ಕಾರಂತ ಪ್ರಶಸ್ತಿಗೆ ಪ್ರಕಾಶ ರೈ ಆಯ್ಕೆ, ಶೋಭಾ ಕರಂದ್ಲಾಜೆ ವಿರೋಧ
ಉಡುಪಿ, ಅಕ್ಟೋಬರ್ 10 : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿರುವುದಕ್ಕೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನಾದರಾಗಲಿ, ಕಾರಂತ ಪ್ರಶಸ್ತಿ ಸ್ವೀಕರಿಸುತ್ತೇನೆ: ಪ್ರಕಾಶ್ ರೈ
ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾನು ಪಾಲ್ಗೊಳ್ಳುವುದಿಲ್ಲ. ಪ್ರಶಸ್ತಿ ಆಯ್ಕೆ ಸಮಿತಿ ಹಾಗೂ ಕೋಟತಟ್ಟು ಗ್ರಾಮ ಪಂಚಾಯಿತಿಯು, ಪ್ರಕಾಶ್ ರೈ ಆಯ್ಕೆ ಕುರಿತು ಪುನರ್ ಪರಿಶೀಲಿಸಬೇಕು ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಬೇಕೆಂದು ಆಗ್ರಹಿಸಿದರು".
ಇವರಿಗೆ ಲಭಿಸಿದ ಪ್ರಶಸ್ತಿಗಳನ್ನು ದೇಶದಲ್ಲಿರುವ ಅಸಹಿಷ್ಣುತೆಗಾಗಿ ಹಿಂದಿರುಗಿದುವುದಾಗಿ ಪ್ರಕಾಶ ರೈ ಹೇಳಿಕೆ ನೀಡಿದ್ದರು. ಈಗ ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಅವರಿಗೆ ನೀಡುತ್ತಿರುವುದು ಅವರ ಅಸಹಿಷ್ಣುತೆ ಸಿದ್ಧಾಂತವನ್ನು ಬೆಂಬಲಿಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಕಾಶ್ ರೈ ದೇಶದ ಜನತೆ ಬಹುಮತದಿಂದ ಆರಿಸಿದ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತ ಹೆಸರಲ್ಲಿ ಕೊಡಲ್ಪಡುವ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ' ಪ್ರದಾನ ಸಮಾರಂಭ ಶಿವರಾಮ ಕಾರಂತರ ಜನ್ಮದಿನವಾದ ಇಂದು(ಅ.10) ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮದಲ್ಲಿ ನಡೆಯಲಿದೆ.