ಕೃಷ್ಣಮಠದಲ್ಲಿ ಅದ್ಧೂರಿಯ ವಿಟ್ಲಪಿಂಡಿಯಲ್ಲಿ ಸಾವಿರಾರು ಭಕ್ತರು ಭಾಗಿ
ಉಡುಪಿ, ಆಗಸ್ಟ್ 24: ಅಷ್ಟಮಿಯ ಅಂಗವಾಗಿ ಇಂದು ಉಡುಪಿ ಕೃಷ್ಣಮಠದಲ್ಲಿ ಶ್ರೀಕೃಷ್ಣಲೀಲೋತ್ಸವ-ವಿಟ್ಲಪಿಂಡಿ ಉತ್ಸವ ವೈಭವದಿಂದ ನಡೆಯಿತು. ಉತ್ಸವದ ಅಂಗವಾಗಿ ಬೆಳಿಗ್ಗೆ ಮಹಾಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನಪ್ರಸಾದ ನೀಡಲಾಯಿತು.
ಮಧ್ಯಾಹ್ನ ಎರಡೂವರೆ ಸುಮಾರಿಗೆ ಗೊಲ್ಲರು ಕೃಷ್ಣಮಠದ ಮುಂಭಾಗ ಮೊಸರು ಗಡಿಗೆಗಳನ್ನು ಒಡೆಯುವುದರೊಂದಿಗೆ ವಿಟ್ಲಪಿಂಡಿಗೆ ಚಾಲನೆ ದೊರೆಯಿತು. ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ವೈಭವದ ಶೋಭಾಯಾತ್ರೆ ನಡೆಸಲಾಯಿತು. ಬಳಿಕ ವಿವಿಧ ತಂಡಗಳ ಹುಲಿವೇಷ ಮತ್ತು ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಉತ್ಸವದ ಸಂಭ್ರಮವನ್ನು ಪರಾಕಾಷ್ಠೆಗೆ ಒಯ್ದಿತು.
ಅಷ್ಟಮಿ ಪ್ರಯುಕ್ತ ಮಧ್ಯರಾತ್ರಿ ಕೃಷ್ಣನಿಗೆ ಅರ್ಘ್ಯ ಸಮರ್ಪಣೆ
ಉಡುಪಿಯಲ್ಲಿ ನಿನ್ನೆಯಿಂದ ಆರಂಭಗೊಂಡ ಕೃಷ್ಣಜನ್ಮಾಷ್ಟಮಿ ವೈಭವ ಇಂದು ಶ್ರೀಕೃಷ್ಣ ಲೀಲೋತ್ಸವ-ವಿಟ್ಲಪಿಂಡಿ ಉತ್ಸವದೊಂದಿಗೆ ತಾರಕಕ್ಕೇರಿತು. ವಿಟ್ಲಪಿಂಡಿ ಉತ್ಸವವಾದ ಇಂದು ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೃಷ್ಣಮಠದಲ್ಲಿ ಸಂಪನ್ನಗೊಂಡವು. ಬೆಳಿಗ್ಗೆ ಏಳೂವರೆ ಸುಮಾರಿಗೆ ಮಹಾಪೂಜೆ ಬಳಿಕ ರಾಜಾಂಗಣ -ರಥಬೀದಿಗಳಲ್ಲಿ ಕೀರ್ತನೆಗಳು ಭಜನೆಗಳು ಅನುರಣನಗೊಂಡವು.
ರಥಬೀದಿಯಲ್ಲಿ ಹಾಕಲಾದ ಬೃಹತ್ ವೇದಿಕೆಯಿಂದ ಪರ್ಯಾಯ ಶ್ರೀಗಳು ಭಕ್ತಾದಿಗಳಿಗೆ ಪ್ರಸಾದ ಎಸೆಯುವಾಗ ಭಕ್ತರ ಕರತಾಡನ-ಕೇಕೆ ಮುಗಿಲು ಮುಟ್ಟಿತ್ತು; ಈ ವೇಳೆ ಸ್ತಬ್ಧಚಿತ್ರಗಳು, ಮರಕಾಲು, ವಾದ್ಯ -ಓಲಗ, ವೇಷಧಾರಿಗಳು ರಥೋತ್ಸವಕ್ಕೆ ವಿಶೇಷ ಮೆರುಗು ತಂದವು.
ಕೃಷ್ಣನ ಮೂರ್ತಿ ಜಲಸ್ಥಂಭನ: ವಿಟ್ಲಪಿಂಡಿ ಉತ್ಸವಕ್ಕೆ ಆಗಮಿಸಿದ ಭಕ್ತರಿಂದ ರಥಬೀದಿ; ಕೃಷ್ಣಮಠ ಮತ್ತು ರಾಜಾಂಗಣ ತುಂಬಿ ತುಳುಕುತ್ತಿತ್ತು. ಕೃಷ್ಣಮಠಕ್ಕೆ ಕೃಷ್ಣಮಠವೇ ಸಾಟಿ ಎಂಬಂತಿದ್ದ ಉತ್ಸವಕ್ಕೆ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಜಲಸ್ಥಂಭನ ಮಾಡುವುದರೊಂದಿಗೆ ಕೃಷ್ಣಾರ್ಪಣ ಮಾಡಲಾಯಿತು.
ಉಡುಪಿಯ ಕೃಷ್ಣನ ಕಂಡೀರಾ? ಅಷ್ಟಮಿಯ ಚಕ್ಕುಲಿ ತಿಂದೀರಾ?
ಪರ್ಯಾಯ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ನಡೆದ ರಥೋತ್ಸವದಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪುಳಕಿತರಾದರು.