ಮಲ್ಪೆಯಲ್ಲಿ ಕಡಲು ಪ್ರಕ್ಷುಬ್ಬ, ಬೋಟುಗಳು ಮುಳುಗಡೆ: ಮೀನುಗಾರರ ರಕ್ಷಣೆ
ಉಡುಪಿ, ಆಗಸ್ಟ್.12: ಕಡಲು ಪ್ರಕ್ಷುಬ್ದವಾದ ಹಿನ್ನಲೆಯಲ್ಲಿ ಭಟ್ಕಳ-ಗಂಗೊಳ್ಳಿ ನಡುವೆ ಎರಡು ಬೋಟುಗಳು ಮುಳುಗಡೆಯಾಗಿವೆ. ಶನಿವಾರ ಬೆಳಗ್ಗೆ ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಶಿವಗಣೇಶ ಬೋಟು ಸಂಜೆ ಮರಳುವಾಗ ಮುಳುಗಡೆಯಾಗಿದೆ.
ಬೋಟಿನಲ್ಲಿ ತೂತು ಬಿದ್ದಿದ್ದರಿಂದ ಇಂದು ಭಾನುವಾರ ಬೆಳಗ್ಗೆ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಬೋಟು ಕೂಡ ಮುಳುಗಡೆಯಾಗಿದೆ. ಮೀನುಗಾರರ ಮಾಹಿತಿ ಮೇರೆಗೆ ರಕ್ಷಣೆಗೆ ಸ್ಥಳಕ್ಕೆ ಬೋಟುಗಳು ತೆರಳಿ, ಇದೀಗ ಮೀನುಗಾರರ ರಕ್ಷಣೆ ಮಾಡಲಾಗಿದೆ.
ಕರಾವಳಿಯ ಆಳ ಸಮುದ್ರದಲ್ಲಿ ಮತ್ತೆ ಕಡಲ ಮಕ್ಕಳ ಕಲರವ ಆರಂಭ
ಶನಿವಾರ ಸಂಜೆ ಮುಳುಗುತ್ತಿದ್ದ ಶಿವಗಣೇಶ್ ಬೋಟಿನಲ್ಲಿದ್ದ 8 ಮಂದಿಯನ್ನು ಮಲ್ಪೆಯ ಬೇರೊಂದು ಬೋಟು ರಕ್ಷಣೆ ಮಾಡಿದ್ದು, ಇಂದು ಭಾನುವಾರ ಬೆಳಗ್ಗೆ ಮುಳುಗುತ್ತಿದ್ದ ಪದ್ಮದಾಸ್ ಬೋಟಿನಲ್ಲಿದ್ದ 8 ಮಂದಿಯನ್ನು ಭಜರಂಗಿ ಬೋಟಿನ ಮೀನುಗಾರರು ರಕ್ಷಿಸಿದ್ದಾರೆ.
ಶನಿವಾರ ಸಂಜೆ ಹಾಗೂ ಇಂದು ಭಾನುವಾರ ಬೆಳಗ್ಗೆ ಪ್ರತ್ಯೇಕ ಬೋಟು ಮುಳುಗಡೆಯಲ್ಲಿ 16ಮಂದಿ ಮೀನುಗಾರರ ರಕ್ಷಣೆ ಮಾಡಲಾಗಿದೆ. ಗಾಳಿ ಮಳೆ ಹೆಚ್ಚಾಗಿ ಕಡಲು ಪ್ರಕ್ಷ್ಯುಬ್ದವಾದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ.