ಕಾರ್ಕಳ ಬಳಿ ಬಸ್ ಅಪಘಾತ 9 ಸಾವು, ಹಲವು ಮಂದಿಗೆ ಗಾಯ
ಉಡುಪಿ, ಫೆಬ್ರವರಿ 15: ಪ್ರವಾಸಿ ಬಸ್ ಒಂದು ಕಾರ್ಕಳದ ಬಳಿ ಅಪಘಾತಕ್ಕೆ ತುತ್ತಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.
ಕಾರ್ಕಳ ತಾಲೂಕಿನ ಮಾಳ ಬಳಿ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ತುತ್ತಾಗಿರುವ ಬಸ್ಸು ಮೈಸೂರು ಜಿಲ್ಲೆಯ ಪ್ರವಾಸಿ ಬಸ್ಸಾಗಿತ್ತು ಎನ್ನಲಾಗಿದೆ. ಬಸ್ಸಿನಲ್ಲಿ 35 ಮಂದಿ ಪ್ರವಾಸಿಗರು ಪ್ರಯಾಣಿಸುತ್ತಿದ್ದರು.
ಬಸ್ಸು ಪ್ರವಾಸಿಗರನ್ನು ಹೊತ್ತು ಮೈಸೂರಿನಿಂದ ಮಂಗಳೂರಿಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ರಸ್ತೆಯ ಪಕ್ಕದ ಬಂಡೆಗೆ ಬಸ್ಸು ಢಿಕ್ಕಿ ಹೊಡೆದ ಪರಣಾಮ ಅಪಘಾತ ಸಂಭವಿಸಿದೆ.
ಎಸ್ ಕೆ ಬಾರ್ಡರ್ ಸಮೀಪದ ಅಬ್ಬಾಸ್ ಕಟ್ಟಿಂಗ್ ಬಳಿ ಢಿಕ್ಕಿ ಸಂಭವಿಸಿದ್ದು, 9 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಲವು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ವ್ಯಕ್ತಪಡಿಸಲಾಗಿದೆ.
ಅಪಾಯಕಾರಿ ತಿರುವಿನಲ್ಲಿ ಪ್ರಯಾಣಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬಸ್ನ ಮುಂಭಾಗ ಸಂಪೂರ್ಣ ನಜ್ಜು-ಗುಜ್ಜಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಶವಗಳು ರಸ್ತೆಯಲ್ಲಿ ಬಿದ್ದಿವೆ.