ಕಾಡಿನ ಸುಖದ ಮಧ್ಯೆ ಸಂತೆ, ಕೃಷ್ಣ ಮಠದ 'ಸುಭದ್ರೆ'ಗೆ ಒಂಟಿತನದ ಚಿಂತೆ
ಉಡುಪಿ, ಏಪ್ರಿಲ್ 11: ಇಲ್ಲಿನ ಕೃಷ್ಣ ಮಠದ ಉತ್ಸವಾದಿಗಳಲ್ಲಿ ಮುಖ್ಯಸ್ಥಾನ ಪಡೆಯುತ್ತಿದ್ದ ಆನೆಗೆ ಒಂಟಿತನ ಕಾಡತೊಡಗಿದೆ. ತನ್ನವರಿಲ್ಲದೇ ಬಳಲುತ್ತಿದ್ದಾಳೆ ಮಠದ ಸುಭದ್ರೆ. ಏಕಾಂಗಿತನದಿಂದ ಮಾನಸಿಕ ಖಿನ್ನತೆಗೊಳಗಾದ ಗಜರಾಣಿಗೆ ಬೇಕಾಗಿದೆ ಸೂಕ್ತ ಸಾಂತ್ವನ. ಇದು ಸಂಗಾತಿಯಿಲ್ಲದೆ ಮಠದಲ್ಲಿ ನರಳುತ್ತಿರೋ ಒಂಟಿ ಆನೆಯ ಕಥೆ.
ಹೌದು, ಉಡುಪಿ ಕೃಷ್ಣಮಠದ ನಿತ್ಯೋತ್ಸವ, ಪೂಜೆ ಹಾಗೂ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಪ್ರಾಧಾನ್ಯ ಪಡೆದ ಸುಭದ್ರೆಗೆ ಈಗ ಏಕಾಂಗಿತನ ಕಾಡತೊಡಗಿದೆ.. ಗಜಪೂಜೆ ಉದ್ದೇಶಕ್ಕಾಗಿ ಮಠಕ್ಕೆಂದು ಈ ಸುಭದ್ರೆಗೆ ಮೂರು ವರ್ಷ ಇರಬೇಕಾದರೆ ಕರೆತರಲಾಗಿತ್ತು. ಇದೀಗ ಸುಭದ್ರೆಗೆ 26 ವರುಷ.
ಗರುಡ ಪಕ್ಷಿ ಪ್ರಾಣ ಉಳಿಸಿದ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ
20 ವರುಷಕ್ಕೂ ಅಧಿಕ ಕಾಲ ಕೃಷ್ಣನ ಸೇವೆಯಲ್ಲಿ ಸುಭದ್ರೆ ತೊಡಗಿಸಿಕೊಂಡಿದ್ದಳು. ಆದರೆ 2015ರಲ್ಲಿ ಫುಟ್ ರೂಟ್ ಸಮಸ್ಯೆಯಿಂದಾಗಿ ಪೇಜಾವರ ಶ್ರೀಗಳ ಪರ್ಯಾಯ ಬಳಿಕ ಶಿವಮೊಗ್ಗದ ಸಕ್ರೆಬೈಲ್ ಕ್ಯಾಂಪ್ ಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕಳೆದ ತಿಂಗಳು ನಡೆದ ಪಲಿಮಾರು ಪರ್ಯಾಯದ ಸಮಯ ಮತ್ತೆ ವಾಪಸು ಮಠಕ್ಕೆ ಕರೆತರಲಾಗಿತ್ತು.
ಆಕರ್ಷಕವಾಗಿ ಕಾಣಿಸಿಕೊಂಡಿದ್ದ ಗಜ ರಾಣಿ
ಈ ಬಾರಿ ಉಡುಪಿಯಲ್ಲಿ ನಡೆದ ಪರ್ಯಾಯ ಮಹೋತ್ಸವದಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದ ಗಜರಾಣಿ, ಆ ನಂತರ ಇದೀಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಇದರಿಂದಾಗಿ ಮತ್ತೆ ಸಕ್ರೆಬೈಲ್ ಆನೆ ಬಿಡಾರಕ್ಕೆ ಮರಳಿ ಕಳುಹಿಸಲು ಮಠದ ಅಧಿಕಾರಿಗಳು ತೀರ್ಮಾನವನ್ನು ಕೈಗೊಂಡಿದ್ದಾರೆ.
ಖಿನ್ನತೆ ಕಾಣಿಸಿಕೊಂಡಿದೆ ಸುಭದ್ರೆಗೆ
ಸಕ್ರೆಬೈಲ್ ಆನೆ ಬಿಡಾರದಲ್ಲಿದ್ದ ಸಮಯದಲ್ಲಿ ಅತ್ಯಂತ ಚುರುಕಿನಿಂದ ಇದ್ದ ಸುಭದ್ರೆ ಉಡುಪಿಗೆ ಬಂದ ನಂತರ ಮತ್ತೆ ಚಿಂತಾಕ್ರಾಂತಳಾಗಿದ್ದಾಳೆ. ಯಾವುದಕ್ಕೂ ಸ್ಪಂದಿಸದೆ, ನಿದ್ದೆ- ಊಟವನ್ನೂ ಬಿಟ್ಟು, ಮಾವುತನೊಂದಿಗೆ ಎಲ್ಲದ್ದಕ್ಕೂ ಹಠ ಮಾಡುತ್ತಿದ್ದಾಳೆ. ಮಠದ ಆವರಣ ನಗರೀಕರಣ ಪ್ರಭಾವದಿಂದ ಹಸಿರಿನಿಂದ ವಿಮುಖವಾಗುತ್ತಿರುವುದು ಕೂಡಾ ಸುಭದ್ರೆಯ ಖಿನ್ನತೆಗೆ ಕಾರಣವಾಗಿದೆ.
ಮಾನಸಿಕ ಸ್ಥೈರ್ಯ ಕುಗ್ಗಿಸಿದೆ
ಅಲ್ಲದೆ ಸಕ್ರೆಬೈಲ್ ನ ಆನೆ ಬಿಡಾರದಲ್ಲಿ ತನ್ನ ಸ್ನೇಹಿತರನ್ನು ಬಿಟ್ಟು ಬಂದಿರುವುದು ಕೂಡ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿದೆ. ಅಲ್ಲದೇ ಆನೆಯಂತಹ ಪ್ರಾಣಿಗೆ ಬೇಕಾದ ಪೂರಕ ವಾತಾವರಣ ಮಠದ ಸುತ್ತಮುತ್ತ ಇಲ್ಲದ ಕಾರಣಕ್ಕೆ ಆನೆಯನ್ನು ಸಾಕುವ ಬದಲು, ಪೂಜೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಠಕ್ಕೆ ಮತ್ತೊಂದು ಆನೆ ತರಲು ಚಿಂತನೆ
ಸುಭದ್ರೆಯನ್ನು ಏನೋ ಮಠದ ಆಡಳಿತ ವರ್ಗ ಆನೆ ಬಿಡಾರಕ್ಕೆ ಕಳಿಸಲು ಒಪ್ಪಿಗೆ ಸೂಚಿಸಿದೆ. ಆದರೆ ಅದೇ ಬೆನ್ನಿಗೆ ಮಠಕ್ಕೆ ಮತ್ತೊಂದು ಮರಿ ಆನೆಯನ್ನು ಕರೆತರಲು ಚಿಂತನೆ ನಡೆಸಿದೆ. ದ್ವಾರಕೆಯಲ್ಲಿ ನಗರೀಕರಣದ ಪ್ರಭಾವ ಬೆಳೆದಾಗ ಶ್ರೀಕೃಷ್ಣ ಪರಮಾತ್ಮನೇ ಪಕ್ಷಿ-ಪ್ರಾಣಿಗಳಿಲ್ಲದ ಈ ಪ್ರದೇಶಲ್ಲಿ ನಾನು ಕೂರಲಾರೆ ಎಂದು ಬೃಂದಾವನಕ್ಕೆ ಹೋಗಿ ಕೂತಿದ್ದ ಎಂಬ ಪೌರಾಣಿಕ ಪ್ರಸ್ತಾವವಿದೆ. ಹಾಗಿರಬೇಕಾದರೆ ಕೃಷ್ಣಮಠದ ಆವರಣದಲ್ಲಿ ಸೂಕ್ತ ವಾತಾವರಣ ಇಲ್ಲದ ಹೊರತಾಗಿಯೂ ಆನೆ ಸಾಕುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಸದ್ಯದ ಸನ್ನಿವೇಶ.