ಪ್ರಮೋದ್ ಮಧ್ವರಾಜ್ ಗೆ ಕೆಪಿಸಿಸಿ ಎಐಸಿಸಿಯಿಂದ ಕರೆ
ಉಡುಪಿ, ಅಕ್ಟೋಬರ್ 11: ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಕೆಪಿಸಿಸಿ ಎಐಸಿಸಿಯಿಂದ ಪ್ರಮೋದ್ ಮಧ್ವರಾಜ್ ಗೆ ಕರೆ ಬಂದಿದೆ. ಇದರೊಂದಿಗೆ ಉಪ್ಪಳದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲೂ ಆಹ್ವಾನಿಸಬೇಕೆಂದು ದಿನೇಶ್ ಗುಂಡೂರಾವ್, ವಿಷ್ಣುನಾದನ್ ಅವರಿಂದ ಕರೆ ಬಂದಿರುವುದಾಗಿ ಉಡುಪಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಸೇರ್ಪಡೆಗೆ ಕಾಯುತ್ತಿದ್ದರು. ಈ ಸಂಬಂಧ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶಕ್ಕಾಗಿ ದಿನೇಶ್ ಗುಂಡೂರಾವ್ ಅವರಿಗೆ ಪತ್ರವನ್ನೂ ಬರೆದಿದ್ದರು. ಇದೀಗ ಅವರಿಗೆ ಕರೆ ಬಂದಿದ್ದು, ಮುಂದೆ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಬಿಜೆಪಿ ಶಾಸಕ, ಕಾಂಗ್ರೆಸ್ ಮಾಜಿ ಸಚಿವರ ನಡುವೆ ವಾಗ್ಯುದ್ಧ
"ನಾನು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಶಾಲಿನಲ್ಲೂ ಕೈ ಚಿಹ್ನೆಯನ್ನು ಬಿಟ್ಟಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಡಲೇ ಇಲ್ಲ, ಕಾಂಗ್ರೆಸ್ ನನ್ನನ್ನು ಉಚ್ಛಾಟನೆ ಮಾಡಿರಲಿಲ್ಲ. ಮತ್ತೆ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಪ್ರಮೇಯ ಬರುವುದಿಲ್ಲ. ತಾಂತ್ರಿಕವಾಗಿ ಕೆಲವು ಸಮಸ್ಯೆಗಳಿತ್ತು, ಕಾಂಗ್ರೆಸ್ ನಾಯಕರೇ ಕರೆ ಮಾಡಿದ್ದರಿಂದ ಸಮಸ್ಯೆ ನಿವಾರಣೆಯಾಗಿದೆ. ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಬೇರೆ ಯಾವ ಪಕ್ಷದವರು ನನ್ನನ್ನು ಸಂಪರ್ಕ ಮಾಡಿಲ್ಲ" ಎಂದು ಹೇಳಿಕೊಂಡಿದ್ದಾರೆ.
ಇದೇ ಸಮಯದಲ್ಲಿ, ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಕುರಿತೂ ಮಾತನಾಡಿ, "ಇಡೀ ದೇಶದಲ್ಲಿ ಬಿಜೆಪಿ ನಾಯಕರಿದ್ದಾರೆ. ನಮ್ಮ ಮಂತ್ರಿಗಳು ಲಂಚ ತಗೊಳೋದಿಲ್ಲ ಅಂತ ಬಿಜೆಪಿ ಮೊದಲು ಘೋಷಿಸಲಿ. ಕಪ್ಪು ಹಣ ಇಲ್ಲ, ಪಾರ್ಟಿ ಫಂಡ್ ಉಪಯೋಗಿಸಿಲ್ಲ ಅಂತ ಹೇಳಲಿ, ಬಿಜೆಪಿ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ. ವಿರೋಧ ಪಕ್ಷವನ್ನು ಸಂಪೂರ್ಣ ಮುಗಿಸಲು ಮುಂದಾಗಿದೆ. ಜೊತೆಗೆ ವಿಧಾನಸೌಧದೊಳಗೆ ಮಾಧ್ಯಮಗಳನ್ನು ನಿಷೇಧ ಮಾಡುತ್ತಿದೆ. ಪ್ರಜಾಪ್ರಭುತ್ವಕ್ಕೆ ಬಿಜೆಪಿ ಕೊಡಲಿಯೇಟು ಕೊಡುತ್ತಿದೆ" ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.