ಪ್ರವಾಸಿಗರೇ ಕರಾವಳಿ ಪ್ರವಾಸವನ್ನು 1 ತಿಂಗಳು ಮುಂದೂಡಿ; ಕಾರಣ ಇಲ್ಲಿದೆ ನೋಡಿ...
ಉಡುಪಿ, ಆಗಸ್ಟ್ 06: ಕರಾವಳಿ ಭಾಗದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದೆ. ಮಳೆಯ ಹನಿ ಇಳೆಗೆ ಬಿದ್ದಾಗ, ಇಳೆಯಲ್ಲಾಗುವ ಪುಳಕ, ಮಳೆ ನೀರಿನಿಂದ ಸೃಷ್ಟಿಯಾಗಿ ಭೋರ್ಗರೆಯುವ ಜಲಪಾತ, ಝುಳು ಝುಳು ಹರಿಯುವ ನದಿ, ಕಡಲತಟದ ಬಿರುಸಾದ ಗಾಳಿ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಸಿರು ಈ ಎಲ್ಲಾ ದೃಶ್ಯ ವೈಭೋಗ ಒಂದೇ ಪ್ರದೇಶದಲ್ಲಿ ಕಾಣ ಸಿಗಬೇಕಾದರೆ ನೀವು ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಬೇಕು.
ಆದರೆ ನೀವೇನಾದರೂ ಕೃಷ್ಣನಗರಿ ಉಡುಪಿಗೆ ಟೂರ್ ಪ್ಲ್ಯಾನ್ ಹಾಕಿದ್ದರೆ, ನಿಮ್ಮ ಆ ಪ್ಲ್ಯಾನ್ನ್ನು ಸ್ವಲ್ಪ ಮುಂದೂಡಿ. ಯಾಕೆಂದರೆ ಕಡಲ ಅಲೆಗಳ ಜೊತೆಗೆ ಆಟವಾಡುವ ನಿಮ್ಮ ಆಸೆಗೆ ಜಿಲ್ಲಾಡಳಿತ ತಣ್ಣೀರು ಎರಚಿದೆ. ಜನರು ಸಮುದ್ರಕ್ಕೆ ಇಳಿಬಾರದು ಅಂತ ಉಡುಪಿ ಜಿಲ್ಲಾಡಳಿತ ಸಮುದ್ರಕ್ಕೆ ಬೇಲಿ ಹಾಕಿ ಬಂದ್ ಮಾಡಿದೆ.
ವಿಶೇಷ ವರದಿ: ಕೊರೊನಾ ಮಾರಿಯನ್ನು ದೂರ ಮಾಡಲು ಬಂದ ಆಟಿ ಕಳೆಂಜ!
ದೊಡ್ಡ ಮೊತ್ತದ ದಂಡ ಬೀಳುತ್ತದೆ
ಎಚ್ಚರಿಕೆ ಬೋರ್ಡ್, ಎಚ್ಚರಿಸುವ ಹೋಮ್ ಗಾರ್ಡ್ ಅಪ್ಪಿ ತಪ್ಪಿ ಸಮುದ್ರ ಇಳಿದರೆ ದೊಡ್ಡ ಮೊತ್ತದ ದಂಡ ಬೀಳುತ್ತದೆ. ಇದು ಉಡುಪಿಯ ಮಲ್ಪೆ ಸಮುದ್ರ ತೀರದ ಸದ್ಯದ ಸ್ಥಿತಿ. ಹೌದು, ಉಡುಪಿಗೆ ಬರಬೇಕು, ಮಲ್ಪೆಯ ನೀಲಿ ಸಮುದ್ರ ನೋಡಬೇಕು, ಬಿಳ್ನೊರೆಯ ಅಲೆಗಳ ಜೊತೆಗೆ ಆಟವಾಡಬೇಕು, ವಿಹಂಗಮ ನೋಟ ಸವಿಯಬೇಕು ಅಂತ ನೀವೇನಾದರೂ ಉಡುಪಿ ಟ್ರಿಪ್ ಪ್ಲ್ಯಾನ್ ಹಾಕಿದರೆ, ಸೆಪ್ಟೆಂಬರ್ 15 ರವರೆಗೆ ನಿಮ್ಮ ಪ್ಲ್ಯಾನ್ ಮುಂದೂಡಬೇಕಾಗುತ್ತದೆ.
ಕರಾವಳಿ ಭಾಗದಲ್ಲಿ ನಿರಂತರ ಮಳೆ
ಯಾಕೆ ಹಿಂಗೆ ಅಂದರೆ, ಇತ್ತೀಚಿಗೆ ಇದೇ ಮಲ್ಪೆ ಸಮುದ್ರದಲ್ಲಿ 4 ಜನ ಪ್ರವಾಸಿಗರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಕೊನೆಗೆ ಮೂವರು ಬದುಕುಳಿದು ಓರ್ವ ಯುವತಿ ಸಾವನ್ನಪ್ಪಿದ್ದಳು. ಮಲ್ಪೆಯ ಜೀವ ರಕ್ಷಕ ತಂಡದ ಸಿಬ್ಬಂದಿ ಮಾತನ್ನು ಲೆಕ್ಕಿಸದೇ ಮೋಜು ಮಸ್ತಿಯಲ್ಲಿ ತೊಡಗಿದ್ದರಿಂದ ಸಮುದ್ರ ಹೊರಚಾಚಿದ ರಕ್ಕಸ ಗಾತ್ರದ ಅಲೆ ಯುವತಿಯನ್ನು ಕೊಚ್ಚಿಕೊಂಡು ಹೋಗಿ ದಿನ ಕಳೆದು ಯುವತಿಯ ಮೃತ ದೇಹ ಸಿಕ್ಕಿತ್ತು. ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಅಲೆಗಳ ಅಬ್ಬರ ಕೂಡ ಜೋರಾಗಿದೆ. ಅರಬ್ಬೀ ಸಮುದ್ರ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ.
ಸಮುದ್ರ ದಡದಲ್ಲಿ ಬಲೆಗಳಿಂದ ಬೇಲಿ
ಈ ಹಿನ್ನಲೆಯಲ್ಲಿ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ, ಸಮುದ್ರ ದಡದಲ್ಲಿ ಬಲೆಗಳಿಂದ ಬೇಲಿ ಹಾಕಿ ಮುಂದಕ್ಕೆ ಹೋಗದಂತೆ ಉಡುಪಿ ಜಿಲ್ಲಾಡಳಿತ ಎಚ್ಚರಿಕೆ ಬೋರ್ಡ್ ಹಾಕಿದೆ. ಸೂಚನೆ ಹೊರತಾಗಿಯೂ ಸಮುದ್ರಕ್ಕೆ ಇಳಿದರೆ 500 ರೂ. ಡಂಡ ವಿಧಿಸುವುದಾಗಿ ಎಚ್ಚರಿಸಿದೆ. ಈ ಆದೇಶ ಸೆಪ್ಟೆಂಬರ್ 15 ರವರೆಗೂ ಮುಂದುವರಿಯಲಿದೆ.
ಉಡುಪಿ ಜಿಲ್ಲಾಡಳಿತದ ಈ ಏಕಾಏಕಿ ಆದೇಶದ ಬಗ್ಗೆ ಪ್ರವಾಸಿಗರು ಬೇಸರಗೊಂಡಿದ್ದಾರೆ. ಸಮುದ್ರದ ಅಲೆಗಳ ಜೊತೆಗೆ ಆಟ ಮಾಡಬೇಕು ಅಂತ ದೂರದಿಂದ ಬಾಡಿಗೆ ವಾಹನ ಮಾಡಿಕೊಂಡು ಬಂದ ಸಾವಿರಾರು ಪ್ರವಾಸಿಗರು, ಸಮುದ್ರದ ಅಲೆಗಳ ಜೊತೆಗೆ ಆಟವಾಡಲು ಆಗದೇ ದೂರದಿಂದಲೇ ನೋಡಿಕೊಂಡು ದಡದಲ್ಲೇ ಆಟವಾಡುತ್ತಿದ್ದಾರೆ..
Recommended Video
ಧರ್ಮಸ್ಥಳ, ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾತ್ರ
ಒಟ್ಟಿನಲ್ಲಿ ನೀವೇನಾದರೂ ಇನ್ನು ಒಂದು ತಿಂಗಳು ಕರಾವಳಿ ಪ್ರವಾಸದ ಯೋಚನೆ ಹಾಕಿದರೆ ಸದ್ಯಕ್ಕೆ ಕೈ ಬಿಡುವುದೇ ಬೆಸ್ಟ್. ಯಾಕೆಂದರೆ ಅತ್ತ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಮುಂತಾದ ತೀರ್ಥ ಕ್ಷೇತ್ರಗಳಲ್ಲೂ ಕೊರೊನಾ ಸೋಂಕಿನ ಕಾರಣದಿಂದ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ ಇದೆ.
ಒಂದು ವೇಳೆ ದೇವಸ್ಥಾನಕ್ಕೆ ಬರಲೇಬೇಕು ಅಂತಿದ್ದರೆ ಕೇವಲ ದೇವರ ದರ್ಶನ ಮಾತ್ರ ಮಾಡಬಹುದು. ಸೇವೆಗಳನ್ನು ಮಾಡುವಂತಿಲ್ಲ. ಹರಕೆಯನ್ನು ಒಪ್ಪಿಸುವಂತಿಲ್ಲ. ಒಂದೆಡೆ ಧಾರ್ಮಿಕ ಕ್ಷೇತ್ರಗಳ ಸ್ಥಿತಿ ಈ ರೀತಿಯಾದರೆ ಇತ್ತ ಸಮುದ್ರಕ್ಕೂ ಇಳಿಯೋಕೂ ಬಿಡುವುದಿಲ್ಲ. ಹೀಗಾಗಿ ನೀವೇನಾದರೂ ಅಪ್ಪಿತಪ್ಪಿ ಬಂದರೂ ಬಂದ ದಾರಿಗೆ ಸುಂಕ ಇಲ್ಲ ಎನ್ನುವ ಪರಿಸ್ಥಿತಿ ನಿಮ್ಮದಾಗಬಹುದು. ಯಾವುದಕ್ಕೂ ಒಮ್ಮೆ ಯೋಚನೆ ಮಾಡಿ.