ಗೋವಾದಲ್ಲಿ ಸ್ನೇಹಿತರೊಂದಿಗೆ ಮೋಜು, ಮಸ್ತಿ-ಹಣ ಖಾಲಿ ಆದಾಗ ಕಿಡ್ನಾಪ್ ನಾಟಕ
ಮಂಗಳೂರು, ಜೂ 29; ಗೋವಾದಲ್ಲಿ ಸ್ನೇಹಿತರೊಂದಿಗೆ ಮಜಾ ಮಾಡಿ ಅಲ್ಲಿ ಹಣ ಖಾಲಿ ಆದಾಗ ಪೋಷಕರಿಗೆ ಕರೆ ಮಾಡಿ ತಾನು ಅಪಹರಣ ಆಗಿದ್ದೇನೆ ಅಂತಾ ಐದು ಲಕ್ಷ ರೂಪಾಯಿ ಬೇಡಿಕೆ ಇಟ್ಟ ಖತರ್ನಾಕ್ ಮಗ ಪೊಲೀಸರ ಅತಿಥಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ವರುಣ್ ನಾಯಕ್ (25) ಅಪಹರಣ ನಾಟಕವಾಡಿದ ಯುವಕ. ವರುಣ್ ತನ್ನ ಸ್ನೇಹಿತರೊಂದಿಗೆ ಗೋವಾಗೆ ತೆರಳಿದ್ದು, ಹಣ ಖಾಲಿ ಆದಾಗ ಸ್ನೇಹಿತರ ಉಪಾಯದಂತೇ ಕಿಡ್ನಾಪ್ ನಾಟಕ ಆಡಿದ್ದಾನೆ. ಜೂನ್ 26 ರಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ವರುಣ್ ತನ್ನ ತಂದೆ ತಾಯಿಗೆ ತನ್ನದೇ ಮೊಬೈಲ್ ನಂಬರ್ ನಿಂದ ಕರೆ ಮಾಡಿ ತನ್ನನ್ನು ಯಾರೋ ಅಪಹರಿಸಿದ್ದಾರೆ, ಅಲ್ಲದೆ ಐದು ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಪೋಷಕರಲ್ಲಿ ಗಾಬರಿಯಲ್ಲಿ ಹೇಳಿಕೊಂಡಿದ್ದಾನೆ. ಕ್ಯಾಸಿನೋದಲ್ಲಿ ಮದ್ಯದ ಮತ್ತಿನಲ್ಲಿ ಅಳುತ್ತಾ ತಂದೆ ತಾಯಿ ಜೊತೆ ಮಾತನಾಡಿದ್ದು,ಇದನ್ನು ಅರಿಯದ ಹೆತ್ತವರು ಉಡುಪಿ ಪೊಲೀಸರ ಮೊರೆ ಹೋಗಿದ್ದಾರೆ.
ಪೋಷಕರು ದೂರು: ಲೊಕೇಷನ್ ಮೂಲಕ ಸ್ಥಳಕ್ಕೆ ಪೊಲೀಸರಿಗೆ ಶಾಕ್!
ಭಯ ಭೀತರಾದ ಪೋಷಕರು ಉಡುಪಿ ನಗರ ಠಾಣೆಯಲ್ಲಿ ಮಗನ ಅಪಹರಣ ಕುರಿತು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ನಗರ ಠಾಣೆ ಪೊಲೀಸ್ ಅಧಿಕಾರಿಗಳು ಮೇಲಾಧಿಕಾರಿಗಳ ಸೂಚನೆಯಂತೆ ಯುವಕನ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಯುವಕನ ಮೊಬೈಲ್ ಲೊಕೇಷನ್ ಪತ್ತೆ ಮಾಡುವಾಗ ಅದು ಗೋವಾದಲ್ಲಿರುವುದು ಗೊತ್ತಾಗಿದೆ ಕೂಡಲೇ ಗೋವಾಕ್ಕೆ ಇಬ್ಬರು ಸಿಬ್ಬಂದಿಗಳನ್ನು ಕಳುಹಿಸಿಕೊಡಿದ್ದಾರೆ.
ಈ ವೇಳೆ ಮೊಬೈಲ್ ಲೊಕೇಷನ್ ಪರಿಶೀಸಿ ಆ ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಶಾಕ್ ಆಗಿದೆ. ಅಪಹರಣಕ್ಕೊಳಗಾಗಿದ್ದೇನೆ ಎಂದಿದ್ದ ಯುವಕ ತನ್ನ ಗೆಳೆಯರೊಂದಿಗೆ ಗೋವಾದ ಕ್ಯಾಸಿನೋ ಒಂದರಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರೋದು ಕಂಡು ಬಂದಿದೆ.
ಅಪಹರಣದ ನಾಟಕ ಬಹಿರಂಗಪಡಿಸಿದ ಯುವಕ
ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ತಾನು ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಸರಿಯಾದ ಕೆಲಸವಿಲ್ಲದೆ ತನ್ನ ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಲು ಕೈಯಲ್ಲಿ ಹಣವಿಲ್ಲದಿದ್ದಾಗ ತಲೆಗೆ ಬಂದಿದ್ದು ತನ್ನ ಪೋಷಕರ ಬಳಿ ಇರುವ ಹಣವನ್ನು ಹೇಗಾದರೂ ಮಾಡಿ ಲಪಟಾಯಿಸುವ ಉದ್ದೇಶದಿಂದ ನಾನು ಅಪಹರಣದ ನಾಟಕವಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ.
Recommended Video
ನನ್ನದೇ ಮೊಬೈಲ್ ನಿಂದ ತಾಯಿಗೆ ಕರೆ ಮಾಡಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಅವರು ಐದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದೇನೆ. ಅಲ್ಲದೆ ಹಣ ನೀಡದಿದ್ದಲ್ಲಿ ನನ್ನನ್ನು ಕೊಲೆ ಮಾಡುತ್ತಾರೆ ಎಂದು ಅಳುತ್ತಾ ಹೇಳಿದ್ದೇನೆ ಅಂತಾ ತನ್ನ ತಪ್ಪನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯವನ್ನು ವ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದು ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಯುವಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.