ಉಡುಪಿಯ ಹುಲಿವೇಷದ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!
ಉಡುಪಿ, ಆಗಸ್ಟ್ 27: ಉಡುಪಿಯಲ್ಲಿ ಅಷ್ಟಮಿ ಹಬ್ಬದ ಆಸುಪಾಸಿನಲ್ಲಿ ಹುಲಿವೇಷಗಳು ಸದ್ದು ಮಾಡುತ್ತವೆ. ದೇಹವನ್ನು ದಂಡಿಸಿ ಅಪಾರ ದೃಢತೆಯಿಂದ ಸಾಕಷ್ಟು ಅಭ್ಯಾಸ ಇದ್ದಾಗ ಮಾತ್ರ ಯಶಸ್ವಿ ಹುಲಿವೇಷ ಹಾಕೋದು ಸಾಧ್ಯ. ಇದೊಂದು ಅಪ್ಟಟ ಕಲೆ. ಎಲ್ಲರಿಗೂ ಈ ಕಲೆ ಸಿದ್ಧಿಸುವುದಿಲ್ಲ.
ಉಡುಪಿಯಲ್ಲಿ ಕೃಷ್ಣಾಷ್ಟಮಿ, ವಿಟ್ಲಪಿಂಡಿಗೆ ಹುಲಿ ವೇಷದ ತಯಾರಿ
Recommended Video
ಅಷ್ಟಮಿಗೂ ಹುಲಿವೇಷಕ್ಕೂ ಬಿಡಿಸಲಾರದ ನಂಟು. ಉಡುಪಿಯ ಅಷ್ಟಮಿ ಸಂಭ್ರಮ ಅಂದರೆ ಹುಲಿ ವೇಷ. ಉಡುಪಿಯ ಹುಲಿವೇಷಧಾರಿಗಳ ವೈವಿಧ್ಯ ಮತ್ತು ಸಾಂಪ್ರದಾಯಿಕತೆ ಇತರ ಕಡೆ ಕಾಣಲು ಸಾಧ್ಯವೇ ಇಲ್ಲ.
ಹುಲಿವೇಷಕ್ಕೆ ಬೇಕು ತಾಳ್ಮೆ, ಶ್ರಮ
ಅನೇಕರು ಭಾವಿಸಿದಂತೆ ಹುಲಿ ವೇಷ ಹಾಕೋದು ಅಷ್ಟು ಸುಲಭ ಅಲ್ಲ. ತಾಸೆ ಡೋಲು ಪೆಟ್ಟು ಬಿದ್ದಾಗ ನಮಗರಿವಿಲ್ಲದೆ ನಮ್ಮ ಕೈಕಾಲು ಸ್ಟೆಪ್ ಹಾಕಬಹುದೇನೋ. ಆದರೆ ಒಂದು ಹುಲಿ ವೇಷ ಹಾಕಬೇಕಾದ್ರೆ ತುಂಬಾ ತಾಳ್ಮೆ ಮತ್ತು ಶ್ರಮ ಬೇಕಾಗುತ್ತದೆ. ವೇಷಧಾರಿ ಮೈಮೇಲೆ ಬಣ್ಣ ಬಳಿದಾಗ ಅದು ಒಣಗುವವರೆಗೂ ನಿಂತಿರಬೇಕು. ಮೈಮೇಲೆ ಪಟ್ಟಿಗಳು ಮುಖದ ಮೇಲೆ ಗೆರೆ ಹೀಗೆ 5 ರಿಂದ 6 ಗಂಟೆ ಬಣ್ಣಕ್ಕಾಗಿ ನಿಲ್ಲಬೇಕು. ಬಣ್ಣದ ಘಾಟು ಮತ್ತು ಉರಿ ನಿಧಾನವಾಗಿ ಏರತೊಡಗುತ್ತದೆ. ಇದರ ಹಿಂಸೆ, ಬಣ್ಣ ಬಳಿಸಿಕೊಂಡವರಿಗೇ ಗೊತ್ತು. ಬಣ್ಣ ಮುಕ್ತಾಯಗೊಂಡ ಬಳಿಕ ಉಳಿದ ಅಲಂಕಾರಗಳನ್ನು ಮಾಡಲಾಗುತ್ತದೆ. ಬಳಿಕ ದೇವರ ಮುಂಭಾಗ ಪೂಜೆ ಸಲ್ಲಿಸಿ ಧೂಪ ಸೇವೆ ನಡೆದು ಹುಲಿವೇಷಧಾರಿಗಳು ಹೆಜ್ಜೆಹಾಕುತ್ತಾರೆ!
ಪೂಜೆ ಸಲ್ಲಿಸಿ ವೇಷಧಾರಿಗಳ ನಗರ ಸಂಚಾರ
ಹೌದು, ಉಡುಪಿಯಲ್ಲಿ ಹುಲಿವೇಷ ಅಧಿಕೃತವಾಗಿ ಪ್ರಾರಂಭವಾಗೋದೇ ರಥಬೀದಿಯಲ್ಲಿ. ಅದು ಕೂಡ ಅಷ್ಟಮಿಯ ದಿನದಂದು. ಹಬ್ಬದ ದಿನ ದೇವರಿಗೆ ಪೂಜೆ ಸಲ್ಲಿಸಿಯೇ ಹುಲಿವೇಷಧಾರಿಗಳು ನಗರ ಸಂಚಾರ ಪ್ರಾರಂಭಿಸುವುದು ಪದ್ಧತಿ. ಒಂದರ್ಥದಲ್ಲಿ ಅಷ್ಟಮಿ ಬಳಿಕವೇ ಹುಲಿ ವೇಷ ಸಂಚಾರ ಆರಂಭವಾಗುತ್ತದೆ.
ವಿಡಿಯೋ ವೈರಲ್; ಉಡುಪಿಯಲ್ಲಿ ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿದ ರಕ್ಷಿತ್ ಶೆಟ್ಟಿ
ಹುಲಿವೇಷಧಾರಿಗಳ ಸಾಮಾಜಿಕ ಬದ್ಧತೆ
ರಾತ್ರಿಯಿಡೀ ನಿದ್ದೆ ಬಿಟ್ಟು ದಿನವಿಡೀ ಕುಣಿದು ಹಣ ಸಂಗ್ರಹಿಸುವ ಈ ಕಲಾವಿದರ ಔದಾರ್ಯವೂ ಮೆಚ್ಚುವಂತಹದ್ದು. ಹಿಂದೆಲ್ಲ ಮನರಂಜನೆಗೇ ಸೀಮಿತವಾಗಿದ್ದ ಹುಲಿವೇಷ ಕಲೆ, ಈಗ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದೆ. ಮನೋರಂಜನೆಯ ಜೊತೆ ಸಮಾಜ ಸೇವೆಯ ಗುರಿಯನ್ನೂ ಹೊಂದಿದೆ. ಸಹಾಯ ಮಾಡೋ ಮನಸಿದ್ರೆ ಹೇಗೂ ಸಹಾಯ ಮಾಡಬಹುದು ಅನ್ನೋದಿಕ್ಕೆ ಉಡುಪಿಯ ಹುಲಿ ವೇಷಧಾರಿಗಳೇ ಸಾಕ್ಷಿ. ತಮ್ಮ ಊರಿನ ಬಡ ಮಕ್ಕಳ ಶಿಕ್ಷಣಕ್ಕಾಗಿ ಉಡುಪಿಯ ಯುವ ಟೈಗರ್ಸ್ ಹುಲಿ ವೇಷ ಹಾಕಿ ಹಣ ಸಂಗ್ರಹಿಸುತ್ತಿದೆ. ಈತನಕ ಸುಮಾರು ಎರಡು ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿದೆ ಕೂಡ. ಈ ಹಣವನ್ನು ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಿದ್ದಾರೆ ಈ ಕಲಾವಿದರು.
ನೆಲದ ಗೌರವ ಹುಲಿವೇಷ
ಹುಲಿವೇಷ ಎಂಬ ಕಲೆ ಕರಾವಳಿಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ವರ್ಷದಲ್ಲಿ ಕೆಲವೇ ದಿನಗಳ ಕಾಲ ನೋಡಲು ಸಿಗುವ ಹುಲಿವೇಷಗಳು, ಈ ಭಾಗದ ಜನರಲ್ಲಿ ವಿಶೇಷ ಗೌರವವನ್ನೂ ಉಳಿಸಿಕೊಂಡಿದೆ. ಬದಲಾದ ಕಾಲಘಟ್ಟದಲ್ಲೂ ಕಲಾ ಸಂಭ್ರಮವನ್ನು ಉಳಿಸುವುದರ ಜೊತೆಗೆ ಸಮಾಜ ಸೇವೆ ಮಾಡುವ ಈ ಕಲಾವಿದರ ಕೈಂಕರ್ಯವನ್ನು ಮೆಚ್ಚಲೇಬೇಕು.