ಭವನಂ ಸನ್ನಿಧಾನ ಅಭಿಯಾನದ ಮೂಲಕ ಮನೆಯಲ್ಲೇ ಅಯ್ಯಪ್ಪ ಸ್ವಾಮಿ ವ್ರತಾಚರಣೆ
ಉಡುಪಿ, ಜನವರಿ 9: ಕರಾವಳಿಯ ಅಯ್ಯಪ್ಪ ಭಕ್ತರು ಇದೇ ಮೊದಲ ಬಾರಿಗೆ ಶಬರಿಮಲೆಗೆ ತೆರಳದೆ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಮಾತ್ರವಲ್ಲ ಭವನಂ ಸನ್ನಿಧಾನ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಕರಾವಳಿಯ ಮೂರೂ ಜಿಲ್ಲೆಗಳ ಬಹುತೇಕ ಅಯ್ಯಪ್ಪ ಭಕ್ತರು ಈ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ.
ಅದಕ್ಕೆಲ್ಲ ಕಾರಣವಾಗಿದ್ದು, ಕೇರಳ ಸರಕಾರದ ನಿರ್ಬಂಧಗಳು. ಹೌದು.. ಈ ಬಾರಿ ಕೊರೊನಾ ಮಹಾಮಾರಿ ಎಲ್ಲವನ್ನೂ ಆಹುತಿ ಪಡೆದುಕೊಂಡಿದೆ. ಹೆಚ್ಚು ಜನ ಭಕ್ತರು ಸೇರುವ ಕಡೆ ಹಲವು ನಿರ್ಬಂಧಗಳಿವೆ. ಅದರಂತೆ ಕೇರಳ ಸರಕಾರ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವ ಮಾಲಾಧಾರಿಗಳಿಗೆ ಸಾಕಷ್ಟು ನಿರ್ಬಂಧವನ್ನು ಹಾಕಿದೆ.
ಶಬರಿಮಲೆ ಭಕ್ತರಿಗೆ ಸಿಹಿ ಸುದ್ದಿ: ಯಾತ್ರೆಗೆ ಹೋಗುವುದು ಇನ್ನು ಸುಲಭ
ಶಬರಿಮಲೆ ಯಾತ್ರೆ ಕೈಗೊಳ್ಳುವವರು ಕೋವಿಡ್ ಟೆಸ್ಟ್ ಮಾಡಿಸಬೇಕು ಎಂಬ ನಿಯಮವನ್ನು ಕೇರಳ ಸರಕಾರ ಕಡ್ಡಾಯ ಮಾಡಿದೆ. ಮಾತ್ರವಲ್ಲ, ಭಕ್ತರೇ ಹಣವನ್ನು ಪಾವತಿಸಬೇಕು ಎಂದೂ ಹೇಳಿದೆ. ಇದರಿಂದ ಅಸಮಾಧಾನಗೊಂಡಿರುವ ಕರ್ನಾಟಕ ಕರಾವಳಿಯ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಗೆ ಹೋಗದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ.
ಕೇರಳ ಸರಕಾರಕ್ಕೆ ಭಕ್ತರ ಭಾವನೆಗಳು ಅರ್ಥವಾಗುವುದಿಲ್ಲ. ಅವರಿಗೆ ಕೇವಲ ಹಣ ಮಾಡೋದು ಮಾತ್ರ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಭಕ್ತರು ಭವನಂ ಸನ್ನಿಧಾನ ಮೂಲಕ ತಮ್ಮ ತಮ್ಮ ಮನೆಯಲ್ಲೇ ಮಡಿಯಲ್ಲಿ ಅಯ್ಯಪ್ಪ ಸ್ವಾಮಿಯ ಸೇವಾ ಕೈಂಕರ್ಯದಲ್ಲಿ ತೊಡಗಿದ್ದಾರೆ.
ವರ್ಷಂಪ್ರತಿ ಕರಾವಳಿಯ ಮೂರು ಜಿಲ್ಲೆಗಳಿಂದ 70 ಸಾವಿರಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಭಕ್ತರು ಕೇರಳದ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ತೆರಳುವುದು ವಾಡಿಕೆ. ಆದರೆ ಈ ಬಾರಿ ಪ್ರಾರಂಭದಲ್ಲೇ ಅಯ್ಯಪ್ಪ ಸ್ವಾಮಿ ಭಕ್ತರು ಭವನಂ ಸನ್ನಿಧಾನ ಮೂಲಕ ಊರಲ್ಲೇ ತಮ್ಮ ತಮ್ಮ ಮನೆಗಳಲ್ಲಿ ವ್ರತಾಚರಿಸಲು ನಿರ್ಧರಿಸಿದ್ದಾರೆ.
ಹೀಗಾಗಿ ಈ ವರ್ಷದ ಮಕರ ಸಂಕ್ರಾಂತಿಗೆ ಇನ್ನೇನು ನಾಲ್ಕೈದು ದಿನಗಳು ಬಾಕಿ ಉಳಿದಿವೆ. ಕರಾವಳಿಯ ಮೂರೂ ಜಿಲ್ಲೆಗಳ ಬಹುತೇಕ ಭಕ್ತರು ಈ ಬಾರಿ ತಮ್ಮ ತಮ್ಮ ಮನೆಗಳಲ್ಲೇ ಮಕರ ಸಂಕ್ರಾಂತಿ ಸಂದರ್ಭ ಪೂಜಾ ಕೈಂಕರ್ಯ ಮಾಡಲಿದ್ದಾರೆ. ಕೊರೊನಾದಿಂದಾಗಿ ಮನೆ ಮಂದಿಯ ಜೊತೆಗೆ ಆಚರಿಸುವ ಭಾಗ್ಯ ನಮಗೆ ಈ ವರ್ಷ ದೊರಕಿದೆ ಎಂದು ಹಲವು ಭಕ್ತರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.