ಉಡುಪಿ ಡಿಸಿ ಹೆಪ್ಸಿಬಾ ರಾಣಿ 'ಹುಕುಂ'; ಗುರುವಾರ ಸರಕಾರಿ ಅಧಿಕಾರಿಗಳ ಬಸ್ ಓಡಾಟ
ಉಡುಪಿ, ಜೂನ್ 27: ಉಡುಪಿಯ ಎಲ್ಲ ಅಧಿಕಾರಿಗಳು ಇನ್ನು ಪ್ರತಿ ಗುರುವಾರ ಸರಕಾರಿ ಬಸ್ ನಲ್ಲಿ ಓಡಾಟ ನಡೆಸಲಿದ್ದಾರೆ. ಈಗಾಗಲೇ ಪ್ರತಿ ಗುರುವಾರ ಬಸ್ ನಲ್ಲಿ ಓಡಾಟ ನಡೆಸುತ್ತಿರುವ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಅವರು ಇನ್ನು ಜಿಲ್ಲೆಯ ಎಲ್ಲಾ ಸರಕಾರಿ ಅಧಿಕಾರಿಗಳು ಪ್ರತಿ ಗುರುವಾರ ಬಸ್ ನಲ್ಲಿ ಓಡಾಟ ನಡೆಸಬೇಕೆಂದು ಆದೇಶಿಸಿದ್ದಾರೆ.
ಎಸಿ ಕಾರು ಬಿಟ್ಟು ಬಸ್ ಏರಿ ಕಚೇರಿಗೆ ಬಂದ ಉಡುಪಿ ಜಿಲ್ಲಾಧಿಕಾರಿ
ಪ್ರತಿ ಗುರುವಾರ ಅಧಿಕಾರಿಗಳು ಸರಕಾರಿ ವಾಹನ ಉಪಯೋಗಿಸದೆ ಬಸ್ ನಲ್ಲಿ ಓಡಾಡುವ ಆದೇಶವನ್ನು ಹೊರಡಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆಯಾದರೆ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಮಾಲಿನ್ಯ ಕಡಿಮೆ ಆದರೆ ನಮ್ಮದೇ ಆರೋಗ್ಯ ಚೆನ್ನಾಗಿರುತ್ತದೆ. ಸಮಸ್ಯೆಯೂ ನಮ್ಮಿಂದ ಆಗುತ್ತಿದೆ ಅದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿರುವ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ತಾವೇ ಸರಕಾರಿ ವಾಹನ ಬಿಟ್ಟು ವಾರದಲ್ಲಿ ಒಂದು ದಿನ ಬಸ್ ನಲ್ಲಿ ಕಚೇರಿಗೆ ತೆರಳುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಈ ಆದೇಶವನ್ನು ಪಾಲಿಸುತ್ತಿದ್ದಾರೆ.
ಮತ್ತೊಂದು ಮಹತ್ವದ ನಿರ್ಧಾರ ಘೋಷಿಸಿದ ಉಡುಪಿ ಜಿಲ್ಲಾಧಿಕಾರಿ
ಒಂದೇ ಸಂಸ್ಥೆಗಳಲ್ಲಿ ಅಥವಾ ಕಂಪೆನಿಗಳಲ್ಲಿ ಕೆಲಸ ಮಾಡುವ ಹತ್ತಿಪ್ಪತ್ತು ಜನ ಒಂದು ವಾಹನದಲ್ಲಿ ಹೋದರೆ ಅಷ್ಟೂ ವಾಹನ ಓಡಾಟ ಇರಲ್ಲ ಮತ್ತು ಇಂಧನ ಉಳಿಯುತ್ತದೆ ಎಂದು ಹೆಪ್ಸಿಬಾ ರಾಣಿ ಅಭಿಪ್ರಾಯಪಟ್ಟಿದ್ದಾರೆ.