ಉಡುಪಿಯಲ್ಲಿ ಮದಿರಂಗಿ ರಂಗ್: ಅಪ್ಪಟ ದೇಸಿ ಸ್ಪರ್ಧೆಯಲ್ಲಿ ಮಿಂದೆದ್ದ ಜನ
ಉಡುಪಿ, ಜುಲೈ.03: ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವಷ್ಟು ಕೂಡ ಜನರಿಗೆ ವ್ಯವಧಾನ ಇರುವುದಿಲ್ಲ. ಇನ್ನು ಯುವ ಜನಾಂಗ ದೈನಂದಿನ ಚಟುವಟಿಕೆಗಳನ್ನೇ ಮರೆತುಬಿಟ್ಟಿದೆ.
ಈ ಉದ್ದೇಶದಿಂದಲೇ ಯುವಜನತೆಗೆ ಮಳೆಗಾಲದ ಸಾಂಸ್ಕೃತಿಕ ವೈಭವವನ್ನು ಮತ್ತೆ ನೆನಪಿಸಬೇಕು ಎಂಬ ಉದ್ದೇಶದಿಂದ ಉಡುಪಿಯ ತುಳುಕೂಟ ವಿಶಿಷ್ಟವಾದ ಸ್ಪರ್ಧೆಯನ್ನು ಆಯೋಜಿಸಿತ್ತು. ಅದೇ 'ಮದಿರಂಗಿ ರಂಗ್'.
ರಾಯಚೂರು: ಎರಡನೇ ದಿನವೂ ಅದ್ದೂರಿಯಾಗಿ ನಡೆದ ಮುಂಗಾರು ಹಬ್ಬ
ಕೂದಲು ಉದ್ದ ಬಂದ್ರೆ ಜಡೆ ಹೆಣೆಯಬೇಕಲ್ವಾ? ಆ ಪ್ರಾಬ್ಲಂ ಬೇಡ ಅಂತ ಕೂದಲನ್ನು ಕಟ್ ಮಾಡಿ, ಕ್ಲಿಪ್ ಹಾಕೋದು. ಮನೆ ಮುಂದೆ ದಿನಾ ರಂಗೋಲಿ ಹಾಕೋದು ಬೋರು ಅಂತ ಪೈಂಟಲ್ಲೇ ರಂಗೋಲಿ ಮಾಡೋದು. ಹೂವು ಕಟ್ಟೋದಕ್ಕೆ ಗೊತ್ತಿಲ್ಲ ಅಂತ ಅಂಗಡಿಯಿಂದಲೇ ಎಲ್ಲವನ್ನೂ ಪರ್ಚೇಸ್ ಮಾಡೋದು.
ಇನ್ನು ಮದರಂಗಿ ಹಚ್ಚೋದು, ಬಳೆ ತೊಡೋದೆಲ್ಲಾ ಈಗಿನ ಯುವತಿಯರು ಮರೆತೇಬಿಟ್ಟಿದ್ದಾರೆ. ಇದನ್ನೆಲ್ಲ ಮತ್ತೆ ಯುವಜನತೆಗೆ ನೆನಪಿಸುವ ಉದ್ದೇಶದಿಂದ ಉಡುಪಿಯಲ್ಲಿ ತುಳುಕೂಟ ವಿಭಿನ್ನ ಸ್ಪರ್ಧೆಯನ್ನು ಆಯೋಜಿಸಿ ಜನಮನ್ನಣೆಗೆ ಪಾತ್ರವಾಯಿತು.
ಢಿಫರೆಂಟ್ ಹೇರ್ ಸ್ಟೈಲ್
ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಂಗಣದಲ್ಲಿ ಹೆಣ್ಣುಮಕ್ಕಳದ್ದೇ ಕಲರವ. ಹೊರಗಡೆ ಮುಂಗಾರು ಮಳೆ ಸುರಿಯುತ್ತಿದ್ದರೆ ಸಭಾಂಗಣದೊಳಗೆ ಮಹಿಳೆಯರ ಸಂಖ್ಯೆ ಭರ್ತಿಯಾಗಿತ್ತು. ಯಾಕಂದ್ರೆ ಯುವತಿಯರಿಗೆ ಜಡೆ ಕಟ್ಟುವ, ವಿಭಿನ್ನ ಹೇರ್ ಸ್ಟೈಲ್ ಮಾಡುವ ವಿಶೇಷ ಕಾರ್ಯಕ್ರಮವಿತ್ತು.
ಈ ಸ್ಪರ್ಧೆಯಲ್ಲಿ ಸುಮಾರು 50 ಮಂದಿ ಪಾಲ್ಗೊಂಡು, ಢಿಫರೆಂಟಾಗಿ ಜಡೆಗಳನ್ನು ಹೆಣೆದಿದ್ದು ವಿಶೇಷವಾಗಿತ್ತು.
ರಂಗು ರಂಗಿನ ಮೆಹಂದಿ ಸ್ಪರ್ಧೆ
ಮತ್ತೊಂದು ಕಡೆ ಹುಡುಗಿಯರ ಮೆಹಂದಿ ಸ್ಪರ್ಧೆ ರಂಗೇರಿತ್ತು. ಈಗೀಗ ಯುವತಿಯರು ಫ್ಯಾನ್ಸಿ ಅಂಗಡಿಗಳಿಂದ ಕೋನ್ ಗಳನ್ನು ತಂದು ಮೆಹಂದಿ ಹಾಕ್ತಾರೆ. ಅದಕ್ಕಾಗಿಯೇ ದೇಸಿ ಶೈಲಿಯ ಮೆಹಂದಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಕೋನ್ ಮೆಹಂದಿಯನ್ನು ಬ್ಯಾನ್ ಮಾಡಿ, ಮದರಂಗಿ ಸೊಪ್ಪು ಅರೆದು ತಯಾರಿಸಿದ ಮೆಹಂದಿ ಹಾಕಲು ಮಾತ್ರ ಅವಕಾಶವಿತ್ತು. ಯುವತಿಯರು, ಮಕ್ಕಳು ದೇಸೀ ಸ್ಟೈಲ್ ನಲ್ಲಿ ಮೆಹಂದಿಯಿಟ್ಟು ಸಂಭ್ರಮಿಸಿದರು.
ಹೂ ಕಟ್ಟಿದ ಅಜ್ಜಿಯರು
ಈಗ ಮನೆಯಲ್ಲಿ ಹೂವಿನ ಗಿಡ ಬೆಳೆಯೋದಂತು ದೂರದ ಮಾತು. ಇನ್ನು ಹೂವು ಕಟ್ಟೋದು ಯಾರಿಗೂ ಗೊತ್ತೇ ಇಲ್ಲ. ಹಾಗಾಗಿ ಹೂವು ಕಟ್ಟುವ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಅಜ್ಜಿಯಂದಿರು, ಮಹಿಳೆಯರು- ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದರು.
ತುತ್ತೂರಿ ಪ್ರದರ್ಶನ
ಇನ್ನು ಮಕ್ಕಳಿಗೆ ಎಲೆಯಲ್ಲಿ ಪೀ...ಪಿ ತಯಾರು ಮಾಡುವ, ಹಲಸಿನ ಬೀಜದ ಸಿಪ್ಪೆ ಸುಲಿಯುವ ವಿಭಿನ್ನ ಸ್ಪರ್ಧೆಗಳಿದ್ದವು. ಹಳ್ಳಿಗಾಡಿನವರಿಗೆ ಮಾತ್ರ ಮಾಡಿ ಗೊತ್ತಿರುವ ತುತ್ತೂರಿಯನ್ನು ಸಿಟಿಯ ಮಕ್ಕಳು ಮಾಡಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಒಟ್ಟಿನಲ್ಲಿ ಅದೊಂದು ಅಪ್ಪಟ ದೇಸಿ ಸ್ಪರ್ಧೆ. ಉಡುಪಿಯ ತುಳುಕೂಟ ವಿಭಿನ್ನವಾದ ಕಾರ್ಯಕ್ರಮ ಆಯೋಜಿಸಿ ಜನ ಮೆಚ್ಚುಗೆಗೆ ಪಾತ್ರವಾಯಿತು.