ಕಾಪು, ಮಲ್ಪೆಯಲ್ಲಿ ಕಡಲ ಅಬ್ಬರಕ್ಕೆ ಇಬ್ಬರು ಮೀನುಗಾರರು ಬಲಿ
ಉಡುಪಿ, ಆಗಸ್ಟ್ 14: ಉಡುಪಿಯಲ್ಲಿ ಮಳೆ, ಕಡಲ ಅಬ್ಬರಕ್ಕೆ ಇಬ್ಬರು ಮೀನುಗಾರರು ಬಲಿಯಾಗಿದ್ದಾರೆ. ಮಲ್ಪೆ ಮತ್ತು ಕಾಪು ಕಡಲ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಾಪು ಸಮೀಪದ ಉಳಿಯಾರಗೋಳಿಯ ಸಂಜೀವ ಕೋಟ್ಯಾನ್ (55) ಮತ್ತು ಉದ್ಯಾವರ ಪಿತ್ರೋಡಿಯ ಗೋವರ್ಧನ ಕುಂದರ್ (42) ಮೃತ ಮೀನುಗಾರರು. ಅರಬ್ಬೀ ಸಮುದ್ರದಲ್ಲಿ ಸಂಜೀವ ಕೋಟ್ಯಾನ್ ಇತರೆ ಮೀನುಗಾರರ ಜೊತೆ ಮೀನುಗಾರಿಕೆಗೆ ತೆರಳಿದ್ದರು. ಪಡುಬಿದ್ರೆ ಕಡಲ ಕಿನಾರೆಯಿಂದ ಎರಡು ಕಿ.ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಡಲ ಅಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಲ್ಪೆ ಸಮೀಪ ಕಡಲಲ್ಲಿ ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ. ಉದ್ಯಾವರ ಸಮೀಪದ ಪಿತ್ರೋಡಿಯ ಗೋವರ್ಧನ ಕುಂದರ್ ಮೃತಪಟ್ಟ ಮೀನುಗಾರರು. ಗೋವರ್ಧನ ಕುಂದರ್ ಟ್ರಾಲ್ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮಲ್ಪೆ ಲೈಟ್ ಹೌಸ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಒಮ್ಮೆಲೆ ಕುಸಿದು ಮೃತಪಟ್ಟಿದ್ದಾರೆ. ಜೊತೆಗೆ ಇದ್ದವರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.