ಉಡುಪಿ: ಕೃಷಿ ಉಳಿವಿಗೆ ಪಣತೊಟ್ಟ ಉದ್ಯಮಿ ವಿಶ್ವನಾಥ ಶೆಟ್ಟಿ
ಮಂಗಳೂರು, ಜುಲೈ 25: ದಕ್ಷಿಣಕನ್ನಡ ಜಿಲ್ಲೆಯಿಂದ ಉದ್ಯೋಗ ಅರಸಿ ಮುಂಬೈ ಸೇರಿದವರು ನೂರಾರು ಮಂದಿ. ಹೀಗೆ ಮುಂಬೈ ಸೇರಿದವರು ದುಡಿದೋ, ಉದ್ಯಮ ನಡೆಸಿಯೋ ಸಾಕಷ್ಟು ಹಣ ಗಳಿಸಿ ಊರಿಗೆ ಮರಳಿ ಬ್ರಹ್ಮಕಲಶ, ಮಹಾದ್ವಾರ, ಜಾತ್ರೆ ಉತ್ಸವಕ್ಕೆ ಹಣ ಕೊಟ್ಟು ಬ್ಯಾನರ್ ಹಾಕಿಸಿ ತಮ್ಮ ಹೆಸರನ್ನು ಪ್ರಚಾರಕ್ಕೆ ಬಳಸಿಕೊಂಡಿರುವುದು ಮಾಮೂಲು.
ಈ ರೀತಿಯ ಪ್ರಸಂಗಗಳು ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಸರ್ವೇಸಾಮಾನ್ಯ.
25 ವರ್ಷದ ಬಳಿಕ ಮತ್ತೆ ಭತ್ತದ ಗದ್ದೆಯತ್ತ ಮುಖ ಮಾಡಿದ ಕುಟುಂಬ
ಆದರೆ ಇಲ್ಲೊಬ್ಬರು ಮುಂಬೈನಲ್ಲಿ ಹೋಟೆಲ್ ಉದ್ಯಮ ಮಾಡಿ ಸಾಕಷ್ಟು ಹಣ ಸಂಪಾದಿಸಿ ಊರಿಗೆ ಮರಳಿ, ಊರಿನಲ್ಲಿ ಯಾರು ಗದ್ದೆ ಕೃಷಿ ಮಾಡಲು ಆರ್ಥಿಕ ಅಶಕ್ತರೊ ಅವರಿಗೆ ಕೃಷಿಗೆ ಬೇಕಾದ ಹಣ ಮತ್ತು ಕೃಷಿ ಸಲಕರಣೆಗಳನ್ನು ನೀಡಿ ಉತ್ತೇಜನ ನೀಡುತ್ತಿದ್ದಾರೆ.
ಉಡುಪಿಯ ಕರ್ನಿರೆ ನಿವಾಸಿ ವಿಶ್ವನಾಥ ಶೆಟ್ಟಿ ಈ ಅಪರೂಪದ ವ್ಯಕ್ತಿ. ರಿಯಲ್ ಎಸ್ಟೇಟ್ ಅಬ್ಬರದಿಂದಾಗಿ ಗದ್ದೆ ,ಹೊಲ, ತೋಟಗಳು ಇಂದು ಸೈಟು, ಪ್ಲೋಟ್, ಫ್ಲ್ಯಾಟ್ ಗಳಾಗಿ ಪರಿವರ್ತನೆ ಆಗುತ್ತಿವೆ. ಇಂತಹ ಸಂದರ್ಭದಲ್ಲಿ ಗದ್ದೆ, ತೋಟ ಉಳಿಯಬೇಕು, ತನ್ನೂರಿನ ಕೃಷಿ ಬೆಳೆಯಬೇಕು, ಉಳಿಯಬೇಕು ಎಂದು ಪಣ ತೊಟ್ಟವರು ವಿಶ್ವನಾಥ್ ಶೆಟ್ಟಿ.
ಕೃಷಿ ಉಳಿಸುವ ದೃಷ್ಟಿಯಿಂದ ಕೃಷಿಕರಿಗೆ ಸಹಕಾರ, ಬೆಂಬಲ ನೀಡುತ್ತಿರುವ ವಿಶ್ವನಾಥ್ ಶೆಟ್ಟಿ ಅವರ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಇತ್ತೀಚೆಗೆ ತಾವು ಕಲಿತ ಶಾಲೆಯ ಸುತ್ತಮುತ್ತ ಹಸಿರು ಪರಿಸರ ಉಳಿಯಬೇಕೆಂಬ ಹಿತದೃಷ್ಟಿಯಿಂದ ಊರಿನ ಸರ್ವಧರ್ಮಿಯರನ್ನು ಸೇರಿಸಿ ಕರ್ನಿರೆ ಶಾಲೆಯಲ್ಲಿ ಸುಮಾರು 600 ಗಿಡಗಳನ್ನು ನೆಟ್ಟು ಅದರ ಸಂರಕ್ಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡು ಪರಿಸರ ಜಾಗೃತಿ ಮೂಡಿಸಿರುತ್ತಾರೆ.
ದುಡಿದ ಹಣವನ್ನು ಖರ್ಚು ಮಾಡಿ ಧಾಮ್ ಧೂಮ್ ಪ್ರಚಾರ ಗಿಟ್ಟಿಸಿಕೊಳ್ಳುವವರ ಮಧ್ಯೆ ವಿಶ್ವನಾಥ ಶೆಟ್ಟಿಯಂತವರು ಸದ್ದು ಗದ್ದಲ ಇಲ್ಲದೆ ನಡೆಸುತ್ತಿರುವ ಸಾಮಾಜಿಕ ಹಾಗು ಕೃಷಿ ಸೇವೆಯನ್ನು ಗುರುತಿಸಲೇಬೇಕು.