ಫಲಿಮಾರು ಶ್ರೀವಿದ್ಯಾಧೀಶ ತೀರ್ಥರಿಂದ ಶಿಷ್ಯ ಸ್ವೀಕಾರ
ಉಡುಪಿ, ಮಾರ್ಚ್ 27: ಉಡುಪಿಯ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದಾರೆ. ಯೋಗ ದೀಪಿಕಾ ಗುರುಕುಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರನ್ನು ಶಿಷ್ಯನಾಗಿ ಸ್ವೀಕರಿಸಲು ಫಲಿಮಾರು ಶ್ರೀ ತೀರ್ಮಾನಿಸಿದ್ದು ಅವರೇ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಲಿದ್ದಾರೆ.
ಇದೇ ಬರುವ ಮೇ 9 ರಿಂದ 12 ರವರೆಗೆ ಸನ್ಯಾಸ ಸ್ವೀಕಾರ ಮತ್ತು ಪೀಠಾರೋಹಣ ನಡೆಯಲಿದೆ.ದಕ್ಷಿಣ ಕನ್ನಡದ ಕೊಡವೂರು ಕಂಬಳಕಟ್ಟದ ಮೂಲದವರಾದ ಶೈಲೇಶ್ ಉಪಾಧ್ಯಾಯ ಅವರು ಪ್ರಸ್ತುತ 4ನೆಯ ವರ್ಷದ ವೇದಾಧ್ಯಯನ ಮಾಡುತ್ತಿದ್ದು, ಶೀಘ್ರ ಇವರು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸನ್ಯಾಸ ಸ್ವೀಕರಿಸಿದ ನಂತರ ಇವರ ವಿದ್ಯಾಭ್ಯಾಸ ಮುಂದುವರೆಯಲಿದೆ.ಪ್ರಸ್ತುತ ಎರಡನೆಯ ಪರ್ಯಾಯ ಅವಧಿಯಲ್ಲಿರುವ ವಿದ್ಯಾಧೀಶ ಸ್ವಾಮಿಗಳಿಗೆ 63 ವರ್ಷ ವಯಸ್ಸಾಗಿದ್ದು, 1974ರಲ್ಲಿ ವಿದ್ಯಾಮಾನ್ಯ ಶ್ರೀಗಳಿಂದ ಉತ್ತರಾಧಿಕಾರಿಯಾಗಿ ದೀಕ್ಷೆ ಸ್ವೀಕರಿಸಿದ್ದರು.
ಫಲಿಮಾರು ಮಠದ ಮೂಲಮಠದಲ್ಲಿ ಕಳೆದ ಮೂರು ವರ್ಷಗಳಿಂದ ಶೈಲೇಶ್ ಉಪಾಧ್ಯಾಯ ವ್ಯಾಕರಣ ಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ. ಶೈಲೇಶ್ ಉಪಾಧ್ಯಾಯರ ಮನೆಯವರು ಅನೇಕ ವರ್ಷಗಳಿಂದ ಹಲವು ದೇವಸ್ಥಾನಗಳಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಡುಪಿ ಶ್ರೀಕೃಷ್ಣಮಠ ಮತ್ತು ಮಠದ ಪೀಠಾಧಿಪತಿಗಳ ಹಿನ್ನೆಲೆ
ಶೈಲೇಶ್ ಉಪಾಧ್ಯಾಯ ಸುರೇಂದ್ರ ಉಪಾಧ್ಯಾಯ ಮತ್ತು ಲಕ್ಷ್ಮೀ ದಂಪತಿಗಳ ಪುತ್ರ. ಶಿಷ್ಯನ ಹುಡುಕಾಟದಲ್ಲಿದ್ದ ಫಲಿಮಾರು ಶ್ರೀಗಳಿಗೆ ಶೈಲೇಶ್ ಉಪಾಧ್ಯಾಯ ಸರಿಯಾದ ಆಯ್ಕೆ ಎಂಬ ತೀರ್ಮಾನಕ್ಕೆ ಬಂದರು. ಬಳಿಕ 3 ಜ್ಯೋತಿಷ್ಯರ ಅಭಿಪ್ರಾಯ ಸಂಗ್ರಹಿಸಿ ಈ ನಿರ್ಧಾರ ಕೈಗೊಂಡರು. ತಮ್ಮ ಮಗನನ್ನು ಸನ್ಯಾಸಿಯಾಗಲು ಒಪ್ಪಿಗೆ ಸೂಚಿಸಿದ ಶೈಲೇಶ್ ಉಪಾಧ್ಯಾಯರ ತ್ಯಾಗ ದೇಶಕ್ಕೆ ಸೇರಿದ ಸೈನಿಕನ ತ್ಯಾಗದಂತೆ ದೊಡ್ಡದು ಎಂದು ಫಲಿಮಾರು ಶ್ರೀ ಹೇಳಿದರು.
ಶೈಲೇಶ್ ಉಪಾಧ್ಯಾಯ ಪರಿಚಯ
ಫಲಿಮಾರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಶೈಲೇಶ್ ಉಪಾಧ್ಯಾಯ ಎಸ್ ಎಸ್ ಎಲ್ ಸಿವರೆಗೆ ಓದಿದ್ದಾರೆ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯೋದಯ ಶಾಲೆಯಲ್ಲಿ ಪೂರ್ಣಗೊಳಿಸಿ ಪ್ರೌಢ ಶಿಕ್ಷಣವನ್ನು ಸಂಸ್ಕೃತ ವಿದ್ಯಾಲಯದಲ್ಲಿ ನಡೆಸಿದ್ದಾರೆ.
ಕೃಷ್ಣಮಠದಲ್ಲಿ ಈ ಬಾರಿ ನಮಾಜಿಗೆ ಅವಕಾಶವಿದೆಯಾ: ಪಲಿಮಾರು ಶ್ರೀ ಸಂದರ್ಶನ
ಆಧ್ಯಾತ್ಮದತ್ತ ಒಲವು ಹೊಂದಿದ ಶೈಲೇಶ್ ಕಳೆದ ಮೂರು ವರ್ಷಗಳಿಂದ ಫಲಿಮಾರು ಮೂಲಮಠದಲ್ಲಿ ವ್ಯಾಕರಣ ವೇದ ಶಾಸ್ತ್ರಗಳ ಅಧ್ಯಯನ ಮಾಡುತ್ತಿದ್ದಾರೆ. ಶೈಲೇಶ್ ಸಹೋದರ ಆಯುರ್ವೇದ ವಿಭಾಗದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
ಸ್ವಾಮೀಜಿ ಶಿಷ್ಯನ ಆಯ್ಕೆ ಮಾಡುತ್ತಿರುವುದರಿಂದ ತನ್ನನ್ನು ಶಿಷ್ಯನಾಗಿ ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಭಗವತ್ ಸಂಕಲ್ಪ ಮತ್ತು ಯೋಗ ಸೇರಿ ಶೈಲೇಶ್ ಜಾತಕವೂ ಕೂಡಿ ಬಂದುದರಿಂದ ಫಲಿಮಾರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದರು.
ಸನ್ಯಾಸ ಸ್ವೀಕಾರದ ಬಳಿಕ ಮದ್ವ ಪೀಠದಲ್ಲಿ ಅವರ ವ್ಯಾಸಂಗ ಮುಂದುವರಿಯಲಿದೆ. ಚಿಣ್ಣರ ಸಂತರ್ಪಣೆಯಂತಹ ಸಮಾಜಮುಖಿ ಕಾರ್ಯಗಳಿಂದ ಖ್ಯಾತವಾದ ಫಲಿಮಾರು ಮಠದ 31 ನೇ ಯತಿಯಾಗಿ ಶೈಲೇಶ್ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.