ಉಡುಪಿಯಲ್ಲಿ ಕೃಷ್ಣಾಷ್ಟಮಿ, ವಿಟ್ಲಪಿಂಡಿಗೆ ಹುಲಿ ವೇಷದ ತಯಾರಿ
ಉಡುಪಿ, ಸೆಪ್ಟೆಂಬರ್ 11: ಸೆಪ್ಟೆಂಬರ್ 13 ಹಾಗೂ 14ರಂದು ಉಡುಪಿಯಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ಹುಲಿ ವೇಷದ ಘರ್ಜನೆ ಕೇಳಿ ಬರುತ್ತಿದೆ.
ಈ ಬಾರಿ ಮಕ್ಕಳು ಸೇರಿದಂತೆ ಒಟ್ಟು 19 ಜನರು ವೇಷ ಧರಿಸಲಿದ್ದಾರೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಿಂದ ಒಂದೂವರೆ ತಿಂಗಳ ಮೊದಲೇ ಕೊರಂಗ್ರಪಾಡಿ ಮನಮೋಹನ್ ಎಂಬುವರ ಮಾರ್ಗದರ್ಶನದಲ್ಲಿ ಹುಲಿವೇಷಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಾರೆ.
30ಕ್ಕೂ ಅಧಿಕ ತಂಡಗಳು ಅಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಧರಿಸಿ ಭಕ್ತರನ್ನು ರಂಜಿಸುತ್ತವೆ. ಈ ಸಂಭ್ರಮೋತ್ಸವಕ್ಕೆ ಮಾರ್ಪಳ್ಳಿ ಮಹಾಲಿಂಗೇಶ್ವರ ಚಂಡೆ ಬಳಗದ ಸದಸ್ಯರು ಹುಲಿವೇಷ ಧರಿಸಿ ಭಕ್ತರನ್ನು ರಂಜಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.
ಶ್ರೀ ಕೃಷ್ಣನ ಬಾಲ ಲೀಲೆಗಳಿಗೆ ಬಣ್ಣ ತುಂಬಿದ ಚಿಣ್ಣರು
2001ರಲ್ಲಿ ಆರಂಭಗೊಂಡ ಈ ಚಂಡೆ ಬಳಗವು 2004ರಲ್ಲಿ ಶೀರೂರು ಲಕ್ಷ್ಮೀವರ ತೀರ್ಥರ ಆಶೀರ್ವಾದದೊಂದಿಗೆ ಹುಲಿ ವೇಷ ಧರಿಸಲು ಆರಂಭಿಸಿತ್ತು. ಈ ತಂಡ ಪ್ರತಿ ವರ್ಷ ಮೈ ನವಿರೇಳಿಸುವಂತಹ ಆಕರ್ಷಕ ಕಸರತ್ತುಗಳನ್ನು ಪ್ರದರ್ಶಿಸಿ ಸಾಂಪ್ರದಾಯಿಕ ಹುಲಿ ನರ್ತನದ ಮೂಲಕ ವಿವಿಧ ಪ್ರಶಸ್ತಿಗಳನ್ನು ಪಡೆದಿದೆ.
ಹುಲಿವೇಷ ಹಾಕಲು ಬೇಕಾಗುವಂತಹ ಬಣ್ಣದ ಬೆಲೆ ಏರಿಕೆ, ವೇಷ ಹಾಕುವವರು ಕೊರತೆ, ಪೇಂಟ್ ಹಾಕುವವರ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಉಡುಪಿ ಸುತ್ತಮುತ್ತಲಿನ ಹಲವು ತಂಡಗಳು ಎದುರಿಸುತ್ತಿವೆ. ಆದರೆ ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ಹುಲಿ ವೇಷ ಧರಿಸಲು ಬೇಕಾಗುವ ಪರಿಕರಗಳನ್ನು ಬಳಗದ ಸದಸ್ಯರೇ ತಯಾರಿಸಿಕೊಳ್ಳುತ್ತಿದ್ದಾರೆ.
ಚಂಡೆ ವಾದನದಲ್ಲಿ ರಾಜ್ಯ, ಹೊರರಾಜ್ಯಗಳಲ್ಲಿ ಪ್ರಸಿದ್ಧ ಪಡೆದಿರುವ ಮಾರ್ಪಳ್ಳಿ ಮಹಾಲಿಂಗೇಶ್ವರ ಚಂಡೆ ಬಳಗದವರು ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ ಹದಿಮೂರು ವರ್ಷಗಳಿಂದ ಹುಲಿವೇಷ ಧರಿಸುತ್ತಿದ್ದಾರೆ.