ಪತಂಜಲಿ ಹೆಸರಲ್ಲಿ ಉಡುಪಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ
ಉಡುಪಿ, ಆಗಸ್ಟ್ 7: ವ್ಯಕ್ತಿಯೊಬ್ಬರಿಗೆ ಪತಂಜಲಿ ಹಂಚಿಕೆದಾರರ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಡುಪಿಯ ತೆಂಕನಿಡಿಯೂರು ನಿವಾಸಿ ಪವನ್ ಜಯಕರ ಕೋಟ್ಯಾನ್ ವಂಚನೆಗೊಳಗಾದವರು. ಇವರು 2017 ಜೂನ್ 20 ರಂದು ಪತಂಜಲಿ ಆಯುರ್ವೇದಿಕ್ ಡಾಟ್ ಕಾಂ ಎಂಬ ಜಾಲತಾಣದಲ್ಲಿ ಪತಂಜಲಿ ಆಯುರ್ವೇದಿಕ್ ಲಿಮಿಟೆಡ್ ಡಿಸ್ಟ್ರಿಬ್ಯುಟರ್ ಗೆ ಅರ್ಜಿ ಸಲ್ಲಿಸಿದ್ದರು.
ಜುಲೈ 21 ರಂದು ಅರ್ಜಿ ಸ್ವೀಕೃತವಾಗಿದೆಯೆಂಬ ಇ-ಮೇಲ್ ಜಯಕರ ಅವರಿಗೆ ಬಂದಿತ್ತು. ಬೆನ್ನಲ್ಲೇ ವೆಬ್ಸೈಟ್ ನವರು ಜಯಕರ್ ಅವರ ಮೊಬೈಲ್ ಗೆ ಕರೆ ಮಾಡಿ ಪತಂಜಲಿ ಸಂಸ್ಥೆಗೆ ರಿಜಿಸ್ಟರ್ ಆಗಲು 15,500 ಮತ್ತು 75 ಸಾವಿರ ರೂಪಾಯಿ ಹಾಗೂ ಪತಂಜಲಿ ಸಾಮಾಗ್ರಿ ಪಡೆಯಲು 1.80 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಜಯಕರ್ ಅವರು 75 ಸಾವಿರ ರೂ. ನಗದನ್ನು ಜುಲೈ 6 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವೆಬ್ಸಟ್ ನವರು ಹೇಳಿದ ಖಾತೆಗೆ ಜಮೆ ಮಾಡಿ ದಾಖಲಾತಿಗಳನ್ನು ಸಹ ಇ-ಮೇಲ್ ಮೂಲಕ ಕಳುಹಿಸಿದ್ದರು.
ಅಲ್ಲದೆ ಹಲವು ಬಾರಿ ಜಯಕರ್ ವೆಬ್ಸೈಟ್ ನವರ ಖಾತೆಗೆ ತಾಯಿಯ ಖಾತೆಯಿಂದ ಹಣ ಜಮೆ ಮಾಡಿದ್ದರು. ಆದರೆ ಇನ್ನಷ್ಟು ಹಣದ ಬೇಡಿಕೆ ಬಂದಾಗ ಅನುಮಾನಗೊಂಡ ಜಯಕರ್ ಅವರು, ಪತಂಜಲಿ ಆಯುರ್ವೇದಿಕ್ ಲಿ. ಎಕ್ಸಿಕ್ಯೂಟಿವ್ ರವರಿಗೆ ಕರೆ ಮಾಡಿದ್ದಾರೆ. ಆಗ ನಿಜ ವಿಚಾರ ಗೊತ್ತಾಗಿದೆ.
ಪತಂಜಲಿ ಆಯುರ್ವೇದಿಕ್ ಡಾಟ್ ಕಾಂನವರು ಅಸಲಿ ಕಂಪನಿಯಂಥಹದ್ದೇ ವೆಬ್ ಸೈಟ್ ಲಿಂಕ್ ಸೃಷ್ಠಿಸಿ, ನಕಲಿ ವಿಳಾಸ, ಸೀಲು, ಮತ್ತು ಸಿಇಓ ರವರ ಸಹಿಯನ್ನು ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಗೊತ್ತಾಗಿದೆ.
ಹೀಗೆ ಟೋಲ್ ಫ್ರೀ ಹಾಗೂ ನಕಲಿ ರೆಜಿಸ್ಟರ್ ಫಾರಂ ಸೃಷ್ಟಿಸಿ ಇಮೇಲ್ ಹಾಗೂ ಆನ್ಲೈನ್ ನೆಫ್ಟ್ ಮೂಲಕ ಪತಂಜಲಿ ಕಂಪನಿಯ ಹೆಸರಿನಲ್ಲಿ ಪವನ್ ಜಯಕರ್ ಕೋಟ್ಯಾನ್ ರವರಿಗೆ ಒಟ್ಟು 3.27 ಲಕ್ಷ ರೂ. ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಜಯಕರ್ ಅವರು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.