ಉಡುಪಿ ಡಬಲ್ ಮರ್ಡರ್ ಪ್ರಕರಣ: ಆರೋಪಿ ಬಂಧಿಸದಂತೆ ರಾಜಕೀಯ ಪ್ರಭಾವ..?
ಉಡುಪಿ, ಫೆಬ್ರವರಿ 04: ಕಳೆದ ವರ್ಷ ನಡೆದಿದ್ದ ಉಡುಪಿ ಡಬಲ್ ಮರ್ಡರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯನಾಗಿರುವ ರಾಘವೇಂದ್ರ ಕಾಂಚನ್ ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ತಲೆಮರೆಸಿಕೊಂಡಿದ್ದಾನೆ.
ಕೊಲೆಯಾದ ಯುವಕರಿಬ್ಬರ ಮನೆಯವರು, ತಲೆ ಮರೆಸಿಕೊಂಡಿರುವ ಆರೋಪಿಯನ್ನು ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉಡುಪಿ; ಜೋಡಿ ಕೊಲೆ ಆರೋಪಿಗೆ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್
2019 ರ ಗಣರಾಜ್ಯೋತ್ಸವದ ದಿನದಂದು ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದ ಭೀಕರ ಕೊಲೆ ಅದು. ಯುವಕರಿಬ್ಬರ ಡಬಲ್ ಮರ್ಡರ್ ಆಗಿತ್ತು. ಈ ರೀತಿ ಕೊಲೆಯಾಗಿದ್ದವರು ಕೋಟದ ಸ್ನೇಹಿತರಾದ ಭರತ್ ಮತ್ತು ಯತೀಶ್. ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿಯವರು ಕೊಲೆ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಇದರಲ್ಲಿ ಕೆಲವು ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು. ಅವರಲ್ಲಿ ಪ್ರಮುಖ ಆರೋಪಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದ. ಇದರ ವಿರುದ್ಧ ಮೃತ ಭರತ್ ತಾಯಿ ಪಾರ್ವತಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಹೋರಾಟ ನಡೆಸಿದ್ದರು.
ಹೋರಾಟದಲ್ಲಿ ಪಾರ್ವತಿಗೆ ಜಯ ಸಿಕ್ಕಿದ್ದು ರಾಘವೇಂದ್ರ ಕಾಂಚನ್ ಬೇಲ್ ಕ್ಯಾನ್ಸಲ್ ಆಗಿತ್ತು. ಅಂದಿನಿಂದಲೇ ಪ್ರಮುಖ ಆರೋಪಿ ರಾಘವೇಂದ್ರ ಕಾಂಚನ್ ಕಣ್ಮರೆಯಾಗಿದ್ದಾನೆ. ಕೊಲೆಗೀಡಾದ ಭರತ್ನ ತಾಯಿ ಸ್ವಸಹಾಯ ಸಂಘಗಳಿಂದ ಸಾಲ ತೆಗೆದುಕೊಂಡು ಸುಪ್ರೀಂ ಕೋರ್ಟ್ ಗೆ ತೆರಳಿ ಆರೋಪಿ ರಾಘವೇಂದ್ರ ಕಾಂಚನ್ ಬೇಲ್ ಕ್ಯಾನ್ಸಲ್ ಮಾಡಿಸಿದ್ದರು.
ಕೋಟ ಡಬಲ್ ಮರ್ಡರ್:ಉಡುಪಿ ಜಿ.ಪಂ.ಸದಸ್ಯ ಸೂತ್ರಧಾರಿ, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಎಲ್ಲಾ ದಾಖಲಾತಿಯನ್ನು ಸಲ್ಲಿಸಿದ್ದರೂ ಈ ವರೆಗೂ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಆರೋಪಿಯ ಪರವಾಗಿ ಕುಂದಾಪುರದ ಸ್ಥಳೀಯ ರಾಜಕಾರಣಿಗಳು ಪೊಲೀಸ್ ಇಲಾಖೆಗೆ ಒತ್ತಡ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು 3 ದಿನಗಳಲ್ಲಿ ಆರೋಪಿಯನ್ನು ಬಂಧಿಸದಿದ್ದಲ್ಲಿ, ಫೆಬ್ರವರಿ 7 ರಂದು ಭರತನ ತಾಯಿ ಪಾರ್ವತಿಯವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.
ಬಡಮಹಿಳೆಯಾದ ತಾವು ಸಾಲ ಮಾಡಿ ಮಗನ ಸಾವಿಗೆ ನ್ಯಾಯಕ್ಕಾಗಿ ಸುಪ್ರಿಂ ಕೋರ್ಟ್ಗೆ ತೆರಳಿ ನ್ಯಾಯ ತಂದರೆ ಪೊಲೀಸರು ರಾಜಕಾರಣಿಗಳ ಮಾತಿಗೆ ಬೆಲೆ ನೀಡಿ ಸುಪ್ರೀಂ ಕೋರ್ಟ್ ತೀರ್ಪಿಗೆ ಅನ್ಯಾಯ ಮಾಡುತ್ತಿದ್ದಾರೆ. ನನಗೆ ನ್ಯಾಯ ನೀಡಿ ಎಂದು ಭರತ್ ತಾಯಿ ಪಾರ್ವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.