ಉಡುಪಿಯ ಅಷ್ಟ ಮಠಗಳ ಹಿನ್ನೆಲೆ, ಆಚಾರ್ಯ ಮಧ್ವ ಹಾಗೂ ವಾದಿರಾಜರು
ಉಡುಪಿ ಅಷ್ಟ ಮಠಗಳು ಹಾಗೂ ಅಲ್ಲಿನ ಯತಿಗಳ ಬಗ್ಗೆ ಚರ್ಚೆ ಚಾಲ್ತಿಯಲ್ಲಿರುವ ಈ ಸಂದರ್ಭದಲ್ಲಿ ಅಷ್ಟ ಮಠಗಳ ಇತಿಹಾಸದ ಬಗ್ಗೆ ಸಂಕ್ಷಿಪ್ತವಾದ ಪರಿಚಯ ಮಾಡಿಕೊಟ್ಟಿದ್ದಾರೆ ಜ್ಯೋತಿಷಿಗಳು ಹಾಗೂ ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ. -ಸಂಪಾದಕ
***
1400ರ ಇತಿಹಾಸವಿದು. ಆಚಾರ್ಯ ಮಧ್ವರು ಆನಂದ ತೀರ್ಥರಾಗಿ ಸನ್ಯಾಸ ಸ್ವೀಕರಿಸಿದ ಶತಮಾನವಿದು. ಇಡೀ ಪ್ರಪಂಚಕ್ಕೇ ಉಡುಪಿಯಿಂದ ವೇದವ್ಯಾಸರ ದ್ವೈತ ತತ್ವವನ್ನು ತಿಳಿಸಿದ ಮಹಾಮುನಿಗಳು ಅವರು.
ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು, ಉತ್ತರಿಸಿ...
ಆಗ ಉಡುಪಿಯಲ್ಲಿ ಪ್ರದ್ಯುಮ್ನ ಸಂಕರ್ಷಣ ರೂಪದಲ್ಲಿ ಅನಂತಾಸನರಾಗಿ ಪರುಶುರಾಮ ದೇವರು ನೆಲೆಸಿದ ತಾಣವೇ ಅನಂತೇಶ್ವರ ದೇವರು. ಇದರ ಎದುರಿಗೆ ಚಂದ್ರಮೌಳೀಶ್ವರ ದೇವರು. ಈ ಕ್ಷೇತ್ರಕ್ಕೆ ಪೂರ್ವ- ಪಶ್ವಿಮ, ದಕ್ಷಿಣೋತ್ತರವಾಗಿ ನಾಲ್ಕು ಸುಬ್ರಹ್ಮಣ್ಯ ದೇವರು ಮುಚ್ಲುಕೋಡು, ತಾಂಗೋಡು, ಮಾಂಗೋಡು, ಅರತೋಡು ಎಂಬಲ್ಲಿ ಪ್ರತಿಷ್ಠಾಪನೆ ಆಗಿ ಪೂಜಿಸಲ್ಪಡುತ್ತಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಂತಹ ಕ್ಷೇತ್ರಕ್ಕೆ ಸಮೀಪದ ಪಾಜಕ ಕ್ಷೇತ್ರದಲ್ಲಿ ಮಧ್ಯಗೇಹ ಭಟ್ಟ ದಂಪತಿ ಗರ್ಭದಲ್ಲಿ ಮಧ್ವಾಚಾರ್ಯರ ಜನನವಾಯಿತು. ಅವರ ತಮ್ಮ ವಿಷ್ಣು ತೀರ್ಥರು. ಮಧ್ವಾಚಾರ್ಯರಿಗೆ ಸನ್ಯಾಸ ದೀಕ್ಷೆಯನ್ನು ತೀರ್ಥಹಳ್ಳಿ ಸಮೀಪದ ಭೀಮನ ಕಟ್ಟೆ ಮಠದಲ್ಲಿ ಅಲ್ಲಿಯ ಸ್ವಾಮಿಗಳು ನೀಡಿದರು.
ಮಧ್ವಾಚಾರ್ಯರಿಂದ ಅಷ್ಟ ಮಠಗಳ ಸ್ಥಾಪನೆ, ಬಾಲ ಯತಿಗಳಿಗೆ ದೀಕ್ಷೆ
ಆ ನಂತರ ಮಧ್ವಾಚಾರ್ಯರಿಗೆ ಕೃಷ್ಣನ ವಿಗ್ರಹ ಸಿಕ್ಕಿದ್ದು ಉಡುಪಿಯಲ್ಲಿ, ಪ್ರತಿಷ್ಠಾಪಿಸಿದ್ದು ಅನಂತೇಶ್ವರ ಸನ್ನಿಧಿಯ ಪಕ್ಕದಲ್ಲಿ. ಎಲ್ಲವೂ ದೈವ ಪ್ರೇರಣಾನುಸಾರ ನಡೆಯಿತು. ಅಲ್ಲಿಂದ ಮಧ್ವಾಚಾರ್ಯರು ದ್ವೈತ ಸಿದ್ಧಾಂತ ಪ್ರತಿಪಾದಕರಾದರು. ನಂತರ ಶ್ರೀ ಆಚಾರ್ಯರು ಕೃಷ್ಣನ ಪೂಜೆಗಾಗಿ ಪರ್ಯಾಯ ರೂಪದಲ್ಲಿ ಪೇಜಾವರ, ಕಾಣಿಯೂರು, ಸೋದೆ, ಅದಮಾರು, ಪಲಿಮಾರು, ಕೃಷ್ಣಾಪುರ, ಶೀರೂರು, ಪುತ್ತಿಗೆ ಹೀಗೆ ಎಂಟು ಮಠಗಳನ್ನು ಸ್ಥಾಪಿಸಿ, ಬಾಲ ಯತಿಗಳಿಗೆ ದೀಕ್ಷೆ ನೀಡಿದರು.
ಪರಿವ್ರಾಜಕರು ಮೂರು ತಿಂಗಳಿಗಿಂತ ಹೆಚ್ಚು ಒಂದೆಡೆ ನಿಲ್ಲುವಂತಿಲ್ಲ
ಪರಿವ್ರಾಜಕರು ಎಂದರೆ ಒಂದೆಡೆ ಮೂರು ತಿಂಗಳಿಗಿಂತ ಹೆಚ್ಚು ನಿಲ್ಲದೆ ದೇಶ ಸಂಚಾರ ಮಾಡುವವರು ಎಂದರ್ಥ. ಈ ಯತಿಗಳು ದ್ವೈತ ಮತವನ್ನು ಪ್ರಚಾರಗೊಳಿಸಿ, ಪ್ರಜೆಗಳನ್ನು ಭಗವಂತನೆಡೆಗೆ ಭಕ್ತಿಯುತರನ್ನಾಗಿ ಮಾಡುವ ಜವಾಬ್ದಾರಿ ಹೊರಬೇಕಿತ್ತು. ಆ ಪ್ರಕಾರ ಪ್ರತೀ ಎರಡು ತಿಂಗಳಿಗೊಮ್ಮೆ ಶ್ರೀ ಕೃಷ್ಣನ ಪೂಜೆಗೆ ಪರ್ಯಾಯ ರೂಪದಲ್ಲಿ ಬಂದು ಸರ್ವಜ್ಞ ಪೀಠ ಅಲಂಕಾರ ಮಾಡಬೇಕು. ಅಂದರೆ ಒಬ್ಬರಿಗೆ ಎರಡು ತಿಂಗಳ ಪೂಜೆ ಸಲ್ಲಿಸಿ ಉಳಿದ ಹದಿನಾರು ತಿಂಗಳು ಪರಿವ್ರಾಜಕರಾಗಿ ದೇಶಾಟನ ಮಾಡಬೇಕು.
ಎರಡು ವರ್ಷಗಳಿಗೆ ಬದಲಿಸಿದವರು ವಾದಿರಾಜರು
ಈ ರೀತಿ ಶ್ರೀಕೃಷ್ಣಮಠದ ಕಾರ್ಯ ನೆರವೇರುತ್ತಿತ್ತು. ಮಧ್ವಾಚಾರ್ಯರ ನಂತರ ಮೂರು ಶತಮಾನಗಳ ಬಳಿಕ ಸೋದೆ ಮಠದಲ್ಲಿ ವಾದಿರಾಜರ ಅವತಾರವಾಯಿತು. ಇವರು ಶ್ರೇಷ್ಠ ಸಾಹಿತಿಯೂ, ಉತ್ತಮ ಆಡಳಿತಗಾರರೂ ಆಗಿ ಮಠದ ಈ ಪರ್ಯಾಯ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿದರು. ಕಾಲಕ್ಕೆ ತಕ್ಕಂತಹ ವ್ಯತ್ಯಾಸ ಅದಾಗಿತ್ತು. ಪರ್ಯಾಯ ವ್ಯವಸ್ಥೆಯು ಎರಡು ತಿಂಗಳ ಬದಲು ಎರಡು ವರ್ಷಗಳಿಗೊಮ್ಮೆ ನಡೆಯುವಂತೆ ಮಾಡಿದರು. ಈ ನಿಷ್ಠಾವಂತ ವಾದಿರಾಜ ಯತಿಗಳು ಮಾನವ ಪೂರ್ಣ ಆಯಸ್ಸು 125 ವರ್ಷ, 5 ದಿನಗಳನ್ನು ಆರೋಗ್ಯಪೂರ್ಣವಾಗಿ ನಡೆಸಿ, ಅನೇಕ ಧರ್ಮಗ್ರಂಥಗಳನ್ನೂ ರಚಿಸಿ, ಭಕ್ತರಿಗೆ ಮಾರ್ಗದರ್ಶಕರಾಗಿ ಸಶರೀರವಾಗಿ ವೃಂದಾವನಸ್ಥರಾದರು. ಇದೇ ಪ್ರಕಾರವಾಗಿ ಇಂದಿನ ವರೆಗೂ ಈ ನಿಯಮ ನಡೆಯುತ್ತಿದೆ.
ಯತಿ ನಿಯಮ ಏನನ್ನು ಹೇಳುತ್ತದೆ?
ಭಾರತ ದೇಶ ಬಿಟ್ಟು ಅನ್ಯ ಮತಸ್ಥರ ದೇಶಕ್ಕೆ ಹೋಗುವುದು ನಿಷಿದ್ಧ. ಸಮುದ್ರೋಲಂಘನ ಮಾಡಬಾರದು. ಯಾವುದೇ ರಾಜಕೀಯದಲ್ಲಿ ಸಕ್ರಿಯರಾಗಬಾರದು. ಯಾಕೆಂದರೆ ಯತಿಗಳಿಗೆ ಜಾತಿಭೇದ, ಪಕ್ಷಭೇದಗಳಿಲ್ಲ. ಯತಿ ನಿಯಮದ ಪ್ರಕಾರವೇ ಇರಬೇಕು. ಎಲ್ಲಾ ಬಿಟ್ಟರೆ ಅವರು ಎಷ್ಟು ತ್ಯಾಗ ಜೀವನ ನಡೆಸಬೇಕೆಂದರೆ, ಅವರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವುದಾಗಲೀ, ಸಹಿ ಹಾಕುವ ಹಕ್ಕಾಗಲೀ ಇರುವುದಿಲ್ಲ. ಎಲ್ಲರಲ್ಲೂ ಸಮಾನತೆ ಕಾಣುವವರಿಗೆ ಪರ ಎಂಬ ಮಾತೇ ಇರಬಾರದು ಎಂಬುದೇ ತತ್ವ.
ಸನ್ಯಾಸ ಸ್ಥಾನಕ್ಕೆ ಆಯ್ಕೆ ಹೇಗಿರಬೇಕು ಎಂಬ ಮಧ್ವಾಚಾರ್ಯರ ನಿಯಮ
ಉತ್ತಮ ಗೋತ್ರೋತ್ಪನ್ನ ಕುಟುಂಬದಿಂದಲೇ ಸನ್ಯಾಸ ಸ್ವೀಕರಿಸಲು ವಟುವಿನ ಆಯ್ಕೆಯೂ ಆಗಬೇಕು. ವೇದಾಧ್ಯಯನಾದಿ ಸಕಲ ಮುಖಗಳ ಸುಶಿಕ್ಷಣ ಪರಿಣತರಾಗಿ, ದೇಶದ ಜನರೊಳಗಿನ ನ್ಯೂನತೆಗಳನ್ನು ನಿವಾರಿಸಿ, ಭಾರತೀಯ ಪರಂಪರೆಯನ್ನು ಉದ್ಧಾರಗೊಳಿಸುವುದೇ ಯತಿಧರ್ಮ. ಇದೆಲ್ಲವೂ ಶ್ರೀ ಮಧ್ವಾಚಾರ್ಯರ ನಿಯಮ (ಆಂತರಿಕ ಕಾನೂನು). ಇಂತಹ ನಿಯಮವು ಪ್ರಕೃತಿಗೆ ಪೂರ್ಣ ಪೂರಕವಾಗಿರುವುದರಿಂದ ಇದರ ತಿದ್ದುಪಡಿಯ ಅಗತ್ಯವೂ ಇಲ್ಲ, ಮಾಡುವುದೂ ನಿಷಿದ್ಧವೆ.
ಮಠದ ನಿಯಮಕ್ಕಾಗಿ ಕನಕನಿಗೆ ಕಿಂಡಿಯ ಮೂಲಕ ದರ್ಶನ ವ್ಯವಸ್ಥೆ
ಯಾರ್ಯಾರು ಶ್ರದ್ಧಾ- ಭಕ್ತಿ, ಕರ್ಮಾದಿಗಳಿಂದ ಅಸ್ಪೃಶ್ಯರೋ ಅವರ ಏಳಿಗೆಗಾಗಿಯೇ ಈ ಯತಿಗಳಿರುವುದು ಎಂಬುದನ್ನು ತೋರಿಸಿಕೊಟ್ಟ ಗುರುಗಳೆಂದರೆ ಮಧ್ವಾಚಾರ್ಯರು. ಇದನ್ನು ಸಾಕಾರಗೊಳಿಸಿದ ಮಹಾಮುನಿಗಳಾದ ವಾದಿರಾಜರು ಪ್ರಥಮ ಉದಾಹರಣೆ. ನಿಮ್ನ ಕುಲ ಸಂಜಾತ ಕನಕದಾಸರು ಶೋಷಣೆಗೊಳಗಾದಾಗ, ವಾದಿರಾಜ ಯತಿಗಳು ಕನಕನೊಳಗಿನ ಶ್ರೀಕೃಷ್ಷನನ್ನು ಕಂಡರು. ಕನಕನಿಗೆ ಗುರುವಾಗಿ ಅಪ್ಪಿಕೊಂಡರು. ಕನಕನಿಗೆ ಪ್ರಿಯವಾದ ಗಂಜಿಯನ್ನು ಇಂದಿಗೂ ಶ್ರೀಕೃಷ್ಷನಿಗೆ ಮೊದಲು ಸಮರ್ಪಣೆ ಮಾಡುವ ಸಂಪ್ರದಾಯವಿದೆ. ಆದರೆ ಆಗಮೋಕ್ತ ವಿಚಾರಗಳಿಗೆ ಚ್ಯುತಿ ಬರಬಾರದೆಂದು, ಮಠದ ನಿಯಮಕ್ಕಾಗಿ ಅಂದು ಕನಕನಿಗೆ ಕಿಂಡಿಯ ಮೂಲಕ ದರ್ಶನದ ವ್ಯವಸ್ಥೆ ಮಾಡಿಸಿದರು. ಇಂದು ಕಾಲ ಬದಲಾಗಿದೆ. ದಲಿತ, ಶೋಷಿತ ಎಂಬ ಪದ ಬಿದ್ದುಹೋಗಿದೆ. ಹಾಗಾಗಿ ಸರ್ವರಿಗೂ ಪ್ರವೇಶವಿದೆ. ಈ ವ್ಯವಸ್ಥೆಗೂ ಮೂಲ ಕಾರಣ ಯತಿಗಳೆಂದರೆ ಈಗಿನ ಪೇಜಾವರ ಮಠದ ವಿಶ್ವೇಶ ತೀರ್ಥ ಪಾದಂಗಳವರು.