಂದು ಆರೋಪಿಸಿದರು.
ಪಿಎಫ್ಐ ರಾಷ್ಟ್ರ ವಿರೋಧಿ ಸಂಸ್ಥೆ ಎಂದು ಕೇರಳ ಸರ್ಕಾರಕ್ಕೆ ತಿಳಿದಿದೆ. ತಿಳಿದಿದ್ದರೂ ಮುಸ್ಲಿಂ ವೋಟ್ ಪಡೆಯಲು ಪಿಎಫ್ಐಗೆ ಅನುಮತಿ ನೀಡಿ ಓಲೈಕೆ ಮಾಡುತ್ತಿದೆ ಎಂದ ಸಂಸದೆ ಶೋಭಾ, ಪಿಎಫ್ಐ ವಿವಿಧ ಕೊಲೆ ಪ್ರಕರಣಗಳಲ್ಲೂ ಭಾಗಿಯಾಗಿದೆ. ಆರೋಪಿಗಳ ಮೆರವಣಿಗೆಗೆ ಅನುಮತಿ ನೀಡಿದ್ದು, ದೇಶ ವಿರೋಧಿ ಚಟುವಟಿಕೆ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಂಜೆ ವಾಗ್ದಾಳಿ ನಡೆಸಿದರು.
ಇದೇ ವೇಳೆ ಕೊರೊನಾ ಎರಡನೇ ಅಲೆ ಭೀತಿ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇರಳ ಮತ್ತು ಮಹಾರಾಷ್ಟ್ರ ಜೊತೆ ನಮ್ಮ ಜಿಲ್ಲೆಗಳಿಗೆ ವ್ಯಾಪಾರ ಸಂಬಂಧವಿದ್ದು, ಕೆಲ ಪ್ರದೇಶಗಳಲ್ಲಿ ದಿನನಿತ್ಯದ ಓಡಾಟವೂ ಇದೆ ಎಂದರು.
ಗಡಿ ಜಿಲ್ಲೆಗಳಿಗೆ ಕೆಲವೊಂದು ನಿರ್ಬಂಧ ಹಾಕಲು ಉನ್ನತಮಟ್ಟದ ಚರ್ಚೆಯಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಬರಲು15-16 ರಸ್ತೆಗಳಿವೆ. ಪ್ರಮುಖ ಮಾರ್ಗಗಳಿಗೆ ಸೀಮಿತಗೊಳಿಸಿ ಉಳಿದ ರಸ್ತೆಗಳನ್ನು ಬಂದ್ ಮಾಡುವ ಚಿಂತನೆ ಇದೆ. ಕೇರಳ ಮಹಾರಾಷ್ಟ್ರದಿಂದ ಬರುವ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೊರೊನಾ ಟೆಸ್ಟ್ ಸರ್ಟಿಫಿಕೇಟುಗಳನ್ನು ತರಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ. ಮಹಾರಾಷ್ಟ್ರ- ಕೇರಳ- ಆಂಧ್ರ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಪಿಎಫ್ಐ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಬಸವರಾಜ ಬೊಮ್ಮಾಯಿ, ಪಿಎಫ್ಐ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೆವೆ, ಈಗಾಗಲೇ ಪ್ರಕರಣ ದಾಖಲಾಗಿದ್ದು, ಕಾರ್ಯಚರಣೆ, ವಿಚಾರಣೆ ಆಗುತ್ತದೆ. ತಪ್ಪಿತಸ್ತರಿಗೆ ಶಿಕ್ಷೆಯಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.