ಕೊನೆ ಗಳಿಗೆಗೆ ಇಫ್ತಾರ್ ಕೂಟ ರದ್ದು: ಒತ್ತಡಕ್ಕೆ ಮಣಿದರೇ ಪೇಜಾವರ ಶ್ರೀ?
Recommended Video
ಉಡುಪಿ, ಜೂನ್.12: ಕಳೆದ ಬಾರಿ ಪೇಜಾವರ ಶ್ರೀಗಳು ರಂಜಾನ್ ತಿಂಗಳಲ್ಲಿ ಮುಸಲ್ಮಾನರಿಗೆ ಸೌಹಾರ್ದ ಇಫ್ತಾರ್ ಕೂಟ ಏರ್ಪಡಿಸಿದ್ದು, ಭಾರೀ ಪರ-ವಿರೋಧ ಚರ್ಚೆಗೆ ಕಾರಣವಾಗಿತ್ತು.
ಈ ಸಲ ರಂಜಾನ್ ತಿಂಗಳಲ್ಲಿ ಮುಸಲ್ಮಾನರಿಗೆ ಇಫ್ತಾರ್ ಕೂಟ ಏರ್ಪಡಿಸುವ ಇಚ್ಛೆಯನ್ನು ಪೇಜಾವರ ಶ್ರೀಗಳು ವ್ಯಕ್ತಪಡಿಸಿದ್ದರು. ಆದರೆ ಕಾರಣಾಂತರಗಳಿಂದ ಈ ಬಾರಿಯ ಇಫ್ತಾರ್ ರದ್ದಾಗಿದೆ.
ರಂಜಾನ್ ತಿಂಗಳು ಬಂತೆಂದರೆ ಸಾಕು ಜಾತಿ ಬೇಧ ಮರೆತು ಸೌಹಾರ್ದ ಇಫ್ತಾರ್ ಕೂಟಗಳು ನಡೆಯುತ್ತವೆ. ಮುಸ್ಲೀಮರು ವರ್ಷಕ್ಕೆ ಒಂದು ತಿಂಗಳು ಉಪವಾಸದಲ್ಲಿರುವ ಪವಿತ್ರ ತಿಂಗಳು ಇದು.
ವಿಶ್ವೇಶ ತೀರ್ಥರ ಟೂರ್, ಮುಸ್ಲಿಮರ ನಿರಾಸಕ್ತಿ: ಉಡುಪಿ ಇಫ್ತಾರ್ ರದ್ದು
ಈ ಸಂದರ್ಭ ಮುಸಲ್ಮಾನರು ಮಾತ್ರವಲ್ಲದೆ ಹಿಂದೂ, ಕ್ರಿಶ್ಚಿಯನ್ನರು ಸಹ ರಂಜಾನ್ ತಿಂಗಳ ಇಫ್ತಾರ್ ಕೂಟಗಳನ್ನು ಏರ್ಪಡಿಸಿ ಸೌಹಾರ್ದತೆ ಮೆರೆಯುವುದು ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
ಕಳೆದ ವರ್ಷ ಹಿರಿಯ ಯತಿ ಪೇಜಾವರ ಶ್ರೀಗಳು ಇಂತಹದ್ದೊಂದು ನಿರ್ಧಾರಕ್ಕೆ ಬಂದು ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದರು. ಕೃಷ್ಣಮಠಕ್ಕೆ ಮುಸಲ್ಮಾನರನ್ನು ಆಹ್ವಾನಿಸಿ ಇಫ್ತಾರ್ ಕೊಡುವ ಮೂಲಕ ಸೌಹಾರ್ದದ ವಾತಾವರಣ ನಿರ್ಮಿಸುವುದು ಪೇಜಾವರ ಶ್ರೀಗಳ ಉದ್ದೇಶವಾಗಿತ್ತು.
ಅದರಂತೆ ಇಫ್ತಾರ್ ಕೂಟವೂ ನಡೆಯಿತು. ಪೇಜಾವರರ ಈ ಕ್ರಾಂತಿಕಾರಿ ಹೆಜ್ಜೆಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಯಿತು. ಈ ಸಲವೂ ಇಫ್ತಾರ್ ಕೂಟ ಏರ್ಪಡಿಸುವ ಬಯಕೆಯನ್ನು ಪೇಜಾವರ ಶ್ರೀಗಳು ವ್ಯಕ್ತಪಡಿಸಿದ್ದರು.
ಆದರೆ ಹಿಂದೂ ಸಂಘಟನೆಗಳು ಮತ್ತು ಮುಖಂಡರ ಒತ್ತಡಕ್ಕೆ ಮಣಿದು ಶ್ರೀಗಳು ಇಫ್ತಾರ್ ನಿಂದ ಹಿಂದೆ ಸರಿದಿದ್ದಾರೆ. ರಂಜಾನ್ ತಿಂಗಳು ಇನ್ನೇನು ಮೂರೇ ದಿನ ಇದೆ. ಈ ತಿಂಗಳ 13 ರಂದು ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ಸೌಹಾರ್ದ ಇಫ್ತಾರ್ ಏರ್ಪಡಿಸಲು ಮಾತುಕತೆಗಳೂ ನಡೆದಿದ್ದವು.
ಆದರೆ ಇದೀಗ ಕೊನೆಯ ಕ್ಷಣದಲ್ಲಿ ಅದು ರದ್ದಾಗಿದೆ. ಇದಕ್ಕೆ ಉಡುಪಿ ಶಾಸಕ ರಘುಪತಿ ಕೂಡ ಕಾರಣ ಎಂಬ ಮಾತುಗಳು ಕೇಳಿ ಬರತೊಡಗಿವೆ. ಶಾಸಕರು ಇಫ್ತಾರ್ ಏರ್ಪಡಿಸದಂತೆ ಶ್ರೀಗಳ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಶಾಸಕರು ಇದನ್ನು ನಿರಾಕರಿಸಿದ್ದಾರೆ.
ಪೇಜಾವರ ಶ್ರೀಗಳ ಭಕ್ತರು ನಾವು. ಅವರು ಏನೇ ಮಾಡಿದರೂ ಬ್ಲೈಂಡ್ ಆಗಿ ಒಪ್ಪಿಗೆ ಕೊಡುತ್ತೇವೆ. ಹೀಗಾಗಿ ನಾವು ಅವರ ನಿರ್ಧಾರಕ್ಕೆ ಬದ್ಧ. ನಾನು ಅಡ್ಡಗಾಲು ಹಾಕಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಅಂತ ಹೇಳಿದ್ದಾರೆ.
ಅದೇನೇ ಇರಲಿ, ಓರ್ವ ಸ್ವಾಮೀಜಿಯಾಗಿ ಪೇಜಾವರರು ಯಾವುದೇ ಒತ್ತಡಕ್ಕೂ ಮಣಿಯದೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಇಫ್ತಾರ್ ಒಂದು ವೇದಿಕೆಯಾಗುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.