ಉಡುಪಿ ಪೇಜಾವರ ಹಿರಿಯ ಶ್ರೀಗಳಿಗೆ 'ಯತಿಕುಲ ಚಕ್ರವರ್ತಿ' ಬಿರುದು
ಉಡುಪಿ, ಜ 18: ವಾದಿರಾಜ ಗುರುಗಳ ನಂತರ, ಐದು ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳಿಗೆ ' ಯತಿಕುಲ ಚಕ್ರವರ್ತಿ' ಬಿರುದು ಪ್ರಧಾನ ಮಾಡಿ ಗೌರವಿಸಲಾಗಿದೆ.
ಪರ್ಯಾಯಕ್ಕೆ ಮುನ್ನಾದಿನವಾದ ಬುಧವಾರ (ಜ 17) ರಥಬೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಪೇಜಾವರ ಶ್ರೀಗಳಿಗೆ ಬಿರುದನ್ನು ಪ್ರಧಾನ ಮಾಡಿದರು.
2ನೇ ಬಾರಿ ಸರ್ವಜ್ಞ ಪೀಠವನ್ನೇರಿದ ಪಲಿಮಾರು ಶ್ರೀಗಳು
ಬಿರುದು ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಪೇಜಾವರ ಶ್ರೀಗಳು, ಕೃಷ್ಣನನ್ನು ಐದು ಬಾರಿ ಪರ್ಯಾಯದ ಮೂಲಕ ಆರಾಧಿಸಲು ಸಿಕ್ಕಿದ್ದು ನನ್ನ ಜೀವನದ ಬಹುದೊಡ್ಡ ಪುಣ್ಯ. ಕೃಷ್ಣನ ಸೇವೆ ಹೇಗೆ ಮುಖ್ಯವೋ ನನಗೆ, ಜನರ ಸೇವೆಯೂ ಅಷ್ಟೇ ಮುಖ್ಯ. ನನ್ನ ಜೀವನದುದ್ದಕ್ಕೂ ನಾನಿದನ್ನು ಪಾಲಿಸಿಕೊಂಡು ಬಂದಿದ್ದೇನೆಂದು ಶ್ರೀಗಳು ಹೇಳಿದ್ದಾರೆ.
ರಾಜಕೀಯದಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ, ಹೊರಗಡೆಯಿಂದ ನನ್ನ ಸಲಹೆ ಕೇಳಿಕೊಂಡು ಬಂದವರಿಗೆ ನಾನು ಸಲಹೆ ನೀಡುವುದನ್ನು ಮುಂದುವರಿಸುತ್ತೇನೆ. ಬೇರೆ ಕಾರ್ಯಕ್ರಮಗಳು ಇರುವುದರಿಂದ, ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ ನಾನು ರಾಜ್ಯದಲ್ಲಿ ಇರುವುದಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ನವೆಂಬರ್ ತಿಂಗಳಲ್ಲಿ ನಡೆದ ಧರ್ಮ ಸಂಸದ್ ಸಭೆಯಲ್ಲಿ ಸಂವಿಧಾನದ ಬಗ್ಗೆ ನಾನು ಮಾತನಾಡಿದ್ದಕ್ಕೆ, ನನ್ನನು ಅಷ್ಠಮಠದಿಂದ ಹೊರಗಿಡಬೇಕೆಂದು ಬಹಳಷ್ಟು ಜನ ಹೇಳಿಕೆ ನೀಡಿದರು. ನನ್ನ ಹೇಳಿಕೆಗೆ ಈಗಲೂ ನಾನು ಬದ್ದನಾಗಿದ್ದೇನೆ. ಸರಕಾರದ ಶಾದಿಭಾಗ್ಯ ಯೋಜನೆ, ದಲಿತರಿಗೂ ಸಿಗುವಂತಾಗಬೇಕೆಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಪೇಜಾವರ ಶ್ರೀಗಳ ಸನ್ಮಾನ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್, ಕಾಪು ಕ್ಷೇತ್ರದ ಶಾಸಕ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ, ಮಾಜಿ ಶಾಸಕ ರಘುಪತಿ ಭಟ್ ಮುಂತಾದವರು ಭಾಗವಹಿಸಿದ್ದರು.
ಪರ್ಯಾಯ ಹಸ್ತಾಂತರದ ವಿಧಿವಿಧಾನ ಮುಗಿದ ನಂತರ, ಕೃಷ್ಣಮಠದ ಆವರಣದಲ್ಲಿರುವ ರಾಜಾಂಗಣದ ಆನಂದತೀರ್ಥ ವೇದಿಕೆಯಲ್ಲಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಗಳು ಆಶೀರ್ವಚನ ನೀಡಿ, ಪೇಜಾವರ ಶ್ರೀಗಳು ದಾಖಲೆಯ 5ನೇ ಪರ್ಯಾಯ ಮುಗಿಸಿದ್ದಾರೆ. ವಾದಿರಾಜ ಗುರುಗಳು ಪೇಜಾವರ ಶ್ರೀಗಳ ಮೂಲಕ ದಾಖಲೆ ಮಾಡಿಸಿದ್ದಾರೆ ಎಂದು ಪ್ರಶಂಸಿಸಿದರು.
ಪರ್ಯಾಯ ಮೆರವಣಿಗೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಅಷ್ಠಮಠಗಳ ನಡುವಣ ಭಿನ್ನಾಭಿಪ್ರಾಯದಿಂದ ಪುತ್ತಿಗೆ ಮಠದ ಶ್ರೀಗಳು ಭಾಗವಹಿಸಿರಲಿಲ್ಲ. ಸೋದೆ ಮತ್ತು ಅದಮಾರು ಮಠದ ಶ್ರೀಗಳು ಅಡ್ಡಪಲ್ಲಕಿಯಲ್ಲಿ ಬಂದರೆ, ಉಳಿದ ಯತಿಗಳು ಜೀಪಿನ ಮೇಲಿಟ್ಟಿದ್ದ ಪಲ್ಲಕ್ಕಿಯಲ್ಲಿ ಕೂತು ಮೆರವಣಿಗೆಯಲ್ಲಿ ಸಾಗಿ ಬಂದರು.