ಇನ್ನೂ ಬಂದಿಲ್ಲ ಸೌದಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಉಡುಪಿ ನರ್ಸ್ ಮೃತದೇಹ
ಉಡುಪಿ, ಆಗಸ್ಟ್.21: ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಉಡುಪಿ ಮೂಲದ ನರ್ಸ್ ಮೃತದೇಹ ಇನ್ನೂ ತಾಯ್ನಾಡಿಗೆ ತಲುಪಿಲ್ಲ. ಜುಲೈ.19 ರಂದು ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿರ್ವದ ಹೆಝಲ್ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಇದೀಗ ಸೌದಿ ಪ್ರಜೆಯೊಬ್ಬನ ಕಿರುಕುಳದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿದ್ದು, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.
ಸೌದಿಯಲ್ಲಿ ಶಿರ್ವ ಮೂಲದ ನರ್ಸ್ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು
ನರ್ಸ್ ಹೆಝಲ್ ಅವರ ಮನೆಯಲ್ಲಿ ಕಳೆದೊಂದು ತಿಂಗಳಿನಿಂದ ಸೂತಕದ ಛಾಯೆ ಆವರಿಸಿದೆ. ಬಂಧು ಬಳಗವನ್ನು ಬಿಟ್ಟು, ದೂರದೂರಿನಲ್ಲಿ ನೌಕರಿ ಮಾಡುತ್ತಿದ್ದ ಮನೆ ಮಗಳು ಸಾವಿರಾರು ಕಿ.ಮೀ ದೂರದಲ್ಲಿ ತಾನು ಮಾಡದ ತಪ್ಪಿಗೆ ಜೀವ ತೆರಬೇಕಾಗಿ ಬಂತು ಅಂದ್ರೆ ಎಂಥವರಿಗೂ ನೋವು ಕೊಡೋ ವಿಷಯ.
ಹೀಗಾಗಿ ಶಿರ್ವದ ತಾಯಿ ಮನೆಯಲ್ಲೀಗ ದುಃಖ ಮುಗಿಲು ಮುಟ್ಟಿದೆ. ಹೆಝಲ್ ಸೌದಿಯ ಸರಕಾರಿ ಆಸ್ಪತ್ರೆ ಅಲ್ ಮಿಕ್ವಾ ದಲ್ಲಿ ಕಳೆದ ಕೆಲ ವರ್ಷಗಳಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಜುಲೈ 19 ರಂದು ಇದ್ದಕ್ಕಿದ್ದಂತೆ ನರ್ಸ್ ಮೃತಪಟ್ಟ ಸುದ್ದಿ ಸಿಡಿಲೆರಗಿದಂತೆ ಬಂದಾಗ ಮನೆಯವರಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು.
ತನಿಖೆ ನಡೆಸುತ್ತಾ ಹೋದಂತೆ ಒಂದೊಂದೇ ಸಂಗತಿಗಳು ಬಯಲಾಗತೊಡಗಿದವು. ಹೆಝಲ್, ಕೊಂಕಣಿ ಮತ್ತು ಇಂಗ್ಲಿಷ್ ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ತನಗಾದ ಕಿರುಕುಳವನ್ನು ಹೆಝಲ್ ಆ ಪತ್ರದಲ್ಲಿ ಪ್ರಸ್ತಾಪಿಸಿದ್ದರು.
ಕಿರುಕುಳ ನೀಡಿದ್ದ ಸೌದಿ ಪ್ರಜೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದಾಗಿ ತಿಂಗಳು ಕಳೆದರೂ ಮೃತದೇಹ ಬಾರದೇ ಇರುವುದು ಮನೆಯವರ ದುಃಖವನ್ನು ಇಮ್ಮಡಿಗೊಳಿಸಿದೆ.
ಮೂಲಗಳ ಪ್ರಕಾರ ಹೆಝಲ್ ಗೆ ಸೌದಿಯಲ್ಲಿ ಕಿರುಕುಳ ನೀಡಿದ್ದ ವ್ಯಕ್ತಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಅಲ್ಲಿಯ ಕಾನೂನು ಪ್ರಕಾರ,ತಪ್ಪೊಪ್ಪಿಗೆ ನೀಡಿದ್ದರಿಂದ ಪೋಸ್ಟ್ ಮಾರ್ಟಂನ ಅಗತ್ಯ ಇಲ್ಲ ಎನ್ನಲಾಗುತ್ತಿದೆ.
ಇದು ಹೆಝಲ್ ಕುಟುಂಬಕ್ಕೆ ಒಂದಷ್ಟು ಸಮಾಧಾನ ತಂದಿದ್ದರೂ ತಿಂಗಳು ಕಳೆದರೂ ಮನೆಮಗಳ ಮೃತದೇಹ ಬಾರದೇ ಇರುವುದು ಕುಟುಂಬದ ಸಂಕಟವನ್ನು ಇಮ್ಮಡಿಗೊಳಿಸಿದೆ. ಇನ್ನೊಂದೆಡೆ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳೀಯ ಶಾಸಕ ಲಾಲಾಜಿ ಮೆಂಡನ್ ಮೃತ ಹೆಝಲ್ ಅವರ ಶಿರ್ವದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಸೌದಿಯಲ್ಲಿ ಐದು ದಿನ ಬಕ್ರೀದ್ ರಜೆ ಇದೆ. ಹೀಗಾಗಿ ಆಗಸ್ಟ್ ತಿಂಗಳ ಕೊನೆ ತನಕ ಮೃತದೇಹ ತಾಯ್ನಾಡಿಗೆ ಬರೋದು ಅನುಮಾನ ಎನ್ನಲಾಗುತ್ತಿದೆ. ಉಡುಪಿ ಜಿಲ್ಲಾಧಿಕಾರಿ ಈ ಸಂಬಂಧ ಪ್ರಯತ್ನ ನಡೆಸುತ್ತಿದ್ದು , ಮೃತದೇಹ ಆದಷ್ಟು ಬೇಗ ಊರಿಗೆ ಬರುವುದನ್ನು ಬಂಧುಗಳು ಎದುರು ನೋಡುತ್ತಿದ್ದಾರೆ.