ಮಧ್ವಾಚಾರ್ಯರ ಬಗ್ಗೆ ತಪ್ಪು ಕಲ್ಪನೆ ಹರಡಿಸಲಾಗಿತ್ತು - ಪೇಜಾವರ ಶ್ರೀ
ಜಗದ್ಗುರು ಶ್ರೀಮಧ್ವಾಚಾರ್ಯರ ಸಪ್ತ ಶತಮಾನೋತ್ಸವ ಕಾರ್ಯಕ್ರಮ ಬುಧವಾರ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಉಡುಪಿ, ಫೆಬ್ರವರಿ 1: "ಇಡೀ ವಿಶ್ವದ ಸಜ್ಜನರಿಗೆ ಮೋಕ್ಷ ಇದೆ ಎಂದು ಹೇಳಿರುವ ಮಧ್ವಾಚಾರ್ಯರ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡಿಸಲಾಗುತ್ತಿತ್ತು. ಅದಕ್ಕೆ ಅವರನ್ನು ನಾಡಗೀತೆಯಿಂದ ಕೈಬಿಡುವ ಪ್ರಯತ್ನ ನಡೆದಿತ್ತು ," ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಅವರು ಜಗದ್ಗುರು ಶ್ರೀಮಧ್ವಾಚಾರ್ಯರ ಸಪ್ತ ಶತಮಾನೋತ್ಸವದ ಪ್ರಯುಕ್ತ ಬುಧವಾರ ರಾಜಾಂಗಣದಲ್ಲಿ ಆಯೋಜಿಸಲಾದ ಸಭಾಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿ ಮಾತನಾಡುತ್ತಿದ್ದರು. ಪರ್ಯಾಯ ಪೇಜಾವರ ಮಠ ಮತ್ತು ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. "ಕೇವಲ ಬ್ರಾಹ್ಮಣರಿಗೆ ಮಾತ್ರ ಮೋಕ್ಷ ದೊರೆಯುತ್ತದೆ ಎಂಬುದಾಗಿ ಮಧ್ವಾಚಾರ್ಯರು ಎಲ್ಲೂ ಹೇಳಿಲ್ಲ. ದೇವರ ಭಕ್ತಿ ಇರುವ ದಲಿತರಿಗೂ ಮೋಕ್ಷ ದೊರೆಯುತ್ತದೆ ಎಂಬುದಾಗಿಯೂ ಮಧ್ವಾಚಾರ್ಯರು ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ," ಎಂದು ಪೇಜಾವರ ಶ್ರೀಗಳು ಸ್ಪಷ್ಟ ಪಡಿಸಿದರು.[ಹಿಂಸೆರಹಿತ ಕಂಬಳಕ್ಕೆ ಪೇಜಾವರ ಶ್ರೀಗಳ ಬೆಂಬಲ]
ಇದೇ ವೇಳೆ ಮಾತನಾಡಿದ ಮುಖ್ಯ ಅತಿಥಿ, ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, "ಬದುಕಿನಲ್ಲಿ ಮಾನವೀಯತೆ ಮುಖ್ಯ. ಅದಕ್ಕೆ ಮೌಲ್ಯಗಳು ಅತಿ ಅಗತ್ಯ. ಮೌಲ್ಯಗಳನ್ನು ಧಾರ್ಮಿಕ ಚಿಂತನೆಯಿಂದ ಮಾತ್ರ ಪಡೆಯಲು ಸಾಧ್ಯ," ಎಂದರು.[ಉಡುಪಿ ಶ್ರೀಕೃಷ್ಣ ದೇವಾಲಯ ನವೀಕರಣಕ್ಕೆ ಜಿಲ್ಲಾಡಳಿತ ತಡೆ]
ಪೇಜಾವರ ಕಿರಿಯ ಯತಿ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಶ್ರೀಗುರುಪ್ರಿಯ ತೀರ್ಥ ಸ್ವಾಮೀಜಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ಆನಂದ ತೀರ್ಥ ನಾಗಸಂಪಿಗೆ, ಡಾ.ಅರಳುಮಲ್ಲಿಗೆ ಪಾರ್ಥ ಸಾರಥಿ ಮಧ್ವಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದರು.
ಕೃಷ್ಣ ರಾಜೀನಾಮೆ ನೋವುಂಟು ಮಾಡಿದೆ
ಕಾರ್ಯಕ್ರಮದ ಬಳಿಕ ಎಸ್.ಎಂ.ಕೃಷ್ಣರ ರಾಜೀನಾಮೆ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್, "ಹಿರಿಯರಾದ ಕೃಷ್ಣ ಅವರು ನಮ್ಮ ಪಕ್ಷವನ್ನು ಬಿಟ್ಟು ಹೋಗಿರುವುದು ಎಲ್ಲಾ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಅವರ ಇಂತಹ ತೀರ್ಮಾನ ಆಘಾತ ತಂದಿದೆ. ವೈಯಕ್ತಿಕವಾಗಿ ಪಕ್ಷದಿಂದ ತೊಂದರೆ ಆಗಿದೆ ಎಂಬುದಾಗಿ ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ನಮ್ಮ ಮುಖಂಡರು ಈಗಾಗಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಪತಿ, ಪ್ರಧಾನಿಯಾಗುವ ನಿರೀಕ್ಷೆ ಅವರದ್ದು ಇರಬೇಕು," ಎಂದರು.