140 ಮನೆಗೆ ಅಕ್ಕಿ ಹಂಚಿದ ಉಡುಪಿ ಶಾರದಕ್ಕನಿಗೆ ಸಲಾಂ ಎಂದ ಡಿಸಿ
ಉಡುಪಿ, ಏಪ್ರಿಲ್ 24: ಕೊರೊನಾ ಲಾಕ್ ಡೌನ್ ಸಂದರ್ಭ ತನ್ನ ಪರಿಶ್ರಮದ ಮೂಲಕ ದುಡಿದ ಹಣದಲ್ಲಿ ಬಡವರಿಗೆ ಅಕ್ಕಿ ನೀಡಿದ ಶಾರದಕ್ಕನ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂಬಂಧ ಒನ್ ಇಂಡಿಯಾದಲ್ಲೂ ವರದಿ ಪ್ರಕಟವಾಗಿತ್ತು.ಇದೀಗ ಖುದ್ದು ಉಡುಪಿ ಜಿಲ್ಲಾಧಿಕಾರಿ ಅವರು ಶಾರದಕ್ಕನ ಮನೆಗೆ ತೆರಳಿ ಅವರ ಮಾನವೀಯ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಶಾರದಕ್ಕನ ಮಾನವೀಯ ಕಾರ್ಯದ ವರದಿಗಳನ್ನು ಗಮನಿಸಿದ ಡಿಸಿ, ಅಧಿಕಾರಿಗಳ ಜೊತೆ ಮಲ್ಪೆಯ ಮನೆಗೆ ತೆರಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಷ್ಟದಲ್ಲಿದ್ದರೂ 140 ಮನೆಗೆ ಅಕ್ಕಿ ಹಂಚಿದ ಉಡುಪಿಯ ಶಾರದಕ್ಕ
ಶಾರದಕ್ಕನ ಬಗ್ಗೆ ಕೇಳಿ ತಿಳಿದುಕೊಂಡ ಜಿಲ್ಲಾಧಿಕಾರಿ ಜಿ.ಜಗದೀಶ್ ಏನಾದರೂ ಸಮಸ್ಯೆಗಳಿದ್ದರೆ ಮುಂದಿನ ದಿನಗಳಲ್ಲಿ ತಮ್ಮನ್ನು ಭೇಟಿಯಾಗುವಂತೆ ಹೇಳಿದರು. ಕೆಲ ದಿನಗಳ ಹಿಂದೆ ಶಾರದಕ್ಕ ತಾನು ಕೂಡಿಟ್ಟ ಹಣದಿಂದ 140 ಮನೆಗೆ ಅಕ್ಕಿ ಹಂಚಿ ಮಾನವೀಯತೆ ಮೆರೆದು ಮನೆಮಾತಾಗಿದ್ದರು. ಇವರು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾರೆ. ಒಟ್ಟು 140 ಮನೆಗಳಿಗೆ ತಲಾ 5 ಕೆ.ಜಿ.ಯಂತೆ 700 ಕೆಜಿ ಅಕ್ಕಿ ಹಂಚಿ ಎಲ್ಲರ ಗಮನ ಸೆಳೆದಿದ್ದರು.