"ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ''
ಉಡುಪಿ, ಫೆಬ್ರವರಿ 17: ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ, ಅದೊಂದು ನೋಂದಣಿಯಾಗಿರುವ ಸಂಸ್ಥೆ. ನೋಂದಾವಣೆಗೆ ಅದರದ್ದೆಯಾದ ನೀತಿ ನಿಯಮಾವಳಿಗಳು ಇವೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನು ಇದ್ದು, ನಮಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ. ಪಾರರ್ದಶಕತೆ ಖಂಡಿತವಾಗಿ ಬೇಕೆ ಬೇಕು. ಸಂಶಯಗಳನ್ನು ಮುಂದೆ ಇಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಗೆ ಪೇಜಾವರ ಶ್ರೀ ತೀಕ್ಷ್ಣ ಪ್ರತಿಕ್ರಿಯೆ
ರಾಮ ಮಂದಿರ ನಿರ್ಮಾಣದಲ್ಲಿ ಮುಚ್ಚುಮರೆಯ ಯಾವುದೇ ವಿಷಯಗಳು ನಡೆಯುವುದಿಲ್ಲ. ಎಲ್ಲವೂ ಆಡಿಟ್ ಆಗಿ ಅದಕ್ಕೆ ಬೇಕಾಗಿರುವಂತಹ ಪುರಾವೆಗಳನ್ನು ಕೊಡಲು ಸಾಧ್ಯವಿದೆ. ಹಾಗಾಗಿ ಯಾವುದೇ ಸಂಶಯಗಳನ್ನು ಇಟ್ಟು, ಆರೋಪ ಮಾಡುವುದು ಸೂಕ್ತವಲ್ಲವೆಂದು ಆರೋಪಗಳಿಗೆ ಉತ್ತರಿಸಿದರು.
ರಾಮ ಜನ್ಮಭೂಮಿ ಟ್ರಸ್ಟ್ ನಂತೆ ಅಧಿಕೃತವಾಗಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ನ ಕಾರ್ಯರ್ತರಿಗೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ವಿಹಿಂಪ ಮುಖ್ಯಸ್ಥರು ಆಯಾ ಊರಿನಲ್ಲಿ ದೇಣಿಗೆ ಸಂಗ್ರಹ ನಿರತರಾಗಿದ್ದಾರೆ ಎಂದು ಪೇಜಾವರ ಶ್ರೀ ತಿಳಿಸಿದರು.
ಹಿರಿಯ, ಮುಂದಾಳುಗಳ ನೇತೃತ್ವದಲ್ಲಿ ಕಾರ್ಯಕರ್ತರಯ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ವಿಹಿಂಪ ಪುಂಡು-ಪೋಕರಿಗಳ ಸಂಸ್ಥೆಯಲ್ಲ, ಇದು ಅಧಿಕೃತ ಸಂಸ್ಥೆ. ಹಾಗಾಗಿ ಇಂತಹ ಮಾತು ಬಳಸುವುದು ಯುಕ್ತವಲ್ಲ, ಸಂಶಯಕ್ಕೆ ಪರಿಹಾರ ಇದೆ ಎಂದು ಉತ್ತರಿಸಿದರು.
ಸಂಶಯ ಇದೆ ಎಂದು ಆರೋಪ ಮಾಡಿದರೆ, ಆರೋಪದಲ್ಲಿಯೇ ಮುಗಿಯುತ್ತದೆ. ಆರೋಪಕ್ಕೆ ಪ್ರತ್ಯಾರೋಪ ಸಿಗುತ್ತದೆ, ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಎಂದು ಉಡುಪಿಯಲ್ಲಿ ಪೇಜಾವರ ಶ್ರೀ ಪ್ರತಿಕ್ರಿಯೆ ನೀಡಿದರು.