ಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರು
Recommended Video
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೇವಸ್ಥಾನಕ್ಕೆ ಹೇಗೆ ಪ್ರಾಮುಖ್ಯತೆಯಿದೆಯೋ, ದೈವಸ್ಥಾನಕ್ಕೂ ಆಷ್ಟೇ ಮಹತ್ವವಿದೆ. ದೈವಗಳನ್ನು ನಂಬದ ಕುಟುಂಬಗಳೇ ಇಲ್ಲದ ಈ ಎರಡು ಜಿಲ್ಲೆಗಳಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆ ಪ್ರಮುಖ ಧಾರ್ಮಿಕ ಪೂಜಾ ಪದ್ದತಿಗಳು.
ಸೀಮೆಯ ಭೂತ, ಗುತ್ತಿನ ಭೂತ, ಗ್ರಾಮದ ಭೂತ, ಕುಟುಂಬದ ಭೂತ ಈ ರೀತಿ ವರ್ಗೀಕರಣಗೊಂಡು, ಪಂಜುರ್ಲಿ, ಬಬ್ಬುಸ್ವಾಮಿ, ಕೊರಗಜ್ಜ, ಬೈದರ್ಕಳ, ರಕ್ತೇಶ್ವರಿ, ಗುಳಿಗ ಹೀಗೆ ಸುಮಾರು 400ಕ್ಕೂ ಹೆಚ್ಚು ದೈವಗಳನ್ನು ವಿವಿಧ ಕುಟುಂಬಗಳು ಪೂಜಿಸಿಕೊಂಡು ಬರುತ್ತಿವೆ.
ಕೊರಗಜ್ಜ ದೈವಕ್ಕೆ ಅವಮಾನ ಮಾಡಿದ್ದ ವ್ಯಕ್ತಿಯಿಂದ ಕ್ಷಮೆ
ಕಳೆದ ಅಕ್ಟೋಬರ್ ತಿಂಗಳಲ್ಲಿ, ಈ ಭಾಗದಲ್ಲಿ ಕಾರ್ಣಿಕ ಎಂದೇ ಹೇಳಲಾಗುವ ಕೊರಗಜ್ಜನ ದೈವಸ್ಥಾನದ ಅಮೂಲ್ಯ ಆಭರಣಗಳನ್ನು ಕಳ್ಳರು ಲಪಟಾಯಿಸಿದ್ದರು. ಮೊನ್ನೆ ಮಕರ ಸಂಕ್ರಾಂತಿಯ ದಿನ ಕದ್ದ ಆಭರಣಗಳನ್ನು ಕಳ್ಳರು ದೈವಗುಡಿಯ ಮುಂದೆಯಿಟ್ಟು 'ಕ್ಷಮೆಕೊರ್ಲಾ' (ಕ್ಷಮಿಸಿಬಿಡು) ಎಂದು ಒಕ್ಕಣೆ ಬರೆದಿಟ್ಟು ಹೋಗಿದ್ದಾರೆ.
ಉಡುಪಿ ಹೊರವಲಯದ ಕಟಪಾಡಿಯಲ್ಲಿರುವ ಕೊರಗಜ್ಜನ ದೈವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕರಾವಳಿ ಭಾಗದಲ್ಲಿ 'ಅಜ್ಜ' ಎಂದೇ ಕರೆಯಲ್ಪಡುವ ಸ್ವಾಮಿ ಕೊರಗಜ್ಜನ ದೈವಸ್ಥಾನದಲ್ಲಿ ಕಳೆದ ವರ್ಷ ಅಕ್ಟೋಬರ್ ಎರಡರಂದು ಕಳ್ಳತನದ ಘಟನೆ ನಡೆದಿತ್ತು.
ಮಕರ ಸಂಕ್ರಾಂತಿಯ (ಜ 15) ದಿನ ಕದ್ದ ದೈವಸ್ಥಾನದ ಬೆಳ್ಳಿ ಆಭರಣಗಳನ್ನು ಕಳ್ಳರು ತಂದಿಟ್ಟು ಹೋಗಿದ್ದಾರೆ. ಇನ್ನೂ ಆಭರಣಗಳು ಬರಬೇಕಾಗಿದ್ದು, ಕೊರಗಜ್ಜನ ದಯೆಯಿಂದ ಕಳ್ಳರು ಅದನ್ನೂ ತಂದಿಡುತ್ತಾರೆನ್ನುವ ವಿಶ್ವಾಸವನ್ನು ಕೊರಗಜ್ಜನ ಭಕ್ತರು ಹೊಂದಿದ್ದಾರೆ. ಮುಂದೆ ಓದಿ..
ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರೆ, ಕೊರಗಜ್ಜನಿಗೆ ಹರಕೆ
ಕೊರಗಜ್ಜನನ್ನು ಕರಾವಳಿಯ ಉತ್ತರ ಭಾಗದಲ್ಲಿ ಸ್ವಾಮಿ ಕೊರಗಜ್ಜ ಎಂದು, ದಕ್ಷಿಣ ಭಾಗದಲ್ಲಿ ನೀಚಸ್ವಾಮಿ ಎಂದು ಆರಾಧಿಸುವ ಪದ್ದತಿಯಿದೆ. ಈ ಭಾಗದಲ್ಲಿ ಏನಾದರೂ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರೆ, ಕೊರಗಜ್ಜನಿಗೆ ಕಾಣಿಕೆ ಅಥವಾ ಮದ್ಯದ ಹರಕೆಯನ್ನು ಹೊರುವ ಪದ್ದತಿಯಿದೆ. ಕಳೆದುಕೊಂಡ ವಸ್ತುಗಳು ಸಿಕ್ಕನಂತರ ಎರಡು ಜಿಲ್ಲೆಗಳಲ್ಲಿ ಅಲ್ಲಲ್ಲಿರುವ ಕೊರಗಜ್ಜನ ದೈವಸ್ಥಾನದಲ್ಲಿ ಹರಕೆಯನ್ನು ತಪ್ಪದೇ ತೀರಿಸುವ ಬೇಕಾದಷ್ಟು ಉದಾಹರಣೆಗಳಿವೆ. ಕೊರಗಜ್ಜನ ಮೂಲಸ್ಥಾನ ಮಂಗಳೂರು ಬಳಿಯ ಕೊಣಾಜೆ (ತೊಕ್ಕೊಟ್ಟು) ಬಳಿಯಿದೆ.
ಅಷ್ಟಮಂಗಲ ಪ್ರಶ್ನೆಯಲ್ಲೂ ನುಡಿಯಲಾಗಿತ್ತು
ಮಕರ ಸಂಕ್ರಾಂತಿಯ ದಿನದಂದು ಕಳ್ಳರು ಉಡುಪಿ ಬಳಿಯ ಕಟಪಾಡಿ ಏಣಗುಡ್ಡೆಯಲ್ಲಿ ವಾಪಸ್ ತಂದಿಡುವುದಕ್ಕೂ ಮುನ್ನ ನಡೆದಿದ್ದ ಅಷ್ಟಮಂಗಲ ಪ್ರಶ್ನೆಯಲ್ಲೂ, ಕದ್ದ ಕೊರಗಜ್ಜನ ಆಭರಣಗಳು ವಾಪಸ್ ಬರುತ್ತದೆ ಎಂದು ನುಡಿಯಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ವ್ಯಕ್ತಿ
ಕೊರಗಜ್ಜ ದೈವಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ವ್ಯಕ್ತಿಯು ಕೊರಗಜ್ಜ ದೈವ ಸನ್ನಿಧಾನಕ್ಕೆ ತೆರಳಿ, ಹರಕೆ ಒಪ್ಪಿಸಿ, ಕ್ಷಮೆ ಯಾಚಿಸಿದ ಘಟನೆ ನಡೆದಿತ್ತು. ಶಿರಸಿ ಮೂಲದ ಮನೋಜ್ ಪಂಡಿತ್ ಎಂಬಾತ ಕೆಲ ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ತುಳುನಾಡಿನ ಕಾರಣಿಕ ದೈವ ಎಂದೇ ನಂಬಲಾಗಿರುವ ಸ್ವಾಮಿ ಕೊರಗಜ್ಜಗೆ ಕೀಳು ಭಾಷೆ ಬಳಸಿ, ಬರಹ ಪೋಸ್ಟ್ ಮಾಡಿದ್ದ.
ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು
ಕೊರಗ ಜನಾಂಗದ ಸಾಂಸ್ಕೃತಿಕ ನಾಯಕ ಹಾಗೂ ಕುಲದೈವ, ಉಳ್ಳಾಲ ಬಳಿಯ ಕೊರಗಜ್ಜನ ದೈವಸ್ಥಾನದ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು. ಘಟನೆ ನಡೆದ 24 ಗಂಟೆಯಲ್ಲಿ ಎಲ್ಲರೂ ಬಂದು ಕೊರಗಜ್ಜಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿದ್ದರು.
ಮೂರ್ತಿ ಮತ್ತು ಇತರ ಪ್ರಭಾವಳಿಗಳು ಕಳ್ಳತನಗೊಂಡಿದ್ದವು
2015ರಲ್ಲಿ ಮಂಗಳೂರು ಹೊರವಲಯದ ವಾಮಂಜೂರಿನ ಕೊರಗಜ್ಜ ದೈವಸ್ಥಾನದಲ್ಲಿ ಮೂರ್ತಿ ಮತ್ತು ಇತರ ಪ್ರಭಾವಳಿಗಳು ಕಳ್ಳತನಗೊಂಡಿದ್ದವು. ದೈವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ಆಭರಣಗಳು ಪಕ್ಕದ ಗುಡ್ಡಪ್ರದೇಶದಲ್ಲಿ ಎರಡು ದಿನದ ನಂತರ ಪತ್ತೆಯಾಗಿದ್ದವು.