ಉಡುಪಿ ಪುತ್ತಿಗೆ ಸುಗುಣೇಂದ್ರ ಶ್ರೀಗಳಿಂದ ಶಿಷ್ಯ ಸ್ವೀಕಾರ
ಉಡುಪಿ, ಏ 21: ಶ್ರೀಕೃಷ್ಣಮಠದ ಅಷ್ಠಮಠಗಳಲ್ಲೊಂದಾದ ಜಗದ್ಗುರು ಶ್ರೀ ಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳು, ವಿಕಾರಿ ನಾವ ಸಂವತ್ಸರ, ವಸಂತಖುತು, ಕೃಷ್ಣಪಕ್ಷದ ತದಿಗೆಯ ದಿನವಾದ, ಸೋಮವಾರದಂದು (ಏ 22) ಶಿಷ್ಯ ಸ್ವೀಕಾರವನ್ನು ಮಾಡಲಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪುತ್ತಿಗೆ ಮಠ, ಉಡುಪಿ ಹೊರವಲಯ ಹಿರಿಯಡ್ಕದ ಪುತ್ತಿಗೆ ಮೂಲಮಠದಲ್ಲಿ ಬೆಳಗ್ಗೆ 11.45ಕ್ಕೆ ಶಿಷ್ಯ ಸ್ವೀಕಾರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ.
ಉಡುಪಿ ಶ್ರೀ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ, ವೈಶಿಷ್ಟ್ಯತೆಗಳೇನು?
ಪುತ್ತಿಗೆ ಮಠದ ಶ್ರೀ ಮದುಪೇಂದ್ರ ತೀರ್ಥ ಶ್ರೀಪಾದರ 750 ವರ್ಷಗಳ ಗುರುಪರಂಪರೆಯಲ್ಲಿ ಮೂವತ್ತನೇ ಯತಿಗಳಾದ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಬಾಲಸನ್ಯಾಸವನ್ನು ಸ್ವೀಕರಿಸಿ ವಿಶ್ವದಾದ್ಯಂತ ಧರ್ಮಪ್ರಸಾರ ಮಾಡುವವರಾಗಿ ನಾಳೆಗೆ 45 ಸಂವತ್ಸರಗಳನ್ನು ಪೂರೈಸಲಿದ್ದಾರೆ.
ಈ ಶುಭ ಸಂದರ್ಭದಲ್ಲಿ (22 .04.2019) ಸುಗುಣೇಂದ್ರತೀರ್ಥ ಶ್ರೀಗಳು ಪ್ರಶಾಂತ ಆಚಾರ್ಯ ಎಂಬ ವಟುವನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು ಸಂಕಲ್ಪಿಸಿದ್ದಾರೆ.
ಹಿರಿಯಡ್ಕ ಮೂಲಮಠದಲ್ಲಿ ನಡೆಯಲಿರುವ ಧಾರ್ಮಿಕ, ಸರಳ ಸಮಾರಂಭಕ್ಕೆ ಶ್ರೀ ಮಠದ ಶಿಷ್ಯರಿಗೂ, ಅಭಿಮಾನಿಗಳಿಗೂ, ಭಕ್ತರಿಗೂ ಆದರದ ಹಾರ್ದಿಕ ಆಮಂತ್ರಣವನ್ನು ಪುತ್ತಿಗೆ ಮಠ ಕೋರಿದೆ.
ಗುರುವಂದನೆ: ಯತಿಕುಲ ಚಕ್ರವರ್ತಿ ಪೇಜಾವರ ಶ್ರೀಗಳ ಸನ್ಯಾಸ ಸ್ವೀಕಾರಕ್ಕೆ 80
ಧರ್ಮಪ್ರಚಾರದ ಭಾಗವಾಗಿ ವಿದೇಶಕ್ಕೆ ತೆರಳುವ ಪುತ್ತಿಗೆ ಶ್ರೀಗಳಿಗೆ, ಕಳೆದ ತಮ್ಮ ಪರ್ಯಾಯ ಅವಧಿಯಲ್ಲಿ, ಶ್ರೀಕೃಷ್ಣನ ಮೂಲವಿಗ್ರಹವನ್ನು ಮುಟ್ಟಿ ಪೂಜಿಸಲು, ಉಡುಪಿ ಅಷ್ಠಮಠದ ಇತರ ಯತಿಗಳು ವಿರೋಧ ವ್ಯಕ್ತಪಡಿಸಿದ್ದರು. ಸನ್ಯಾಸ ದೀಕ್ಷೆ ಸ್ವೀಕರಿಸುವ ನೂತನ ಶ್ರೀಗಳನ್ನೂ, ಸುಗುಣೇಂದ್ರತೀರ್ಥರು ಧರ್ಮಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.