ಕುವೈತ್ ಜೈಲಿನಿಂದ 7 ತಿಂಗಳ ನಂತರ ಬಸ್ರೂರಿನ ಶಂಕರ ಪೂಜಾರಿ ಬಿಡುಗಡೆ
ಉಡುಪಿ, ಜನವರಿ 16 : ನಿಷೇಧಿತ ಔಷಧ ತೆಗೆದುಕೊಂಡು ಹೋಗುವಾಗ ಏಳು ತಿಂಗಳ ಹಿಂದೆ ಕುವೈತ್ ಪೊಲೀಸರು ಬಂಧಿಸಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನವರಾದ 40 ವರ್ಷದ ಶಂಕರ ಪೂಜಾರಿ ಅವರನ್ನು ಬಿಡುಗಡೆ ಮಾಡಲಾಗಿದೆ. ಕುವೈತ್ ನ ಆಹಾರ ಮತ್ತು ಕೃಷಿ ಸಂಸ್ಥೆಯೊಂದರಲ್ಲಿ ಪೂಜಾರಿ ಕಾರ್ಯ ನಿರ್ವಹಿಸುತ್ತಿದ್ದರು.
ಉಡುಪಿಯಿಂದ ಪಾರ್ಸೆಲ್ ತೆಗೆದುಕೊಂಡ ವ್ಯಕ್ತಿ ಕುವೈಟ್ನಲ್ಲಿ ಬಂಧನ
ಕಳೆದ ವರ್ಷ ಮೇ ತಿಂಗಳಲ್ಲಿ ರಜಾದ ಮೇಲೆ ಭಾರತದಲ್ಲಿರುವ ತಮ್ಮ ಮನೆಗೆ ಹಿಂತಿರುಗಿದ್ದರು. ತಮ್ಮ ಸಹೋದ್ಯೋಗಿ ಮನವಿ ಮಾಡಿದ್ದರಿಂದ ಇಲ್ಲಿಂದ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಅದರಲ್ಲಿ ನಿಷೇಧಿತ ಔಷಧವಿತ್ತು. ಉಡುಪಿಯಿಂದ ಕುವೈತ್ ಗೆ ಹಿಂತಿರುಗಿದ ಅವರನ್ನು ವಿಮಾನ ನಿಲ್ದಾಣದಲ್ಲೇ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಪಾರ್ಸೆಲ್ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಶಂಕರ್ ಪೂಜಾರಿ ಎಷ್ಟೇ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಆ ನಂತರ ಈ ಪ್ರಕರಣವನ್ನು ಉಡುಪಿಯ ಜಿಲ್ಲಾಡಳಿತ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕೈಗೆತ್ತಿಕೊಂಡಿತ್ತು. ಈ ಪ್ರಕರಣದಲ್ಲಿ ಶಂಕರ ಪೂಜಾರಿ ಅಮಾಯಕರು ಎಂದು ಕುವೈತ್ ಪೊಲೀಸರ ಬಳಿ ಸಾಬೀತು ಪಡಿಸಲು ಯಶಸ್ವಿಯಾಗಿದ್ದರು.